Feb 8, 2017

ಸ್ಥಳನಾಮ ಮಾರ್ಪಾಟುಗಳು

 

ಸ್ಥಳನಾಮ ಮಾರ್ಪಾಟುಗಳು

ಭಾರತ ದೇಶದಲ್ಲಿ ಆರ್ಯರು ಪ್ರವೇಶಿಸಿದ ಸಂದರ್ಭದಲ್ಲಿ ಅವರು ನುಡಿಯುತ್ತಿದ್ದ ಭಾಷೆಗೆ ಆರ್ಯಭಾಷೆ ಎಂದು ಕರೆಯೋಣ. ವ್ಯಾಕರಣದ ಕಟ್ಟುಪಾಡು ಇಲ್ಲದಿರುವ ಕಾಲದ ಈ ಭಾಷೆ ಪ್ರಾಕೃತ ಭಾಷೆ (=ಪ್ರಕೃತಿಸಹಜವಾದದ್ದು=natural). ಈ ಭಾಷೆಯನ್ನು ವ್ಯಾಕರಣದ ಶಿಸ್ತಿಗೆ ಒಳಪಡಿಸಿ, ಸಂಸ್ಕರಿಸಿದಾಗ ಇದು ಸಂಸ್ಕರಣಗೊಂಡ ಭಾಷೆ ಆಯಿತು (=ಸಂಸ್ಕರಿತ, ಸಂಸ್ಕೃತ, processed, refined). ‘ಸಂಸ್ಕೃತ’ವೆನ್ನುವದು ಭಾಷೆಯ ಹೆಸರಲ್ಲ, ಭಾಷೆಯ ಸ್ಥಿತಿ. ಪ್ರಾಕೃತ ಅಂದರೆ natural tongue; ಸಂಸ್ಕೃತ ಅಂದರೆ grammered tongue.

ಆರ್ಯರು ಅನಾರ್ಯ ಭಾಷೆಗಳನ್ನು ಪೈಶಾಚಿ ಭಾಷೆ ಎಂದು ಕರೆದರು. ಪೂರ್ವದ್ರಾವಿಡ ಭಾಷೆಗಳೇ ಈ ಪೈಶಾಚಿ ಭಾಷೆಗಳು. ಆರ್ಯರು ಅನಾರ್ಯದೇಶಗಳಲ್ಲಿ ತಮ್ಮ ನೆಲೆಯನ್ನು ಸ್ಥಾಪಿಸತೊಡಗಿದಂತೆ, ಆರ್ಯಭಾಷೆ (ಅಥವಾ ದೇವಭಾಷೆ) ಹಾಗೂ ಪೈಶಾಚಿ ಭಾಷೆಗಳಲ್ಲಿ ಕೊಡುಕೊಳ್ಳುವಿಕೆ ಪ್ರಾರಂಭವಾಯಿತು. ಹೀಗಾಗಿ ಆರ್ಯಭಾಷೆಯಲ್ಲಿ ಹಾಗು ಆರ್ಯಭಾಷೆಯಿಂದ ಉದ್ಭವಿಸಿದ ಭಾಷೆಗಳಲ್ಲಿ ಪೂರ್ವದ್ರಾವಿಡ ಭಾಷೆಯ ಪದಗಳನ್ನು ಕಾಣಬಹುದು. ಗುಜರಾತಿ ಭಾಷೆಗೆ ದ್ರಾವಿಡ ತಳಹದಿ ಇದೆ ಎಂದು ಹೇಳಲಾಗುತ್ತಿದೆ. ಸ್ವತಃ ಸಂಸ್ಕೃತದಲ್ಲಿಯೇ ಅನೇಕ ದ್ರಾವಿಡ ಪದಗಳನ್ನು ಗುರುತಿಸಲಾಗುತ್ತಿದೆ. ಇದರಂತೆಯೇ ಅನಾರ್ಯ ಭಾಷೆಗಳಲ್ಲೂ ಸಹ ಅನೇಕ ಬದಲಾವಣೆಗಳಾದವು.

ಅನಾರ್ಯ ಪ್ರದೇಶಗಳಲ್ಲಿ ನೆಲೆಸಿದ ಆರ್ಯರಿಂದಾಗಿ ಇಲ್ಲಿಯ ಸ್ಥಳನಾಮಗಳು ಅವರ ಉಚ್ಚಾರಣೆಗೆ ತಕ್ಕಂತೆ ಬದಲಾದವು. ಆಂಗ್ಲ ಉಚ್ಚಾರಣೆಯಲ್ಲಿ ‘ಬೆಂಗಳೂರು’ ‘ಬ್ಯಾಂಗ್ಲೋರ್’ ಆದಂತೆ, ‘ಕಡೇವಾಡ’ವು ‘ಕಾರ್ವಾರ್’ ಆದಂತೆ, ಅನೇಕ ಅನಾರ್ಯ ಸ್ಥಳನಾಮಗಳೂ ಸಹ ಗುರುತು ಹತ್ತದಂತೆ ಬದಲಾದವು.

