Sep 8, 2017

ಪೂರ್ಣಚಂದ್ರ ತೇಜಸ್ವಿ ಮಾತುಗಳು *

Kuvempu Kannada Software – Kannada University
#ತೇಜಸ್ವಿ_ಎಂದೆಂದಿಗೂ

1. ತಲೆ ತಪ್ಪಿಸಿಕೊಂಡು ಎಲ್ಲೋ ಬದುಕಿ ಮುದಿಯಾಗಿ ಕಾರಣವಿಲ್ಲದೆ ಸಾಯುವುದಕ್ಕಿಂತ ಸಕಾರಣವಾದ ಸಾವನ್ನು ಎದುರಿಸುವುದು ಎಷ್ಟೋ ವಾಸಿ.
-ಜುಗಾರಿ ಕ್ರಾಸ್

2. ನಮ್ಮ ಮಾತಿಗೆ ಅರ್ಥ ಬರಬೇಕಾದರೆ ಮಾತನಾಡುವಷ್ಟೇ ಮಾತನಾಡದೆ ಇರುವುದೂ ಅಗತ್ಯ.

3. ನಮ್ಮ ಮಾತಿಗೆ ಅರ್ಥ ಬರುವುದು ನಮ್ಮ ನಡವಳಿಕೆಯಿಂದ

4. ರೈತರು ಎಷ್ಟೇ ಬಡವರಾದರು ಆತ್ಮ ಗೌರವ ಉಳ್ಳವರು
-ಜುಗಾರಿ ಕ್ರಾಸ್

5. ನಂಬಿಕೆಗೆ ಅನರ್ಹವಾಗಿರೋ ಮೊದಲನೇ ಸ್ಪೀಷೀ ಎಂದರೆ ಹೋಮೋಸೆಪಿಯನ್. - ಕರ್ವಾಲೋ

6. ನನಗೆ ಕಾಲ ಕಳೆಯುವುದು ಹೇಗೆಂಬ ಚಿಂತೆಗಿಂತ ಕಾಲ ಕಳೆದು ಹೋಗುತ್ತದಲ್ಲಾ ಎನ್ನುವುದೇ ಚಿಂತೆ
- ಪರಿಸರದ ಕತೆ

7. ಯಾರಿಗೆ ತಾವಿರುವಲ್ಲಿ ಸಂತೋಷ ಉತ್ಸಾಹ ಕುತುಹಲಗಳಿರುವುದಿಲ್ಲವೋ ಅವರು ಅದನ್ನು ಹುಡುಕಿಕೊಂಡು ಎಲ್ಲಿಗೆ ಪ್ರವಾಸ ಹೋಗುವುದು ವ್ಯರ್ಥ. 
- ಅಲೆಮಾರಿಯ ಅಂಡಮಾನ್

8. ಸುಮ್ಮನೆ ನಮಗೆ ಅಗತ್ಯ ಇದ್ದಷ್ಟು ಮಾತ್ರ ತಿಳಿದುಕೊಂಡು, ಮಿಕ್ಕುದ್ದನ್ನ ನೋಡಿ ಅಚ್ಚರಿಪಡುತ್ತ ಇದ್ದು ಬಿಡುವುದು ಒಳ್ಳೆಯದು - ಪರಿಸರದ ಕತೆ

9. ನಮ್ಮ ಪಾಲಿಗೆ ಭೂಮಿ ಹಾಳಾಗುತ್ತದೆಯೇ ಹೊರತು ಅದರ ಪಾಲಿಗಲ್ಲ.

10. ಮುಖ್ಯ ವಿಷಯ ಬಿಟ್ಟು ಅಡ್ಡ ದಾರಿ ತುಳಿಯಬೇಡಿ, ಕೆಲಸಕ್ಕೆ ಬಾರದ ಹರಟೇಲೇ ಮುದುಕರಾಗ್ತಿವಿ, ಕಾಲ ಸರೀತಾ ಇದೆ.
- ಕರ್ವಾಲೋ

11. ಎಷ್ಟನ್ನು ನಾವು ಕಣ್ಣಿಗೆ ಕಂಡರೂ
ನೋಡದೆ ಬಿಟ್ಟಿದ್ದೇವೋ ಏನೋ - ಕರ್ವಾಲೊ

12. ನನ್ನ ಹಾಗೆ ನೀನೂ ಬದುಕು ಎಂದು ಸಲಹೆ ನೀಡಬಹುದೇ ಹೊರತು, ನಾನು ಹೇಗಾದರೂ ಬದುಕುತ್ತೇನೆ, ನೀನು ಹೀಗೆ ಬದುಕು ಎಂದು ಹೇಳುವುದು ಸರಿಯಲ್ಲ.

13. ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ
ಯಾವತ್ತೂ ಭಯಾನಕ ಹೋರಾಟದ ಫಲವೇ ಹೊರತು ಸುಲಭಕ್ಕೆ ಸಿಗುವುದಿಲ್ಲ.

14. ಭಾರತದ ಆಧುನೀಕರಣದ ಕತೆಯೆಂದರೆ ಒಬ್ಬರ ಅನ್ನ ಇನ್ನೊಬ್ಬರು ಕಿತ್ತುಕೊಂಡ ಕತೆ.

15. ನಮ್ಮ ವಿದ್ಯಾಭ್ಯಾಸವೇ ನಮ್ಮ ಹುಡುಗರನ್ನು ಹಳ್ಳಿಗಳಿಗೆ ಪರಕೀಯರನ್ನಾಗಿ ಮಾಡುತ್ತಿರುವ ಉದಾರಣೆಯ ಬೆಳಕಿನಲ್ಲಿ ಯೋಚಿಸಿ.

16. ಒಂದು ದೇಶ ಆಧುನಿಕವಾಗುತ್ತಾ, ಕೈಗಾರಿಕೀಕರಣವಾಗುತ್ತಾ ಹೋದಂತೆ ಕೃಷಿಯನ್ನು ಒಂದು ಜೀವನ ಮಾರ್ಗವೆಂದು ಪರಿಗಣಿಸುವವರು ಅಥವಾ ವ್ಯಕ್ತಿಗಳಲ್ಲಿ ಆ ಮನೋಭಾವ ಕಡಿಮೆಯಾಗುತ್ತಾ ಹೋಗುತ್ತದೆ. ಭೂಮಿ ಕಾರ್ಖಾನೆಯ ಯಂತ್ರದಂತೆ ಉತ್ಪಾದಿಸುವ ಒಂದು ಸಲಕರಣೆಯಾಗುತ್ತದೆ. ಮನುಷ್ಯ ಅಲ್ಲಿ ಬದುಕಿ ಬಾಳಿ ತನ್ನ ಸಾರ್ಥಕ ಕಂಡುಕೊಳ್ಳುವುದು ಪರಿಸರವಾಗಿ ಅಪ್ರಮುಖವಾಗುತ್ತದೆ.

