Dec 5, 2008

ಕನ್ನಡ ಭಾಷೆ



ದ್ರಾವಿಡ ಭಾಷೆಗಳಲ್ಲಿ ಬಹಳ ಹಳೆಯದರಲ್ಲಿ ಒಂದಾದ ಕನ್ನಡ ಭಾಷೆ/ನುಡಿಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ ಜನರು ಆಡುನುಡಿಯಾಗಿ ಬಳಸುತ್ತಾರೆ. ಇದು ಭಾರತದ ೨೨ ಅಧಿಕೃತ ಭಾಷೆಗಳಲ್ಲಿ ಒಂದು, ಹಾಗೂ ಕರ್ನಾಟಕ ರಾಜ್ಯದ ಅಧಿಕೃತ/ಸರಕಾರೀ ಭಾಷೆ.

ಪರಿಚಯ

ಕನ್ನಡ ನುಡಿಯನ್ನು ಆಡುಮಾತಾಗಿ ೨೫೦೦ ವರ್ಷಗಳಿಂದ ಬಳಸಲಾಗುತ್ತಿದೆ. ಕನ್ನಡ ಲಿಪಿ ಮತ್ತು ಬರೆಯುವ ಪದ್ಧತಿ ಸುಮಾರು ೧೯೦೦ ವರ್ಷಗಳ ಹಿಂದೆಯೇ ಇದ್ದಿತು. ಕನ್ನಡ ಭಾಷೆಯ ಮೊದಲ ಬೆಳವಣಿಗೆಯು ಇತರ ದ್ರಾವಿಡ ನುಡಿಗಳನ್ನು ಹೋಲುತ್ತದೆ. ನಂತರದ ಶತಮಾನಗಳಲ್ಲಿ ಕನ್ನಡ ನುಡಿಯಲ್ಲಿ, ಸಂಸ್ಕೃತ/ಸಕ್ಕದ, ಪ್ರಾಕೃತ, ಮರಾಠಿ ಮತ್ತು ಪಾರಸೀ ಮುಂತಾದ ಹೊರಭಾಷೆಗಳ ಪ್ರಭಾವದಿಂದ ಕನ್ನಡದಲ್ಲಿ ಹೆಚ್ಚು ಹೆಚ್ಚು ಆ ನುಡಿಗಳ ಪದಗಳು ಬೆರೆತು ಹೋಗಲು ಶುರುವಾಯಿತು.
ಕನ್ನಡ ನುಡಿಯಲ್ಲಿ ಸಂಸ್ಕೃತದಂತೆ ಏಳು ವಿಭಕ್ತಿ ಪ್ರತ್ಯಯಗಳು ಇವೆ ಎಂದು ಹಲವು ವ್ಯಾಕರಣದ ಹೊತ್ತಿಗೆಗಳು ಹೇಳಿದರೂ, ಕನ್ನಡದಲ್ಲಿ ಸಂಸ್ಕೃತದ ಪ್ರಥಮ ಮತ್ತು ಪಂಚಮೀ ವಿಭಕ್ತಿಗಳ ಬಳಕೆ ಬಹಳ ಕಡಮೆ. ಕನ್ನಡದಲ್ಲಿ ವಿಭಕ್ತಿ ಪ್ರತ್ಯಯಗಳನ್ನು ನಾಮಪದದ ಕೊನೆಯಲ್ಲಿ ಪ್ರತ್ಯಯಗಳನ್ನಾಗಿ (postfix) ಸೇರಿಸಲಾಗುವುದು. ಅಲ್ಲದೆ ಸಂಸ್ಕೃತದಲ್ಲಿ ಬಳಕೆಯಾಗುವ ವಿಭಕ್ತಿಯ ಸಂದರ್ಭ, ಸನ್ನಿವೇಶಗಳು ಕನ್ನಡದ ಬಳಕೆಗಿಂತ ವಿಭಿನ್ನ.
ಉದಾ: ಗ್ರಾಮಂ ಗತಃ = ಗ್ರಾಮಕ್ಕೆ ಹೋದನು. "ಗ್ರಾಮಂ" ದ್ವಿತೀಯಾ ವಿಭಕ್ತಿ ಆದರೆ, ಗ್ರಾಮಕ್ಕೆ ಚತುರ್ಥಿ ವಿಭಕ್ತಿ. ಅದನ್ನೇ ಇನ್ನೊಂದು ರೀತಿ ಬರೆದಾಗ, ಗ್ರಾಮಂ ಗತಃ = ಗ್ರಾಮವನ್ನೈದಿದನು. "ಗ್ರಾಮಂ" ದ್ವಿತೀಯಾ ವಿಭಕ್ತಿ ಅಂತೆಯೇ, "ಗ್ರಾಮವನ್ನು" ಕೂಡ ದ್ವಿತೀಯಾ ವಿಭಕ್ತಿಯೇ.
ಹಾಗೆಯೇ ಕನ್ನಡದಲ್ಲಿ ಸಂಸ್ಕೃತದ ವ್ಯಾಕರಣದಂತೆ, ಮೂರು ಲಿಂಗಗಳು (ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕಲಿಂಗ), ಎಂದು ಹೇಳಿದರೂ, ಕನ್ನಡದ ನಿಜ ಸ್ವರೂಪದಂತೆ ಕನ್ನಡದಲ್ಲಿ ನಾಲ್ಕು ಲಿಂಗಗಳನ್ನು(ಗಂಡು, ಹೆಣ್ಣು, ಮಾನುಷ, ಅಮಾನುಷ) ಗುರುತಿಸಬಹುದು. ಈ ಸಂಗತಿ ಕನ್ನಡದ ವಚನಗಳ ಬಗ್ಗೆ ತಿಳಿದಾಗ ಇನ್ನು ತಿಳಿಯಾಗುವುದು.
ಕನ್ನಡವೂ ಬೇರೆ ದ್ರಾವಿಡ ನುಡಿಗಳಂತೆ ಮಾನವರಲ್ಲದ ಎಲ್ಲ ಪ್ರಾಣಿಗಳನ್ನೂ ನಪುಂಸಕಗಳಂತೆ ನೋಡುವುದು.
ಉದಾ: ಎತ್ತು ಬಂದಿತು. ಗೂಳಿ ಗುದ್ದಿತು.
ಕನ್ನಡದಲ್ಲಿ ಎರಡು ವಚನಗಳು (ಏಕ ಮತ್ತು ಬಹು) ಇವೆ. ಏಕವಚನ ರೂಪಗಳು ( ಗಂಡು, ಹೆಣ್ಣು, ಮಾನುಷ, ಅಮಾನುಷ ) ಈ ನಾಲ್ಕು ಲಿಂಗದಲ್ಲಿ ಬರುವುದು.
ಉದಾ:
ಅವನು (ಪುಲ್ಲಿಂಗ, ಮಾನುಷ)
ಅವಳು (ಸ್ತ್ರೀಲಿಂಗ, ಮಾನುಷ)
ಅದು (ಅಮಾನುಷ) (ಆದರೆ 'ಅದು' ಎತ್ತನ್ನು ಕುರಿತು ಇದ್ದರೆ ಆಗ ಅದು ಪುಲ್ಲಿಂಗ, ಹಸುವನ್ನು ಕುರಿತು ಇದ್ದರೆ ಅದು ಸ್ತ್ರೀಲಿಂಗ).