ಕೆಲವು ಉದಾಹರಣೆಗಳು:
೧) ಕಾಳಿ ನದಿಯ ದಂಡೆಯ ಮೇಲಿರುವ ‘ದಂಡಿಹಳ್ಳಿ’ >>>>ದಾಂಡೇಲಿ
೨) ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಚಾಪಿಹಳ್ಳಿ>>>>ಚಾಪೋಲಿ
೩) -----------“”------------------- ಮೀರಹಳ್ಳಿ >>>>>ಮಿರ್ಲೆ
೪) -------------“”---------------- ನಾರುವಳ್ಳಿ >>>>>ನಾರ್ವೆ
೫) ಚೋರಹಳ್ಳಿ >>>>ಚೋರ್ಲೆ
೬) ಸಂಗೊಳ್ಳಿ >>>>ಸಾಂಗ್ಲಿ (ಮಹಾರಾಷ್ಟ್ರ)
೭) ಕಂದವಳ್ಳಿ >>>>>ಕಾಂದೀವ್ಲಿ (ಮುಂಬಯಿ ನಗರದ ಭಾಗ)
೮) ಕಂದಹಾಳ >>>>ಖಂಡಾಲಾ (ಮುಂಬಯಿ ನಗರದ ಹತ್ತಿರ)
೯) ಕಂದಹಾರ >>>ಗಾಂಧಾರ (ಸಂಸ್ಕೃತೀಕರಣ, ಅಫಘಾನಿಸ್ತಾನದಲ್ಲಿ)
೧೦) ಡೊಂಬವಳ್ಳಿ >>>>ಡೊಂಬೀವಲಿ (ಮುಂಬಯಿ ನಗರದ ಭಾಗ)
೧೧) ಡೊಂಬಹಾಳ >>>>ಡಂಬಳ (ಗದಗ ಶಹರದ ಹತ್ತಿರ)
೧೨) ಹೊಂಬಹಾಳ >>> ಹೊಂಬಳ (ಗದಗ ಶಹರದ ಹತ್ತಿರ)
೧೩) ಮೀರಜಿ >>>> ಮಿರಜ (ಮಹಾರಾಷ್ಟ್ರ)
೧೪) ಕೋಲಪುರ >>>ಕೊಲ್ಹಾಪುರ (ಮಹಾರಾಷ್ಟ್ರ)
೧೫) ಕೋಲಕಟ್ಟೆ >>>ಕೊಲ್ಕತ್ತಾ (ಪ.ಬಂಗಾಲ)
೧೬) ಕನ್ನದೇಶ >>> ಖಾನದೇಶ (ಗುಜರಾತ-ರಾಜಸ್ಥಾನ)
೧೭) ಕಾಟವಾಡ >>>ಕಾಠೇವಾಡ ( ಗುಜರಾತ)

ಕನ್ನಡ ಸ್ಥಳನಾಮಗಳಷ್ಟೇ ಅಲ್ಲ, ಕನ್ನಡ ವ್ಯಕ್ತಿನಾಮಗಳೂ ಸಹ ಮಾರ್ಪಾಡಾದವು.
ಉದಾಹರಣೆಗಳು:
ಕರಗ >>>ಖಾರಗೆ, ಘಾರಗಿ
ಕನ್ನ >>>ಖನ್ನಾ
ಕಾತ,ಕಾಟ >>> ಕಾಠೆ, ಕಾಟವೆ
ಕನ್ನಡ >>> ಕಾನಡೆ
ಲಾತ, ಲಾಟ >>> ಲಾಢ, ಲದ್ವಾ

ಬದಲಾಗಲಿ ಬಿಡಿ, ತಪ್ಪೇನೂ ಇಲ್ಲ. ಆದರೆ, ಈ ಮಾರ್ಪಾಡಿಗೆ ಒಳಗಾದವರು ತಮ್ಮ ಪೂರ್ವಸ್ಮೃತಿಯನ್ನು ಪೂರ್ಣವಾಗಿ ಮರೆತಿರುವದು ದುರ್ದೈವದ ಸಂಗತಿ. ಇದು unfortunate racial amnesia!
ಕನ್ನರು ಖನ್ನಾ ಆಗಿ, ತಾವು ಪಂಜಾಬಿಗಳು ಎಂದು ಹೆಮ್ಮೆಪಡುತ್ತಾರೆ. ಕಾನಡೆ ಎನ್ನುವ ಹೆಸರೇ ಸೂಚಿಸುವಂತೆ, ಈ ಜನರು ಕನ್ನಡಿಗರು ಎಂದು (ಮರಾಠಿಗರಿಂದ) ಗುರುತಿಸಲ್ಪಡುತ್ತಿದ್ದರು. ಇವರಲ್ಲೇಕರು ಈಗ ಮರಾಠಿ ಭಾಷಿಕರೇ ಆಗಿ ಬಿಟ್ಟಿದ್ದಾರೆ.

ಸೋತ ಜನಾಂಗಗಳಿಗೆ ಇತಿಹಾಸವಿರುವದಿಲ್ಲ!