17. ನಮ್ಮ ಆಡಳಿತ ವ್ಯವಸ್ಥೆ ಕೇಂದ್ರೀಕರಣಗೊಳ್ಳುತ್ತಾ ಹೋದಂತೆ ನಮ್ಮ ಗ್ರಾಮಗಳಿಂದಲೂ ರೈತರಿಂದಲೂ ದೂರವಾಗುತ್ತಾ ಪರೋಕ್ಷವಾಗುತ್ತಾ ಹೋಗುತ್ತದೆ.

18. ನಾನು ಕಣ್ಣಿಗೆ ಕಂಡದ್ದನ್ನೆಲ್ಲಾ ಆಸಕ್ತಿಯಿಂದ ಕುತೂಹಲದಿಂದ ನೋಡುತ್ತಾ ತಿಳಿಯುತ್ತಾ ಹೋಗುತ್ತೇನೆ. ಜ್ಞಾನಾರ್ಜನೆಯ ಪ್ರಚಂಡ ಸಂತೋಷ ಇರುವುದು ಇಲ್ಲೇ. - ವಿಮರ್ಶೆಯ ವಿಮರ್ಶೆ

19. ಮಾತೃಭಾಷೆ ಎಷ್ಟೊಂದು ಆಪ್ತ ಮತ್ತು ಆತ್ಮೀಯ. ನಮ್ಮ ಆಲೋಚನೆಗೂ ಅಭಿವ್ಯಕ್ತಿಗೂ ಮಧ್ಯೆ ಕಂದರವೇ ಇರುವುದಿಲ್ಲ.
- ಅಲೆಮಾರಿಯ ಅಂಡಮಾನ್

20. ಒಬ್ಬ ಶ್ರೇಷ್ಠ ಬರಹಗಾರ ಮತ್ತು ಸಾಮಾನ್ಯ ಬರಹಗಾರನ ನಡುವೆ ಇರೋ ವ್ಯತ್ಯಾಸ ಇಷ್ಟೇ. ಶ್ರೇಷ್ಠ ಬರಹಗಾರ ತನ್ನ ವಿರುದ್ಧ ತಾನು ಯೋಚನೆ ಮಾಡೋ ಶಕ್ತಿ ಪಡೆದಿರಬೇಕು.

21. ಅವಾರ್ಡ್ ಫಿಲಂಗಳು ಮತ್ತು ಮಾರುಕಟ್ಟೆ ಫಿಲಂಗಳು ಅಂತ ಖಚಿತವಾದ ವಿಭಾಗವಾದ ಹಾಗೆ ಪ್ರಶಸ್ತಿಗಳ ಹಿಂದೆ ಹೋದ್ರೆ ಪ್ರಶಸ್ತಿಗಾಗಿ ಬರೆದಿರೋ ಸಾಹಿತ್ಯ ಅಂತ ಒಂದು ವಿಭಾಗ ಶುರು ಆಗತ್ತೆ.

22. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ನಾವು ಕನ್ನಡವನ್ನು ಬಲಿಷ್ಠವಾಗಿ ಬೆಳೆಸಲು ಸಾಧ್ಯವಾಗದಿದ್ದರೆ ಕನ್ನಡ ಭಾಷೆ ಉಳಿಯುವುದೇ ಇಲ್ಲ.

23. ನಮ್ಮ ವಿದ್ಯಾಭ್ಯಾಸ ಕ್ರಮವೇ ಸಂಪೂರ್ಣ ತಪ್ಪಾಗಿದೆಯೆಂದು ನನಗನ್ನಿಸುತ್ತದೆ. ಬದುಕುತ್ತಾ ಬದುಕಿಗೆ ಅಗತ್ಯವಾದದ್ದನೆಲ್ಲಾ ತಿಳಿದುಕೊಳ್ಳುತ್ತಾ ಹೋಗುವ ಹೊಸಬಗೆಯ ವಿದ್ಯಾರ್ಜನೆಯ ಮಾರ್ಗಗಳನ್ನು ನಾವು ಅನ್ವೇಷಿಸಬೇಕು.

24. ನನಗೂ ಕಾಡಿಗೂ ಇರುವ ಸಂಬಂಧ ನನ್ನ ತಂದೆ, ತಾಯಿ, ಹೆಂಡತಿ, ಮಕ್ಕಳ ಜೊತೆ ಇರುವ ಸಂಬಂಧದಂತೆ ವಿವರಿಸಲಸಾಧ್ಯವಾದಷ್ಟು ನಿಗೂಢವಾದದ್ದು.

25. ಸಮಾಜವಾದ ಮನುಷ್ಯರೆಲ್ಲರಲ್ಲೂ ಸಮಾನತೆಯನ್ನು ಬೋಧಿಸಿದ್ದರೆ ಇಕಾಲಜಿ ಇಡೀ ವಿಶ್ವದ ಸರ್ವಚರಾಚರ ವಸ್ತುಗಳೂ ಸಮಾನ, ಮುಖ್ಯ ಎಂದು ಸಾಕ್ಷ್ಯಾಧಾರಗಳ ಸಮೇತ ತೋರಿಸಿಕೊಡುತ್ತಿದೆ.

26. ನಾವು ಎಷ್ಟು ಕೆಟ್ಟ ರಾಜಕಾರಣಿಗಳನ್ನೂ ಅಧಿಕಾರಶಾಹಿಯನ್ನೂ ನಿರ್ಮಾಣ ಮಾಡಿದ್ದೇವೆಂದರೆ ಅತಿವೃಷ್ಟಿ, ಅನಾವೃಷ್ಟಿ, ಬರ, ಭೂಕಂಪ, ಯುದ್ಧ ಮೊದಲಾದ ಯಾವುದೇ ವಿಪತ್ತು ಬಂದರೂ ಅದನ್ನು ಸ್ವಾರ್ಥಕ್ಕೆ ಉಪಯೋಗಿಸುತ್ತಾರೆ. ಮುಂದುವರೆದ ರಾಷ್ಟ್ರಗಳ ಕುತಂತ್ರಿ ನೀತಿಯಷ್ಟೇ ಇವರು ನಮಗೆ ಅಪಾಯಕಾರಿಗಳು.

27. ಯಾವ ಭಾಷೆಯಲ್ಲಿ ಸಮಕಾಲೀನ ಸಾಹಿತ್ಯ ಇಲ್ಲವೋ ಅಲ್ಲಿ ಆ ಭಾಷೆಯ ಪ್ರಾಚೀನ ಸಾಹಿತ್ಯ ನಿಧಾನವಾಗಿ ತನ್ನ ಅರ್ಥವಂತಿಕೆಯನ್ನು ಕಳೆದುಕೊಳ್ಳುತ್ತಾ ಬರುತ್ತದೆ. 