ಸಾಮಾನ್ಯವಾಗಿ ಬಹುವಚನ ರೂಪಗಳ ಮಾನುಷ ಮತ್ತು ಅಮಾನುಷ ಲಿಂಗಗಳಲ್ಲಿ ಮಾತ್ರ ಬರುವುದು. ಉದಾ:
ಅವರು ಬಂದರು; ಇಲ್ಲಿ 'ಅವರು' ಪದವು "ಒಂದಿಷ್ಟು ಮನುಷ್ಯರು" ಎಂದು ಹೇಳುತ್ತದೆ. ಹಾಗೆ
ಅವು ಬಂದವು; ಇಲ್ಲಿ 'ಅವು' ಪದವು "ಒಂದಿಷ್ಟು ಅಮಾನುಷಗಳು" ಎಂದು ಹೇಳುತ್ತದೆ.
ಕನ್ನಡದ ವಿಭಕ್ತಿ, ಲಿಂಗ, ವಚನಗಳು ಸಂಸ್ಕೃತದ ವಿಭಕ್ತಿ, ಲಿಂಗ, ವಚನಗಳಿಗಿಂತ ವಿಭಿನ್ನವಾಗಿದೆ.
ಕನ್ನಡ ಭಾಷೆಯ ಮಾತನ್ನಾಡಲ್ಪಡುವ (ಆಡುಮಾತು) ಮತ್ತು ಬರೆಯಲ್ಪಡುವ (ಬರಹ) ರೂಪಗಳ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ (ಆಗುವುದು-->ಆಗುತ್ತೆ, ಆಗುವುದಿಲ್ಲ-->ಆಗಲ್ಲ, ಇತ್ಯಾದಿ). ಮಾತನ್ನಾಡುವ ಶೈಲಿ, ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸಗೊಳ್ಳುತ್ತದೆಯಾದರೂ (ಮಂಗಳೂರು ಕನ್ನಡ, ಧಾರವಾಡ ಕನ್ನಡ ಇತ್ಯಾದಿ) ಬರವಣಿಗೆಯಲ್ಲಿ ಕರ್ನಾಟಕದಾದ್ಯಂತ ಕನ್ನಡ ಭಾಷೆ ಸರಿಸುಮಾರು ಏಕರೂಪವಾಗಿದೆ. ಸುಮಾರು ಇಪ್ಪತ್ತು ಕನ್ನಡದ ಉಪಭಾಷೆಗಳು ಗುರುತಿಸಲ್ಪಟ್ಟಿವೆ.