28. ನಮ್ಮ ರಾಜಕಾರಣಿಗಳಲ್ಲಿ ಅನೇಕರು ಕೇಂದ್ರೀಕೃತ ಆಡಳಿತ ಪದ್ಧತಿಯ ರುಚಿ ಕಂಡಿದ್ದಾರೆ. ಹಳ್ಳಿಗಳ ಸಂಪತ್ತನ್ನೆಲ್ಲಾ ಸೂರೆ ಹೊಡೆದು ದಿಲ್ಲಿಯಲ್ಲಿ ದರ್ಬಾರು ನಡೆಸುತ್ತಾ ಮಜಾ ಉಡಾಯಿಸುವುದೇ ರಾಜಕಾರಣ ಎಂದು ತಿಳಿದಿದ್ದಾರೆ.

29. ಭಾರತದಲ್ಲಿ ಇರುವುದು ಪ್ರಜಾಪ್ರಭುತ್ವವಾದರೂ ಮಿತಿಮೀರಿದ ಕೇಂದ್ರೀಕರಣದ ದೆಸೆಯಿಂದ ಸರ್ಕಾರದ ಧೋರಣೆಗಳನ್ನು ರೀತಿ ನೀತಿಗಳನ್ನು ರೂಪಿಸುವವರು ಗ್ರಾಮಗಳ ಮತ್ತು ಕೃಷಿಕ್ಷೇತ್ರದ ವಾಸ್ತವಾಂಶಗಳನ್ನು ಗ್ರಹಿಸದಷ್ಟು ದೂರಾಗಿದ್ದಾರೆ.

30. ಕೃಷಿಕ ಭಾರತದಲ್ಲಿ ಮನಸ್ಸು, ಆತ್ಮ, ವ್ಯಕ್ತತ್ವಗಳಿಲ್ಲದ ಕೇವಲ ಉತ್ಪಾದಕನಾಗಿ ಮಾತ್ರ ಅಸ್ತಿತ್ವ ಪಡೆದಿದ್ದಾನೆ.

31. ಲೋಹಿಯಾರವರ ತತ್ವಚಿಂತನೆ, ಕುವೆಂಪುರವರ ಕಲಾಸೃಷ್ಟಿ, ಕಾರಂತರ ಜೀವನದೃಷ್ಟಿ ಮತ್ತು ಬದುಕಿನ ಪ್ರಯೋಗಶೀಲತೆ, ಈ ಮೂರೇ ನನ್ನ ಸಾಹಿತ್ಯದ ಮೇಲೆ ಗಾಢ ಪರಿಣಾಮವನ್ನುಂಟು ಮಾಡಿರುವುವು. 

32. ನನಗೆ ಕಷ್ಟಪಟ್ಟು ಓದಿದ್ದು ಗೊತ್ತೇ ಇಲ್ಲ. ಬರೇ ಕ್ಲಾಸಿನಲ್ಲಿ ಶ್ರದ್ಧೆಯಿಂದ ಪಾಠ ಕೇಳಿ ಮಾತ್ರವೇ ಈವರೆಗೂ ನಾನು ತರಗತಿಗಳಲ್ಲಿ ಪಾಸಾಗಿರುವವನು. ಆದರೆ ನಮಗೆ ಅಂಥ ವಿದ್ಯಾಗುರುಗಳು ದೊರತಿದ್ದರೆಂಬುದು ಇಲ್ಲಿ ಬಹುಮುಖ್ಯ. ಅವರಲ್ಲಿ ಪೂಜ್ಯ ಜಿ ಎಸ್ ಶಿವರುದ್ರಪ್ಪನವರು ಒಬ್ಬರೆಂದು ನಾನು ಹೆಮ್ಮೆಯಿಂದ ಹೇಳಬಲ್ಲೆ.

33. ಕಾಡುಗಳಿಲ್ಲದ, ಕಾಡುಪ್ರಾಣಿಗಳಿಲ್ಲದ ಪರಿಸರವು ಶ್ಮಶಾನಕ್ಕಿಂತ ಭೀಕರವಾಗಿ ಕಾಣುತ್ತವೆ.
- ಪರಿಸರದ ಕತೆ

34. ನನ್ನ ಜೀವನವಿಧಾನವನ್ನು, ಗ್ರಹಿಸುವ ಕ್ರಮವನ್ನು, ಆಲೋಚನೆಯನ್ನು, ಅಭಿವ್ಯಕ್ತಿ ವಿಧಾನವನ್ನು, ಒಟ್ಟಿನಲ್ಲಿ ಇಡೀ ಸಮಗ್ರ ವ್ಯಕ್ತಿತ್ವವನ್ನು ಸಂಪೂರ್ಣ ಬದಲಿಸಿದ್ದು ಲೋಹಿಯಾರವರ ತತ್ವ ಚಿಂತನೆ.

35. ಮತಧರ್ಮ ನಮ್ಮಲ್ಲಿ ಪ್ರಜ್ಞಾಪೂರ್ವಕ ವಲಯದಲ್ಲಿ ಮಾಡುವ ಹಾನಿಗಿಂತ ಭೀಕರವಾದುದು ಪ್ರಜ್ಞಾತೀತ ವಲಯದಲ್ಲಿ ಅದು ಮಾಡುವ ಹಾನಿ.
- ವಿಮರ್ಶೆಯ ವಿಮರ್ಶೆ

36. ಕತೆಯೆಂದರೆ ನಿರಂತರವಾಗಿ ಹರಿಯುವ ಜೀವನಕ್ಕೆ ಒಂದು ಚೌಕಟ್ಟು ಹಾಕುತ್ತದೆಯಷ್ಟೆ.
- ಪೂರ್ಣಚಂದ್ರ ತೇಜಸ್ವಿ, ಕಿರಗೂರಿನ ಗಯ್ಯಾಳಿಗಳು

37. ಪ್ರಕೃತಿ ಮತ್ತು ಪರಿಸರದ ಬಗ್ಗೆ ನನಗೆ ಚಿಕ್ಕಂದಿನಿಂದಲೂ ಇರುವ ಕುತೂಹಲಕ್ಕೆ ಮುಖ್ಯ ಕಾರಣ ನಮ್ಮ ತಂದೆಯವರು

38. ಬೇರೆಯವರನ್ನ ಕೊಂದು ಉಳಿಸಿಕೊಳ್ಳಬೇಕಾದ ಧರ್ಮವೇನಾದರು ಇದೆಯಾ

39. ಭಾವನೆಗಳು, ಆಲೋಚನೆಗಳು ಇಲ್ಲದೆ ಮನುಷ್ಯನ ಮನಸ್ಸಿಗೆ ಅಸ್ಥಿತ್ವವೇ ಇರುವುದಿಲ್ಲ

40. ದೇಶ ಬದಲಾಗಬೇಕೆಂದು ನಾವೆಲ್ಲ ಬಹಿರಂಗದಲ್ಲಿ ಹೇಳುತ್ತೇವೆ. ನಮ್ಮ ಅಂತರಂಗಕ್ಕೂ ಬಹಿರಂಗಕ್ಕೂ ನಡುವಿನ ಕಂದರ ನಾವು ಗಮನಿಸಿರುವುದಿಲ್ಲ.

41. ಹೊಸಹೊಸ ಜೀವನಾನುಭವಗಳು ನಮ್ಮ ಅನುಭವ ವಿಶ್ವಕ್ಕೆ ಸೇರ್ಪಡೆಯಾದಾಗ ಕೇವಲ ಅದರ ಮೊತ್ತ ಹೆಚ್ಚಾಗುವುದಷ್ಟೇ ಅಲ್ಲ, ನಮ್ಮ ಅನುಭವ ವಿಶ್ವದಲ್ಲಿ ಗುಣಾತ್ಮಕ ಬದಲಾವಣೆಯನ್ನೂ ಉಂಟುಮಾಡುತ್ತದೆ, ಎಂದರೆ ಇಡೀ ಅನುಭವ ವಿಶ್ವದ ವ್ಯವಸ್ಥೆಯೇ ಹೊಸದಾಗಿ ಸಂಯೋಜನೆಗೊಳ್ಳುತ್ತದೆ, ಅಥವಾ ನಿರಂತರವಾಗಿ ಸಂಯೋಜನೆಗೊಳ್ಳುತ್ತಲೇ ಇರುತ್ತದೆ.
(ವಿಮರ್ಶೆಯ ವಿಮರ್ಶೆ)

42. ನಾವು ಯಾವ ರೀತಿ ಬದುಕುವುದಿಲ್ಲವೋ ಆ ರೀತಿ ಬೇರೆಯವರು ಬದುಕಲಿ ಎಂದು ಹೇಳುವ ಅಧಿಕಾರ ನಮಗ್ಯಾರಿಗೂ ಇಲ್ಲ

43. ಸಾಮಾಜಿಕ ಜವಾಬ್ದಾರಿ, ದೇಶದ ಬಗ್ಗೆಯ ಕಳಕಳಿ ಬೇರೆಯವರಿಂದ ಅಪೇಕ್ಷಿಸುವಂಥದೇ ಅಲ್ಲ. ನಮ್ಮಲ್ಲೇ ಇರಬೇಕಾದುದು.

44. ಕುವೆಂಪುರವರ ಸಾಮಾಜಿಕ ಕಳಕಳಿ, ಸುಧಾರಣ ದೃಷ್ಟಿ, ವಿಚಾರಶೀಲತೆ ಮೊದಲಾದ ಕ್ರಾಂತಿಕಾರಿ ವ್ಯಕ್ತಿತ್ವವನ್ನು ಮರೆತು ಅವರನ್ನು ಕೇವಲ ಕವಿ ಹಾಗೂ ಕಲಾವಿದ ಎನ್ನುವ ನೆಲೆಯಲ್ಲೇ ನಾವು ಗುರುತಿಸುತ್ತಾ ಹೋದರೆ ಅವರ ಅತಃಸ್ಸತ್ವವನ್ನು ನಾವು ತಪ್ಪಾಗಿ ಪ್ರತಿನಿಧಿಸಿದಂತೆ.

45. ನಮ್ಮ ಅಂತಿಮ ಸವಾಲು ಇರೋದು ಪ್ರಶಸ್ತಿ ಗೆಲ್ಲೋದರಲ್ಲಿ ಅಲ್ಲ, ಓದುಗರನ್ನ ತಲುಪುವುದರಲ್ಲಿ. ಭಾಷೆ, ಸಾಹಿತ್ಯ ಎರಡೂ ಕಮ್ಯೂನಿಕೇಶನ್ಗೆ ಇರೋದು. ಬರೆದು ಗೆಲ್ಲಬೇಕೇ ವಿನಃ ಪ್ರಶಸ್ತಿಯ ಬೆನ್ನು ಹತ್ತಬಾರದು

46. ನಮ್ಮ ಸರ್ಕಾರ, ನಮ್ಮ ಯೋಜನಾ ತಜ್ಞರು, ವಿಜ್ಞಾನಿಗಳು ಎಲ್ಲರ ಧೊರಣೆಯೂ ಕೃಷಿಯನ್ನು ಕೇವಲ ಉತ್ಪಾದನ ವಿಧಾನವೆಂದೇ ಪರಿಗಣಿಸುತ್ತದೆ. ರೈತ ಅವರ ದೃಷ್ಟಿಯಲ್ಲಿ ಬೋನಿನಲ್ಲಿ ಬೆಳೆಯುವ ಬ್ರಾಯ್ಲರ್ ಕೋಳಿಯಂತೆ ಕೇವಲ ಉತ್ಪಾದಕ. 

47. ರೈತರನ್ನು ಈ ದೇಶದ ಕೇವಲ ‌ಉತ್ಪಾದಕರೆಂದು ಮಾತ್ರ ಪರಿಗಣಿಸಿ ಬೆಲೆ ನಿಗದಿ ಮಾಡುತ್ತಾರೇ ಹೊರತು ಆತನೂ ಈ ದೇಶದ ಬಳಕೆದಾರ ಎಂಬ ಕಲ್ಪನೆ ದೆಹಲಿ‌ ಸೆಕ್ರೆಟರಿಯೇಟಿನ ಪುರೋಹಿತರಿಗೆ ಹೊಳೆಯುವುದೇ ಇಲ್ಲ.
ರೈತನೊಬ್ಬ ಟಿವಿ ಬಳಕೆದಾರನಾಗಬೇಕನ್ನುವುದಾಗಲಿ ಮಾರುತಿ ಕಾರಿನ ಗಿರಾಕಿ ಎನ್ನುವುದಾಗಲಿ ಈ ಪುರೋಹಿತರ ಊಹೆಗೂ ನಿಲುಕುವುದಿಲ್ಲ. ಆದ್ದರಿಂದಲೇ ಬೆಲೆ ನಿಗದಿ ಮಾಡುವಾಗ ರೈತ ಮುಂದಿನ ವರ್ಷವೂ ಬದುಕಿ ತಮಗೆ ಊಟ ಹಾಕುವುದಕ್ಕೆ ಎಷ್ಟು ಬೆಕೋ ಅಷ್ಟನ್ನು ಮಾತ್ರವೇ ಅವನಿಗೆ ನೀಡುತ್ತಾರೆ. ಇದರಿಂದಲೇ ನಮ್ಮ ನಾಡಿನ ಇಡೀ ರೈತಸಮುದಾಯ ಗದ್ದೆಯಲ್ಲಿ ನೇಗಿಲೆಳೆಯುವ ಎತ್ತಿನ ಸ್ಥಿತಿಗೆ ಹೋಗಿರುವುದು.

48. ರೈತನಿಗೆ ಹಸಿರು ಕ್ರಾಂತಿ ಮಾಡುವಂಥ ಬ್ಯಾಂಕಿನ ಸಹಾಯವು ಏಳು ಸಮುದ್ರಗಳಾಚೆ ಇರುವ ಏಳು ಸುತ್ತಿನ ಕೋಟೆಯೊಳಗೆ ಸರ್ಪ ಕಾವಲಿನಲ್ಲಿರುವ ಅಲಭ್ಯ ಗಂಟಾಗಿ ಹೋಗಿದೆ.