ಬೆಳವಣಿಗೆ

ಕನ್ನಡವು ದಕ್ಷಿಣ ಭಾರತದ ಭಾಷೆಗಳ ಮೂಲವೆಂದು ಗುರುತುಸಲ್ಪಟ್ಟಿರುವ ಮೂಲದ್ರಾವಿಡದಿಂದ ಯಾವಾಗ ಆಡುಭಾಷೆಯಾಗಿ ಪರಿವರ್ತಿತವಾಯಿತೆಂದು ಖಚಿತವಾಗಿ ಹೇಳಲು ಅಸಾಧ್ಯ. ತಮಿಳು ಭಾಷೆಯು ದ್ರಾವಿಡ ಭಾಷೆಯಿಂದ ಬೇರ್ಪಟ್ಟ ಸಮಯದಲ್ಲಿಯೇ ಕನ್ನಡವು ಕೂಡ ಆಡುಭಾಷೆಯಾಗಿ ಬೇರ್ಪಟ್ಟಿತೆಂದು ಹೇಳಲಾಗುತ್ತದೆ. ಈ ಭಾಷೆಯ ಲಿಪಿಯು ಸುಮಾರು ೧೫೦೦-೧೬೦೦ ವರ್ಷಗಳಿತಿಂತಲೂ ಹಳೆಯದು.ಐದನೆಯ ಶತಮಾನದ ಹಲ್ಮಿಡಿ ಶಾಸನದ ಸಮಯಕ್ಕಾಗಲೇ ಕನ್ನಡವು ಸಾಕಷ್ಟು ಅಭಿವೃದ್ಧಿ ಹೊಂದಿತು. ಲಿಪಿಯ ಉಗಮದ ಇತಿಹಾಸವನ್ನು ಗಮನಿಸಿದರೆ, ತಮಿಳಿಗಿಂತಲೂ ಕನ್ನಡದ ಲಿಪಿಯೇ ಮೊದಮೊದಲಿಗೆ ಹೆಚ್ಚು ಪ್ರವರ್ಧಮಾನಕ್ಕೆ ಬಂದಂತೆ ಕಾಣಿಸುತ್ತದೆ.
ಕನ್ನಡದ ಭಾಷಾ ಪರಿಣತರು ಕನ್ನಡ ಸಾಹಿತ್ಯದ ಬೆಳವಣಿಗೆಯನ್ನು ಅಭ್ಯಾಸ ಮಾಡಲು ಕೆಲವು ಕಾಲಮಾನಗಳನ್ನು ನಿರ್ಧರಿಸಿದ್ದಾರೆ.
  1. ಪೂರ್ವದ ಹಳಗನ್ನಡ ಅನಿಶ್ಚಿತ ಪ್ರಾರಂಭದಿಂದ ೭ನೆಯ ಶತಮಾನದವರೆಗೆ
  2. ಹಳಗನ್ನಡ ೭ ರಿಂದ ೧೨ ನೆಯ ಶತಮಾನದವರೆಗೆ
  3. ನಡುಗನ್ನಡ ೧೨ ನೇ ಶತಮಾನದ ಪ್ರಾರಂಭದಿಂದ ೧೬ನೇ ಶತಮಾನದವರೆಗೆ
  4. ಹೊಸಗನ್ನಡ ೧೬ನೆಯ ಶತಮಾನದ ಆದಿಯಿಂದ ಈಚೆಗೆ
ಕಳೆದ ಶತಮಾನದಲ್ಲಿ ಆಗಿರುವ ಅತಿವ್ಯಾಪಕವಾದ ಕನ್ನಡದ ಅಭಿವೃದ್ಧಿಯನ್ನು ಗಮನಿಸಿದರೆ ೨೦ನೆಯ ಶತಮಾನದಿಂದ ಈಚಿನ ಕಾಲವನ್ನು ಆಧುನಿಕ ಕನ್ನಡ ಎಂದು ಹೊಸ ಯುಗವಾಗಿ ಪರಿಗಣಿಸಬೇಕಾಗುತ್ತದೆ. ಕನ್ನಡ ಭಾಷೆಯು ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆಯಲು ಅರ್ಹವಾಗಿದೆ. ಅಂತರ್ಜಾಲದಲ್ಲಿ ಕನ್ನಡ ಭಾಷೆಯನ್ನು ಯಥೇಚ್ಛವಾಗಿ ಉಪಯೋಗಿಸಲಾಗುತ್ತಿದೆ..