49. ಕಾಡು ಕಾಳದಂಧೆಗಳ ತವರುಮನೆಯಾಗುತ್ತಿದೆ. ಕಾಡಿನಿಂದ ಉತ್ಪತ್ತಿಯಾಗುತ್ತಿರುವ ಕಾಳಧನ ನಮ್ಮ ದೇಶದ ಅತ್ಯುನ್ನತ ರಾಜಕೀಯವನ್ನು ಸಹ ನಿಯಂತ್ರಿಸುತ್ತಿದೆ. ಇಲ್ಲಿ ಕಟ್ಟುವ ಅಣೆಕಟ್ಟಗಳಾಗಲಿ, ಮುಳುಗಡೆಯಾಗುವ ಕಾಡುಗಳಾಗಲಿ, ಕಲ್ಲು, ಅದಿರುಗಳನ್ನು ತೆಗೆಯುವುದಾಗಲೀ ಜನಗಳಿಗಿಂತಲೂ ಹೆಚ್ಚಾಗಿ ರಾಜಕಾರಣಿಗಳಿಗೂ ರಾಜಕೀಯಕ್ಕೂ ಅಗತ್ಯವಾಗತೊಡಗಿದೆ. ಕಾಳವ್ಯವಹಾರಗಳ ವಿಷವೃತ್ತ ಈ ಮಟ್ಟ ತಲುಪಿದಮೇಲೆ ಕಾನೂನು ಮತ್ತು ನ್ಯಾಯಾಲಯಗಳು ಇದನ್ನು ಪ್ರತಿರೋಧಿಸಲಾರವು.
- ಜುಗಾರಿ ಕ್ರಾಸ್

50. ಭಾರತೀಯ ಕೃಷಿರಂಗದಲ್ಲಿ ನೂರಕ್ಕೆ ತೊಂಭತ್ತಕ್ಕಿಂತ ಹೆಚ್ಚು ಜನ ಅನಕ್ಷರಸ್ಥರಿದ್ದಾರೆ ಅಂಥ ಕಡೆಗಳಲ್ಲಿ ಬ್ಯಾಂಕುಗಳು ತಮ್ಮ ವಿಧಿ ವಿಧಾನಗಳನ್ನು ಅತ್ಯಂತ ಸರಳಗೊಳಿಸಬೇಕಾದುದು ಅವಶ್ಯಕ. ಈ ತೆರನಾದ ಸಂಧರ್ಭಗಳಲ್ಲಿ ನಮ್ಮ ಬ್ಯಾಂಕುಗಳು ಇಂಗ್ಲೀಷಿನ ಫಾರ್ಮುಗಳನ್ನು ಅಚ್ಚು ಮಾಡಿಸಿ ಕೊಡುತ್ತಿವೆ.

51. ಯಾವ ವಿಚಾರವನ್ನೂ ಮಾತೃಭಾಷೆಯಲ್ಲಿ ಕಲಿತರೇ ಮಕ್ಕಳು ಸರಿಯಾಗಿ ಗ್ರಹಿಸುವುದು. ಭಾಷೆ ಕಲಿಯುವುದಕ್ಕೂ ಆ ಭಾಷಾಮಾಧ್ಯಮದಲ್ಲಿ ಇತರ ವಿಷಯಗಳನ್ನು ಕಲಿಯುವುದಕ್ಕೂ ವ್ಯತ್ಯಾಸವಿದೆ.

52. ಪ್ರಾದೇಶಿಕ ಪಕ್ಷ ನಮ್ಮ ರಾಜಕೀಯ ಅನಿವಾರ್ಯತೆಯಾಗುವ ದಿನ ಹತ್ತಿರವಾಗುತ್ತಿದೆ. ಇದಕ್ಕೆ ಬರೇ ಕಾವೇರಿ ಒಂದೇ ಕಾರಣ ಅಲ್ಲ. ಜಗತ್ತಿನಾದ್ಯಂತ ದೊಡ್ಡ ದೊಡ್ಡ ರಾಷ್ಟ್ರಗಳು ಆರ್ಥಿಕ ಮತ್ತು ಆಡಳಿತಾತ್ಮಕ ಕಾರಣಗಳಿಂದ ಕುಸಿದು ಸಣ್ಣ ಸಣ್ಣ ರಾಷ್ಟ್ರಗಳಾಗಿ ಇಲ್ಲವೇ ಒಕ್ಕೂಟಗಳಾಗಿ ರೂಪುಗೊಳ್ಳುತ್ತಿವೆ. ಈಗಿನ ರೀತಿಯ ಕೇಂದ್ರೀಕೃತ ಆಡಳಿತ ವ್ಯವಸ್ಥೆಯನ್ನು ಸಾಕಲು ಹಿಂದುಳಿದ ದೇಶಗಳಿಗೆ ಸಾಧ್ಯವೇ ಇಲ್ಲ.

53. ಈ ಅವಾಸ್ತವಿಕ ರಾಷ್ಟ್ರೀಯತೆಯ ದೆಸೆಯಿಂದಾಗಿ ಅಧಿಕಾರಶಾಹಿ ಭೀಕರವಾಗಿದೆ. ಭ್ರಷ್ಟಾಚಾರ ಯೋಜನಾಬದ್ಧ ಪ್ರಗತಿಯನ್ನು ಅರ್ಥಹಿನವನ್ನಾಗಿ ಮಾಡಿದೆ. ಕಾಳಧನ ಉದ್ದೇಶಪೂರ್ವಕ ಬಂಡವಾಳ ಹೂಡಿಕೆಯನ್ನೇ ಸ್ಥಗಿತಗೊಳಿಸಿದೆ.

54. ಕಾವೇರಿ ನೀರಿನ ಬಗ್ಗೆ ಕರ್ನಾಟಕದ ಹಿತಾಸಕ್ತಿಗಳ ಬಗ್ಗೆ ಕಾಳಜಿ ತೋರಿಸುತ್ತಿರುವವರು ಶಾಸಕರ ರಾಜೀನಾಮೆಗೆ ಆಗ್ರಹ ಪಡಿಸುವುದಾಗಲಿ ಅವರು ಕೊಡುತ್ತೇನೆಂದು ಹೇಳುವುದಾಗಲಿ ಸರಿ ಎಂದು ನನಗೆ ಅನ್ನಿಸುತ್ತಿಲ್ಲ. ಶಾಸಕರೆಲ್ಲ ರಾಜೀನಾಮೆ ಕೊಟ್ಟು ಮೊನ್ನೆ ಮಾಡಿದ ಹಾಗೆ ಎಲ್ಲ ಪಕ್ಷಗಳು ಬಂದ್ ಗೆ ಕರೆಕೊಟ್ಟು ದೊಂಬಿ ಎಬ್ಬಿಸಿದರೆ ಕರ್ನಾಟಕವನ್ನು ಗಲಭೆ ಪೀಡಿತ ಪ್ರದೇಶ ಎಂದು ಘೋಷಿಸಿ ಒಬ್ಬ ಖದೀಮ ರಾಜ್ಯಪಾಲನನ್ನು ನೇಮಿಸಿ ಚುನಾವಣೆಯೇ ನಡೆಸದೆ
ಕೇಂದ್ರ ಕರ್ನಾಟಕವನ್ನು ವರ್ಷಗಳವರೆಗೆ ಆಳಬಹುದು. ದೊಂಬಿ ಗಲಭೆಗಳಿಂದ ಕರ್ನಾಟಕದಲ್ಲಿ ಇಂಥ ಪರಿಸ್ಥಿಯನ್ನು ರೂಪಿಸುತ್ತೇವೆ.