ಕನ್ನಡ ಭಾಷೆ ಮತ್ತು ಕನ್ನಡ ಅಂಕೆಗಳ ಬೆಳವಣಿಗೆ

ಕುಮುದೇಂದು ಮುನಿ ರಚಿಸಿದ ಸಿರಿಭೂವಲಯ ಗ್ರಂಥದ ಆಧಾರದಿಂದ ಕನ್ನಡ ಭಾಷೆ ಗುಪ್ತಭಾಷೆಯಾಗಿದ್ದಿತು(ಬ್ರಹ್ಮರ್ಷಿ ದೇವರಾತರ ಪ್ರಕಾರ ವೇದ ಕಾಲದಿಂದಲೂ ೪ ಗುಪ್ತ ಭಾಷೆಗಳಿವೆಯಂತೆ ಅದರಲ್ಲಿ ಕನ್ನಡ ಭಾಷೆಯೂ ಒಂದು ಎಂದು ಅನಿಸುತ್ತದೆ) ಸೊನ್ನೆಯಿಂದಲೇ ಎಲ್ಲಾ ಅಂಕೆಗಳನ್ನು ಮತ್ತು ಅಕ್ಷರಗಳನ್ನು ಸೃಷ್ಟಿಸಲಾಯಿತು ಮತ್ತು ಕನ್ನಡ ಭಾಷೆಗೆ ವಿಶ್ವದ ಎಲ್ಲಾ ಭಾಷೆಗಳನ್ನು ಅಡಗಿಸಿಕೊಳ್ಳುವ ಶಕ್ತಿ ಇದೆ ಎಂದು ಕುಮುದೇಂದು ಮುನಿಯು ತನ್ನ ಗ್ರಂಥದಲ್ಲಿ ಸಾಬೀತು ಮಾಡಿದ್ದಾರೆ.
  • "ಆದಿ ತೀರ್ಥಂಕರ ವೃಷಭ ದೇವನು ತನ್ನ ಕುಮಾರಿಯಾದ ಬ್ರಾಹ್ಮೀ ಸೌಂದರಿಯರಿಗೆ ಕನ್ನಡ ಆಂಕಾಕ್ಷರ ಗಳನ್ನು ವಿವರಿಸಿದ ಕಾರಣದಿಂದಾಗಿ ಈ ಅಕ್ಷರ ಲಿಪಿಗೆ ಬ್ರಾಹ್ಮೀಲಿಪಿ ಎಂದು ಅಂಕ ಲಿಪಿಗೆ ಸೌಂದರಿ ಲಿಪಿ ಎಂದು ಹೆಸರಾಗಿದೆ. ಈ ಖಚಿತವಾದ ಮಾಹಿತಿ ಯನ್ನು ಸಿರಿ ಭೂ ವಲಯವು ಬಹಳ ಸ್ಪಷ್ಟವಾಗಿ ತಿಳಿಸಿದೆ. ಕನ್ನಡ ಭಾಷೆಯೂ ಈಗ ವ್ಯಾಪಾರಿ ರಂಗದಲ್ಲೂ ಮುಂಚೂಣಿ ಭಾಷೆಯಾಗಿ ಬೆಳೆಯುತ್ತಿದೆ.
ಉದಾಹರಣೆಗೆ:
ಣಿಚ್ಚವು ಹೊಸದಾಗಿರುವಂಕಾಕ್ಷರ ದಚ್ಚುಗಳೊಳಗೊಂಬತ್ತು ಣೊಚ್ಚಿತ್ತು ಬಿನ್ನತ್ತಾಗಿರುತರುವಂಕದ ಅಚ್ಚಕಾವ್ಯಕೆ ಸೊನ್ನೆಯಾದಿಮ್
ನುಣುಪಾದ ಸೊನ್ನೆಯ ಮಧ್ಯದೊಳ್ ಕೂಡಿಸೆ ಗಣಿತರ್ಗೆ ಲೆಕ್ಕವ ತರುವ ಅಣಿಯಾದ ಸೊನ್ನೆಗೆ ಮಣಿಯುತ ನಾನೀಗ ಗುಣಕರ್ಗೆ ಭೂವಲಯವನು
ವರುಷಭಾರತದೊಳು ಬೆಳಗುವೆತ್ತಿಹ ಕಾವ್ಯ ಕರುನಾಡ ಜನರಿಗನಾದಿ ಅರುಹನಾಗಮದೊಂದಿಗೆ ನಯ ಬರುವಂತೆ ವರಕಾವ್ಯವನ್ನು ಕನ್ನದಿಪೆ
ಪುರ ಜಿನನಾಥ ತನ್ನಂಕದೊಳ್ ಬ್ರಾಹ್ಮಿಗೆ ಅರವತ್ನಾಲ್ಕಕ್ಷರವಿತ್ತ ವರಕುವರಿಯರು ಸೌಂದರಿಗೆ ಒಂಬತ್ತನು ಕರುಣಿಸಿದನು ಸೊನ್ನೆ ಸಹಿತ
ಕನ್ನಡದೊಂದೆರಳ್ ಮೂರುನಾಲ್ಕೈದಾರು ಮುನ್ನ ಏಳೆಂಟೊಂಬತೆಂಬ ಉನ್ನತವಾದಂಕ ಸೊನ್ನೆಯಿಂ ಹುಟ್ಟಿತೆಂ ದೆನ್ನುವುದನು ಕಲಿಸಿದನು
ಸರ್ವಞದೇವನು ಸರ್ವಾಂಗದಿಂ ಪೇಳ್ದ ಸರ್ವಸ್ವ ಭಾಷೆಯ ಸರಣಿಗೆ ಸಕಲವ ಕರ್ಮಾಟದಣುರೂಪ ಹೊಂದುತ ಪ್ರಕಟದ ಓಂದರೋಳ್ ಅಡಗಿ
ಹದಿನೆಂಟು ಭಾಷೆಯ ಮಹಾಭಾಷೆಯಾಗಲು ಬದಿಯ ಭಾಷೆಗಳೇಳುನೂರು ಹೃದಯದೊಳಡಗಿಸಿ ಕರ್ಮಾಟ ಲಿಪಿಯಾಗಿ ಹುದುಗಿದಂಕ ಭೂವಲಯ
ಪರಭಾಷೆಗಳೆಲ್ಲ ಸಂಯೋಗವಾಗಲು ಸರಸ ಶಬ್ದಾಗಮ ಹುಟ್ಟಿ ಸರವದು ಮಾಲೆಯಾದತಿಶಯ ಹಾರದ ಸರಸ್ವತಿ ಕೊರಳ ಆಭರಣ