55. ಆಂಧ್ರ, ತಮಿಳುನಾಡುಗಳಲ್ಲಿ ಬಲವಾದ ಪ್ರಾದೇಶಿಕ ಪಕ್ಷಗಳಿವೆ. ಆದ್ದರಿಂದ ಅವರ ಮಾತಿಗೆ ಕೇಂದ್ರ ಸರ್ಕಾರವಾಗಲೀ ನ್ಯಾಯಮಂಡಳಿಯಾಗಲಿ ಹೆಚ್ಚು ಬೆಲೆ ಕೊಡುತ್ತವೆ. ಕರ್ನಾಟಕ ಈವರೆಗೂ ಅಂಥ ರಾಜಕೀಯ ಪಕ್ಷವನ್ನಾಗಲಿ ರಾಜಕಾರಣಿಯನ್ನಾಗಲಿ ರೂಪಿಸಲಿಲ್ಲ. ಕೇಂದ್ರಕ್ಕೆ ನಜರು ಒಪ್ಪಿಸುವ ಸಾಮಂತರು ಮಾತ್ರ ಇಲ್ಲಿ ಬಂದಿದ್ದಾರೆ. ಕೇಂದ್ರ ಮಂತ್ರಿಗಳಿಗೆ ಭೇಟಿಗೆ ಅವಕಾಶ ಕೊಡದೆ ಜಯಲಲಿತ ಹಿಂದಕ್ಕೆ  ಕಳಿಸಿದರು. ನಮ್ಮವರು ಕರ್ನಾಟಕ ಭವನದಲ್ಲಿ ವಾರಗಟ್ಟಲೆ ತಂಗಿದ್ದು ಭೇಟಿಗೆ ಕಾಯುತ್ತಾರೆ. ಆದ್ದರಿಂದ ಕರ್ನಾಟಕ ಸಹ ತನ್ನ ಪ್ರಾದೇಶಿಕ ಹಿತಾಸಕ್ತಿಯನ್ನು ಪ್ರಧಾನವಾಗಿ ಕಾಯುವ ಒಂದು ರಾಜಕೀಯ ಪಕ್ಷ ರೂಪಿಸಬೇಕು.

56. ಕನ್ನಡದ ಬಗ್ಗೆಯ ನಮ್ಮ ಅಭಿಮಾನಕ್ಕೆ ಎರಡು ಮುಖ ಇದೆ. ಒಂದು ಭಾವನಾತ್ಮಕವಾದುದು. ಕನ್ನಡವನ್ನು ನಾವು ಕನ್ನಡ ತಾಯಿ, ಕನ್ನಡಮ್ಮ, ಭುವನೇಶ್ವರಿ ಎಂದೆನ್ನುತ್ತೇವೆ. ಭಾಷೆಯನ್ನು ನಮ್ಮ ಭಾವಸ್ಪಂದನಕ್ಕೆ, ಹಾಡಿಕೊಂಡು ಕುಣಿಯಲಿಕ್ಕೆ ಉಪಯೋಗಿಸುತ್ತೇವೆ. ಇನ್ನೊಂದು ನಮ್ಮ ಭಾಷೆಯಲ್ಲಿ ನಾವು ಆಲೋಚಿಸಲು, ತಿಳಿಸಲು, ವ್ಯವಹರಿಸಲು, ಜ್ಞಾನವನ್ನು ಶೇಖರಿಸಿ ಮುಂಬರುವ ಅನೇಕ ತಲೆಮಾರುಗಳಿಗೆ ಹಸ್ತಾಂತರಿಸಲು ಉಪಯೋಗಿಸುತ್ತೇವೆ. ಒಂದು ಬಗೆಯ ಉಪಯೋಗವನ್ನು ಭಾವೋಪಯೋಗವೆಂದು, ಇನ್ನೊಂದು ಬಗೆಯ ಉಪಯೋಗವನ್ನು ಲೋಕೋಪಯೋಗವೆಂದು ಕರೆಯುತ್ತೇವೆ. ಭಾಷೆಯ ಈ ಎರಡು ಬಗೆಯ ಉಪಯೋಗಗಳ ಸ್ಪಷ್ಟ ಅರಿವು ಇರದವನು ಭಾಷೆಯ ಬಗ್ಗೆ ಅಂಧಾಭಿಮಾನಿಯಾಗುತ್ತಾನೆ. ಒಂದು ಭಾಷೆಯ ಉಳಿವು ಅಳಿವುಗಳು ಇಂದು ನಿರ್ಧಾರವಾಗುವುದು ಅದು ಎಷ್ಟು ಲೋಕೋಪಯೋಗಿಯಾಗಿ ತನ್ನ ಕಾರ್ಯ ನಿರ್ವಹಿಸಲು ಸಮರ್ಥವಾಗಿದೆ ಎನ್ನುವುದರ ಮೇಲೆ.

57. ಸುಳ್ಳು ಹೇಳದೆ, ಮೋಸ ಮಾಡದೆ, ಅನ್ಯಾಯವೆಸಗದೆ ಇಪ್ಪತ್ತನಾಲ್ಕು ಗಂಟೆ ಕಳೆಯುವುದು ಸಹ ಈ ದೇಶದಲ್ಲಿ ದುರ್ಭರವಾದ ಮಹಾ ಸಾಹಸವಾಗುತ್ತಿದೆ.

58. ನನ್ನ ಮಟ್ಟಿಗಂತೂ ಆತ್ಮಗೌರವವನ್ನು ಬಿಟ್ಟು ಉಳಿಸಿಕೊಳ್ಳಬೇಕಾದ ಯಾವ ಕಲೆಯೂ ಪ್ರಪಂಚದಲ್ಲಿ ಇಲ್ಲ.

59. ಮನುಷ್ಯ ಚಂದ್ರಮಂಡಲಕ್ಕೆ ಹೋಗಿ ಬಂದರೂ ಕ್ಷುದ್ರಬುದ್ಧಿ, ಅಂಧಶ್ರದ್ಧೆ ಮೀರಲು ಸಾಧ್ಯವಾಗಿಲ್ಲ.

60. ಬುದ್ಧಿ ಎಂದರೆ ತಿಳುವಳಿಕೆ ಎಂದರೆ ಇನ್ನೇನು? ಹಳೆಯ ಘಟನೆಗಳ ಹಿನ್ನೆಲೆಯಲ್ಲಿ ವರ್ತಮಾನವನ್ನು ಕುರಿತು ಆಲೋಚಿಸುವುದು ತಾನೆ!
- ಸ್ವರೂಪ

61. ಗ್ರಾಮಾಂತರ ಪ್ರದೇಶಗಳಿಗೆ ಕೃಷಿರಂಗಕ್ಕೆ ಯಾವ ರೀತಿಯಿಂದಲೂ ಅನರ್ಹರಾಗಿರುವ ಪೇಟೆಯ ಸುಶಿಕ್ಷಿತ ವರ್ಗದ ಬ್ಯಾಂಕಿಂಗ್ ಹಾಗೂ ಕಾಮರ್ಸ್ ಪದವೀಧರರುಗಳನ್ನು ಮ್ಯಾನೇಜರುಗಳನ್ನಾಗಿ ಮಾಡಿದರೆ ಬ್ಯಾಂಕು ಕೃಷಿರಂಗದಲ್ಲಿ ಪ್ರಾಧನ ಪಾತ್ರ ವಹಿಸದಂತೆ ಮಾಡುತ್ತಾರೆ. ಮುಂಗಾರಿ ಬೆಳೆ ಎಂದರೇನು? ಹಿಂಗಾರಿ ಬೆಳೆ ಎಂದರೇನು? ತಿಳಿಯದ ಅನೇಕ ಬೃಹಸ್ಪತಿಗಳು ಬ್ಯಾಂಕ್ ಮ್ಯಾನೇಜರುಗಳಾಗಿದ್ದಾರೆ.

62. ರೈತನನ್ನು ಊರಿನ ಶ್ರೀಮಂತರಿಂದ, ಲೇವಾದೇವಿಯಿಂದ ತಪ್ಪಿಸಲಿಕ್ಕಾಗಿಯೇ ಬ್ಯಾಂಕುಗಳು ನಡೆಸುವ ಪ್ರಯತ್ನಕ್ಕೆ ಮತ್ತೆ ಶ್ರೀಮಂತರಿಂದಲೇ ಷ್ಯೂರಿಟಿ ಕೇಳುವುದು ಎಂಥ ಅಸಂಬದ್ಧ ಕಾರ್ಯಕ್ರಮವೆಂದು ತಿಳಿಯುತ್ತದೆ.

63. ಕಾಡುಗಳು ಇವತ್ತು ಬಾಗಿಲು ತೆರೆದಿಟ್ಟ ಖಜಾನೆಗಳಾಗಿವೆ. ಈ ಕಾಡುಗಳ ಒಂದೊಂದೇ ಮರ ಎರಡು ಮೂರು ಲಕ್ಷ ಬೆಲೆಬಾಳುತ್ತವೆ. ಕಲ್ಲು ಕಳ್ಳರಿಗೆ, ಮರಗಳ್ಳರಿಗೆ, ಗಂಧ ಚಕ್ಕೆ ಕಳ್ಳ ಸಾಗಾಣಿಕೆ ಮಾಡುವ  ಖದೀಮರಿಗೆ ಕಣ್ಣು ಹರಿಸಿದಲ್ಲೆಲ್ಲಾ ಹಣ ರಾಶಿ ಬಿದ್ದಿರುವಂತೆ ಕಾಣುತ್ತದೆ. ದುಡ್ಡು ಈ ರೀತಿ ಕೋಡಿ ಬಿದ್ದುರುವಲೆಲ್ಲಾ ಏನೇನು ರೂಪುಗೊಳ್ಳುತ್ತದೆಯೋ ಅದೆಲ್ಲಾ ಸಹ್ಯಾದ್ರಿಯ ಕಾಡಿನೊಳಗೆ ಶುರುವಾಗಿದೆ.
- ಜುಗಾರಿ ಕ್ರಾಸ್

64. ಒಂದು ಕಲಾಕೃತಿಯ ಅಂತಃಸ್ಸತ್ವ ಇರುವುದು ಕಾದಂಬರಿ ಓದಿದಾಗ ಏನೆನ್ನಿಸುತ್ತದೆಯೋ ಅದರಲ್ಲಿ. ನಮ್ಮ ಜೀವನದಲ್ಲಿ ಅನುಭವಗಳ ಮೊತ್ತ ಹೆಚ್ಚುತ್ತಾಹೋದಂತೆ ಕಾದಂಬರಿ ಮೈಗೂಡಿಸಿಕೊಳ್ಳವ ಅರ್ಥಗಳ ಪ್ರಭಾವಳಿ ಮೊದಲ ಓದಿನಲ್ಲಿ ಅನ್ನಿಸಿದ್ದಕ್ಕೆ ಪೂರಕ ಎಂದಷ್ಟೆ ಹೇಳಬಹುದು.
- ಜುಗಾರಿ ಕ್ರಾಸ್

65. ಈ ಶತಮಾನ ನಾಗರಿಕತೆಯ ಹೆಸರಿನಲ್ಲಿ, ನ್ಯಾಯದ ಹೆಸರಿನಲ್ಲಿ, ಸಮಾನತೆಯ ಹೆಸರಿನಲ್ಲಿ, ಸಿದ್ಧಾಂತಗಳ ಹೆಸರಿನಲ್ಲಿ ಯಾವ ಶಿಲಾಯುಗ ಮನುಷ್ಯನೂ ಮಾಡಿಲ್ಲದ ಹೇಯ ಕೃತ್ಯಗಳನ್ನು ಎಸಗಿರುವುದು ಈ ಶತಮಾನಕ್ಕೆ ವಿಷಾದದಿಂದ ವಿದಾಯ ಹೇಳುವಂತೆ  ಪ್ರೇರಿಸುತ್ತದೆ.
- ಮಹಾ ಪಲಾಯನ (ಮುನ್ನುಡಿ)

66. ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ. ನಾವು ಪ್ರಕೃತಿಯ ಒಂದು ಭಾಗ.

67. ಈ ಶತಮಾನದ ಬಹುಪಾಲನ್ನು ಕಾಡಿದ ರಾಜಕೀಯ ಮೂಲಭೂತವಾದದ ಯುಗವೇನೋ ಕೊನೆಯಾಗುತ್ತಿದೆ, ಆದರೆ ಅದರ ಜಾಗವನ್ನು ಧಾರ್ಮಿಕ ಮೂಲಭೂತವಾದ ಆಕ್ರಮಿಸುವ ಲಕ್ಷಣಗಳು ಸ್ಪಷ್ಟವಾಗಿ ಕಾಣುತ್ತಿವೆ. 
- ಮಹಾ ಪಲಾಯನ (ಮುನ್ನುಡಿ)

68. ಜನ ನಮ್ಮ ಪುಸ್ತಕಗಳನ್ನು ಕೊಂಡು ಓದಿ 'ಎಷ್ಟು ಚೆನ್ನಾಗಿ ಬರೆದಿದ್ದೀರಿ' ಎಂದು‌ ಹೇಳುವ ಮಾತುಗಳಿಗಿಂತ ದೊಡ್ಡ ಪ್ರಶಸ್ತಿ ಇಲ್ಲವೇ ಇಲ್ಲ.