ಭೌಗೋಳಿಕ ವ್ಯಾಪಕತೆ

ಕನ್ನಡ ಭಾಷೆಯನ್ನು ಪ್ರಮುಖವಾಗಿ ಭಾರತದ ಕರ್ನಾಟಕ ರಾಜ್ಯದಲ್ಲಿ ಉಪಯೋಗಿಸಲಾಗುತ್ತದೆ, ಮತ್ತು ಸ್ವಲ್ಪ ಮಟ್ಟಿಗೆ ಅಕ್ಕಪಕ್ಕದ ರಾಜ್ಯಗಳಲ್ಲಿ (ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ಇ.) ಸಹ ಉಪಯೋಗಿಸಲಾಗುತ್ತದೆ. ಅಮೆರಿಕದ ಸಂಯುಕ್ತ ಸಂಸ್ಥಾನ ಮತ್ತುಇಂಗ್ಲೆಂಡ್ ದೇಶಗಳಲ್ಲಿ ಸಹ ಸಾಕಷ್ಟು ಕನ್ನಡಿಗರ ಜನಸಂಖ್ಯೆ ಇದೆ. ಇವರು ಈಚೆಗೆ ಕೆಲಸ ಹುಡುಕಿಕೊಂಡು ವಲಸೆ ಹೋದವರು. ಇ೦ದು ಕನ್ನಡವು ಮಲ್ಲಿಗೆಯ೦ತೆ ಅರಳಿ ತನ್ನ ಕ೦ಪನ್ನು ಎಲ್ಲೆಡೆಯು ವ್ಯಾಪಿಸಿದೆ.

ಅಧಿಕೃತ ಮಾನ್ಯತೆ ಮತ್ತು "ಚೆನ್ನುಡಿ"

ಕನ್ನಡದ ಬಾವುಟ
 
 
ಕನ್ನಡ ಭಾಷೆ ಭಾರತ ದೇಶದ ೨೨ ಅಧಿಕೃತ ರಾಷ್ಟ್ರ ಭಾಷೆಗಳಲ್ಲಿ ಒಂದು. ಕರ್ನಾಟಕ ರಾಜ್ಯದ ಏಕೈಕ ಅಧಿಕೃತ ಭಾಷೆ ಕನ್ನಡ. ಕರ್ನಾಟಕದಲ್ಲಿ ಕನ್ನಡಿಗರಿಗೇ ಆದ್ಯತೆ.
ಅಕ್ಟೋಬರ್ ೩೧, ೨೦೦೮ ರಂದು ಭಾರತ ಸರ್ಕಾರ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನವನ್ನ ನೀಡಿದೆ. ಶಾಸ್ತ್ರೀಯ ಭಾಷೆಗೆ ಕನ್ನಡದಲ್ಲಿ "ಚೆನ್ನುಡಿ" ಎಂದೂ ಕರೆಯಬಹುದು.

ಕನ್ನಡ ಅಕ್ಷರಮಾಲೆ

ಕನ್ನಡ ಅಕ್ಷರಮಾಲೆಯಲ್ಲಿ ೪೯ ಅಕ್ಷರಗಳಿದ್ದು, ಇದು ಒಂದು ಶಾಬ್ದಿಕ ಅಕ್ಷರಮಾಲೆ. ಕನ್ನಡ ಅಕ್ಷರಮಾಲೆಯಲ್ಲಿ ಬರುವ ಅಕ್ಷರಗಳು ಸರಿಸುಮಾರು ಎಲ್ಲ ಭಾರತೀಯ ಭಾಷೆಗಳಲ್ಲಿ ಬರುತ್ತವೆ. ತೆಲುಗು ಲಿಪಿ ಕನ್ನಡ ಭಾಷೆಯ ಲಿಪಿಯನ್ನು ಹೋಲುತ್ತದೆ, ಮತ್ತು ಒತ್ತಕ್ಷರ ಹಾಗೂ ಕಾಗುಣಿತಗಳ ದೆಸೆಯಿಂದ ಸಾಕಷ್ಟು ಸಂಕೀರ್ಣವಾದದ್ದು. ಕನ್ನಡ ಬರವಣಿಗೆಯ ಪ್ರತಿ ಚಿಹ್ನೆ ಒಂದು ಶಾಬ್ದಿಕ ಮಾತ್ರೆಯನ್ನು ಪ್ರತಿನಿಧಿಸುತ್ತದೆ. ಆಂಗ್ಲ (ಇಂಗ್ಲೀಷ್) ಮೊದಲಾದ ಭಾಷೆಗಳಲ್ಲಿ ಒಂದು ಚಿಹ್ನೆ ಒಂದು ಶಬ್ದವನ್ನು ಮಾತ್ರ ಪ್ರತಿನಿಧಿಸುತ್ತದೆ.
ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
ಯ ರ ಲ ವ ಶ ಷ ಸ ಹ ಳ