69. ನಮ್ಮ ಸರ್ಕಾರಗಳು ರೈತರ ಉತ್ಪನ್ನಗಳಿಗೆ ನ್ಯಾಯಯುತ ಲಾಭಕರ ಬೆಲೆ ನೀಡುವುದೊಂದನ್ನುಳಿದು ಮಿಕ್ಕಿದ್ದನ್ನೆಲ್ಲಾ ಮಾಡುತ್ತವೆ. ಕೃಷಿ ಉತ್ಪಾದನೆ ಹೆಚ್ಚಿಸಲು ಅತಿ ಸೂಕ್ತ ಮಾರ್ಗವೆಂದರೆ ರೈತನಿಗೆ ಲಾಭಕರ ಬೆಲೆಯೇ ಹೊರತು ಮಿಕ್ಕುದೆಲ್ಲಾ ನೀರಿನಲ್ಲಿ ಹೋಮ ಮಾಡಿದಂತೆ.
- ಸಹಜ ಕೃಷಿ

70. ಇಷ್ಟೆಲ್ಲಾ ಸಂಪರ್ಕ ಸಾಧನಗಳಲ್ಲಿ ಕ್ರಾಂತಿಯಾಗಿದ್ದರೂ ಅನುಭವ, ಆಲೋಚನೆ, ವಿಚಾರ, ವಿಷಯಗಳ ಸಂವಹನ ಮತ್ತು ಹಸ್ತಾಂತರಕ್ಕೆ ಅತ್ಯಂತ ಅಗ್ಗದ ಮತ್ತು ಕ್ಷಿಪ್ರ ವಾಹಕಗಳೆಂದರೆ ಇಂದಿಗೂ ಪುಸ್ತಕಗಳೇ.
- ಮಿಲನಿಯಮ್-೧ ಹುಡುಕಾಟ (ಮುನ್ನುಡಿ)

71. ಭಾಷೆ ಎಂದಿಗೂ ಅರ್ಥಕೋಶದ ಅರ್ಥಕ್ಕೆ ಹೊಂದಿಕೊಂಡು ಸ್ಥಗಿತವಾಗಿ ನಿಲ್ಲುವುದಿಲ್ಲ. ನಮ್ಮ ಭಾಷೆಯಲ್ಲಿನ ಎಲ್ಲದರ ಅರ್ಥ ನಾವು ಅದಕ್ಕೆ ಸಂವಾದಿಯಾಗಿ ತೋರುವ ಕ್ರಿಯೆಯ ಮೇಲೆ ನಿಲ್ಲುತ್ತದೆ.
- ಹೊಸ ವಿಚಾರಗಳು

72. "ಮನುಷ್ಯ ಚರಿತ್ರೆಯಿಂದ ಪಾಠ ಕಲಿಯುವುದಿಲ್ಲ" ಎನ್ನುವುದೇ ನಮಗೆ ಚರಿತ್ರೆ ಕಲಿಸುವ ಪಾಠ
- ಹೊಸ ವಿಚಾರಗಳು

73. ನಮ್ಮ ಕಲ್ಪನೆಯ 'ನಮಗೂ' ನಿಜವಾದ ನಮಗೂ ವ್ಯತ್ಯಾಸ ಇರುವುದರಿಂದಲೇ ನಮ್ಮ ಫೋಟೊಗಳು ನಮ್ಮ ಸರಿಯಾದ ಪ್ರತಿಬಿಂಬವಾಗಿಲ್ಲವೆಂದು ಅದನ್ನು ದೂಷಿಸುತ್ತೇವೆ.
- ಅಲೆಮಾರಿಯ ಅಂಡಮಾನ್

74. ಈ ಜಗತ್ತು ವಿಸ್ಮಯಗಳ ಅಕ್ಷಯ ಪಾತ್ರೆ 
- ವಿಸ್ಮಯ ವಿಶ್ವ 

75. ತಾನು ನಿಯಂತ್ರಿಸಲಾಗದ ಅಮೂರ್ತದ ಅಗಾಧತೆಯ ಎದುರು ಮನುಷ್ಯನ ಕ್ರಿಯೆಗಳು ಅರ್ಥಹೀನವಾಗಿಯೂ ಹಾಸ್ಯಾಸ್ಪದವಾಗಿಯೂ ಕಾಣುತ್ತವೆ. 

76. ಯೋಚಿಸಿದಷ್ಟು ಪರಿಸರ ರಹಸ್ಯಮಯವಾಗುತ್ತದೆ. ಸಂಪೂರ್ಣವಾಗಿ ತಿಳಿಯುತ್ತೇನೆಂದು ಹೊರಡುವುದು ಮೂರ್ಖತನವೇ ಸರಿ. ಸುಮ್ಮನೆ‌ ನಮಗೆ ಅಗತ್ಯ ಇದ್ದಷ್ಟು ಮಾತ್ರ ತಿಳಿದುಕೊಂಡು, ಮಿಕ್ಕುದನ್ನು ನೋಡಿ ಅಚ್ಚರಿಪಡುತ್ತ ಇದ್ದು ಬಿಡುವುದು ಒಳ್ಳೆಯದು.

77. ಮನುಷ್ಯ ಪ್ರಾಣಿ ಪ್ರಕೃತಿಯ ಉದ್ದೇಶಪೂರ್ವಕ ಸೃಷ್ಟಿ ಎನ್ನುವುದೇ ಸುಳ್ಳು. ಉದ್ದೇಶಗಳೆಲ್ಲಾ ನಾವೇ ಆರೋಪಿಸಿಕೊಂಡಿರುವುದು. ಈ ಮಿಥ್ಯಾರೋಪವನ್ನು ನೀವು ಬಿಟ್ಟ ಮಾರನೆಯ ಕ್ಷಣವೇ ನಿಮಗೆ ಹೊಸದೊಂದು ವಿಶ್ವರೂಪ ದೃಗ್ಗೋಚರವಾಗುತ್ತದೆ.

78. ತನ್ನ ಮಿತಿಯನ್ನು ಮೀರಿಯೇ ತನ್ನ ಸರಹದ್ದುಗಳನ್ನು ಅರಿಯಬೇಕಾದ ಅನಿವಾರ್ಯತೆ ಸೃಷ್ಟಿಶೀಲ ಬರಹಗಾರನಿಗೆ ಇರುವುದರಿಂದಲೇ ಎಲ್ಲಾ ಕಲಾಸೃಷ್ಟಿಯೂ ಅಪರಿಪೂರ್ಣತೆಯನ್ನು ಅನುಷಂಗಿಕವಾಗಿ ಒಳಗೊಂಡಿರುತ್ತದೆಂದು ನನ್ನ ಭಾವನೆ.