ಮತ್ತು ಹಳೆಗನ್ನಡದ ಱ ಮತ್ತು ೞ - ಜೊತೆಗೆ (ಂ = ಅನುಸ್ವಾರ, ಃ = ವಿಸರ್ಗ) = ಒಟ್ಟು ೫೧.
ಈಚೆಗೆ ಇಂಗ್ಲಿಷಿನ F, Z ಎಂಬ ಧ್ವನಿಯನ್ನು ಫ಼ ಜ಼ ಎಂಬಂತೆ ಗುರುತಿಸುತ್ತ ಇದ್ದಾರೆ. ಆಗ ೫೩.
ಕನ್ನಡ ಅಕ್ಷರಮಾಲೆಯಲ್ಲಿ ೪೯ ಅಕ್ಷರಗಳಿದ್ದು, ಇದು ಒಂದು ಶಾಬ್ದಿಕ ಅಕ್ಷರಮಾಲೆ. ಕನ್ನಡ ಅಕ್ಷರಮಾಲೆಯಲ್ಲಿ ಬರುವ ಅಕ್ಷರಗಳು ಸರಿಸುಮಾರು ಎಲ್ಲ ಭಾರತೀಯ ಭಾಷೆಗಳಲ್ಲಿ ಬರುತ್ತವೆ. ತೆಲುಗು ಲಿಪಿ ಕನ್ನಡ ಭಾಷೆಯ ಲಿಪಿಯನ್ನು ಹೋಲುತ್ತದೆ, ಮತ್ತು ಒತ್ತಕ್ಷರ ಹಾಗೂ ಕಾಗುಣಿತಗಳ ದೆಸೆಯಿಂದ ಸಾಕಷ್ಟು ಸಂಕೀರ್ಣವಾದದ್ದು. ಕನ್ನಡ ಬರವಣಿಗೆಯ ಪ್ರತಿ ಚಿಹ್ನೆ ಒಂದು ಶಾಬ್ದಿಕ ಮಾತ್ರೆಯನ್ನು ಪ್ರತಿನಿಧಿಸುತ್ತದೆ. ಆಂಗ್ಲ (ಇಂಗ್ಲೀಷ್) ಮೊದಲಾದ ಭಾಷೆಗಳಲ್ಲಿ ಒಂದು ಚಿಹ್ನೆ ಒಂದು ಶಬ್ದವನ್ನು ಮಾತ್ರ ಪ್ರತಿನಿಧಿಸುತ್ತದೆ.
ಮಾನವನು ತಿಳಿಸಬೇಕಾದ ಅರ್ಥಕ್ಕೆ ಭಾಷೆ ಸಂಕೇತವಾದರೆ, ಭಾಷೆಗೆ ಲಿಪಿ ಸಂಕೇತವಾಗುತ್ತದೆ. ಚಿತ್ರಲಿಪಿಯಿಂದ ಹಿಡಿದು ಇಂದಿನ ಮುದ್ರಣ— ಕಂಪ್ಯೂಟರ್ ಲಿಪಿಯವರೆಗೆ ಲಿಪಿಗಳು ಬೆಳೆದಿವೆ. ಭಾರತದಲ್ಲಿರುವ ಅನೇಕ ಭಾಷಾಲಿಪಿಗಳಿಗೂ ಅಶೋಕನ ಶಾಸನಗಳ ಬ್ರಾಹ್ಮೀಲಿಪಿಯೇ ಮೂಲ. ಶತಮಾನಗಳು ಕಳೆದ ಮೇಲೆಯೂ ಈಗ ಕನ್ನಡದ ಅಕ್ಷರಗಳು ಬ್ರಾಹ್ಮೀಲಿಪಿಯಿಂದ ಹೇಗೆ ಬೆಳೆದು ಬಂದಿವೆ ಎಂಬುದನ್ನು ಕ್ರಮವಾಗಿ ವಿವರಿಸಬಹುದು. ವಿದ್ವಾಂಸರು ಈ ಬಗ್ಗೆ ವರ್ಣಮಾಲೆಯ ಪಟಗಳನ್ನು ರಚಿಸಿ ಶತಮಾನಗಳ ಅಕ್ಷರ ಸ್ವರೂಪಗಳನ್ನು ಗುರುತಿಸಿದ್ದಾರೆ. ಇದರಿಂದ ಅಕ್ಷರಗಳು ಬದಲಾದ ಸ್ವರೂಪವನ್ನು ಪಡೆದ ಕ್ರಮವನ್ನು ನಾವು ಕಣ್ಣಾರೆ ಕಾಣಬಹುದು. ಮುದ್ರಣ ಬಂದ ಮೇಲೆ ಕನ್ನಡಕ್ಕೆ ಈಗಿನ ರೂಪ ನಿಂತಿದೆ. ಪ್ರಪಂಚದಲ್ಲಿ ೧೮ ಬಗೆಯ ಲಿಪಿಗಳಿವೆ. ಇವುಗಳಲ್ಲಿ ೮ ಅಕ್ಷರ ಲಿಪಿಗಳು. ಮಿಕ್ಕವು ಚಿತ್ರಲಿಪಿ ಮುಂತಾದವು. ಭಾರತದಲ್ಲಿ ಅನೇಕ ಭಾಷೆಗಳಿಗೆ ಬ್ರಾಹ್ಮಿಲಿಪಿಯಿಂದ ಬಂದ ಅನೇಕ ಲಿಪಿಗಳೇ ಇವೆ. ಜೊತೆಗೆ ಪರ್‍ಸೋ-ಅರಾಬಿಕ್ ಲಿಪಿಗಳೂ ಇವೆ. ಉದಾ: ಉರ್ದು, ಕಾಶ್ಮೀರಿ, ಪುಷ್ಟು.
ಕನ್ನಡ ವರ್ಣಮಾಲೆಯಲ್ಲಿ ಇರಬೇಕಾದ ಅಕ್ಷರಗಳ ಬಗ್ಗೆ ವಿದ್ವಾಂಸರಲ್ಲಿ ಬೇಕಾದಷ್ಟು ಚರ್ಚೆಯಾಗಿದೆ. ಕೊನೆಯದಾಗಿ ಈಗ ಕನ್ನಡದ ವರ್ಣಮಾಲೆಯಲ್ಲಿ ಇರುವ ಲಿಪಿ ಸಂಜ್ಞೆಗಳು ಇವು:
ವರ್ಣ ವ್ಯವಸ್ಥೆ: ಕನ್ನಡ ಭಾಷೆಯಲ್ಲಿ ಕೆಲವು ವರ್ಣಗಳು ತನ್ನ ರಚನೆಯಲ್ಲಿ (ಉಚ್ಛಾರಣೆಯಲ್ಲಿ) ಸ್ವತಂತ್ರವಾಗಿ ಉಪಯೋಗಿಸಲ್ಪಡುತ್ತವೆ. ಇವುಗಳನ್ನು ಸ್ವರಗಳೆಂದು ಕರೆಯುತ್ತೇವೆ. ಹಾಗೂ, ಸ್ವರ ಸಹಾಯದಿಂದ ಉಪಯೋಗಿಸಲ್ಪಡುವ ವರ್ಣಗಳನ್ನು ವ್ಯಂಜನಗಳೆಂದು ಕರೆಯುತ್ತೇವೆ.
ಸ್ವರಗಳು: ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ವ್ಯಂಜನಗಳು: ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಲ ವ ಶ ಷ ಸ ಹ ಳ
ಮತ್ತು ಹಳೆಗನ್ನಡದ ಱ ಮತ್ತು ೞ - ಜೊತೆಗೆ (ಂ = ಅನುಸ್ವರ, ಃ = ವಿಸರ್ಗ, ಇವುಗಳನ್ನು ಯೋಗವಾಹಕಗಳು ಎನ್ನುತ್ತಾರೆ) = ಒಟ್ಟು ೪೯. ಈಚೆಗೆ ಇಂಗ್ಲಿಷಿನ F, Z ಎಂಬ ಧ್ವನಿಯನ್ನು ಫ಼ ಜ಼ ಎಂಬಂತೆ ಗುರುತಿಸುತ್ತ ಇದ್ದಾರೆ. ಆಗ ೫೧.
ಸ್ವರಗಳ ವಿಧಗಳು: ಸ್ವರಗಳನ್ನು ಅವುಗಳ ಉಚ್ಛಾರಣೆಗೆ ತೆಗೆದುಕೊಳ್ಳುವ ಕಾಲಾವಧಿಯನ್ನು ಅವಲಂಬಿಸಿ ಹ್ರಸ್ವಸ್ವರಗಳು, ಮತ್ತು ದೀರ್ಘಸ್ವರಗಳು ಎಂದು ಎರಡು ಗುಂಪುಗಳನ್ನಾಗಿ ಮಾಡಲಾಗಿದೆ.
ಹ್ರಸ್ವಸ್ವರವನ್ನು ಉಚ್ಛಾರಣೆ ಮಾಡಲು ಬೇಕಾದ ಕಾಲವನ್ನು ಛಂದಸ್ಸಿನಲ್ಲಿ ಒಂದು ಮಾತ್ರೆಯ ಕಾಲ ಎಂದು ಕರೆಯಲಾಗಿದೆ. ಉದಾಹರಣೆಗೆ: ಅ, ಇ, ಉ, ಋ, ಎ, ಒ
ದೀರ್ಘಸ್ವರಗಳ ಉಚ್ಛಾರಣೆಗೆ ಎರಡು ಮಾತ್ರೆಗಳ ಕಾಲವನ್ನು ತೆಗೆದುಕೊಳ್ಳುತ್ತೇವೆ. ಉದಾಹರಣೆಗೆ: ಆ, ಈ, ಊ, ಏ, ಐ, ಓ, ಔ
"ಋ"ಕಾರವನ್ನು ಸಂಸ್ಕೃತದಿಂದ ಕನ್ನಡಕ್ಕೆ ಬಂದಿರುವ ಪದಗಳಲ್ಲಿ ಮಾತ್ರ ಕಾಣುತ್ತೇವೆ.
"ಐ" ಮತ್ತು "ಔ"ಗಳ ಸ್ವರೂಪ: ಇವು ವಾಸ್ತವದಲ್ಲಿ ಎರಡು ಬೇರೆ ಬೇರೆ ಸ್ವರಗಳ ಸಂಯೋಗದಿಂದ ಉಂಟಾಗುತ್ತವೆ. ಅ ಮತ್ತು ಇ ಸ್ವರಗಳ ಸಂಧಿಸುವಿಕೆಯಿಂದ "ಐ"ಕಾರವು ಉಂಟಾಗಿದ್ದು, ಅ ಮತ್ತು ಉ ಸ್ವರಗಳಿಂದ "ಔ"ಕಾರವು ಜನ್ಮಿಸಿದೆ. ಈ ಎರಡು ಸ್ವರಗಳು ಇಜಾತೀಯ ಸ್ವರಗಳ ಸಂಧಿಸುವಿಕೆಯಿಂದ ಆಗಿದ್ದು, ಅವುಗಳ ದೀರ್ಘ ಸ್ವರೂಪದಿಂದಾಗಿ ದೀರ್ಘಸ್ವರಗಳ ಪಟ್ಟಿಗೆ ಸೇರಿಸಲಾಗಿವೆ.
ವ್ಯಂಜನದ ವಿಧಗಳು: ವ್ಯಂಜನಗಳನ್ನು ಉಚ್ಚಾರಣೆಯ ಆಧಾರದ ಮೇಲೆ "ಕ್"ನಿಂದ "ಮ್"ಕಾರದ ವರೆಗಿನ ಇಪ್ಪತ್ತೈದು ವರ್ಣಗಳನ್ನು ವರ್ಗೀಯ ವ್ಯಂಜನಗಳೆಂದು ಕರೆಯುತ್ತೇವೆ. "ಯ್"ಕಾರದಿಂದ "ಳ್"ಕಾರದ ವರೆಗಿನ ವ್ಯಂಜನಗಳನ್ನು ಅವರ್ಗೀಯ ವ್ಯಂಜನಗಳೆನ್ನುತ್ತೇವೆ.
ಕೃಪೆ : ವಿಕಿಪೀಡಿಯ