Mar 11, 2014

ಅಬ್ಬೂರು ಜಯತೀರ್ಥ

 ಅಬ್ಬೂರು ಜಯತೀರ್ಥ
ರಂಗಭೂಮಿ, ಅಬ್ಬೂರು ಎರಡರ ಅವಿನಾಭಾವ ಸಂಬಂಧದ ಜಯತೀರ್ಥರು ಹುಟ್ಟಿದ್ದು ಚೆನ್ನಪಟ್ಟಣ ತಾಲ್ಲೂಕು ಅಬ್ಬೂರು. ತಂದೆ ಸೇತು ಮಾಧವರಾವ್ ನಾಟಕ ಹಾಗೂ ಹಾರ್ಮೋನಿಯಂ ವಾದನ ಪ್ರಿಯರು, ತಾಯಿ ಸುಶೀಲಾಬಾಯಿ. ಶಾಲಾ ದಿನಗಳಿಂದಲೇ ನಾಟಕದ ಹುಚ್ಚು. ಬೆಂಗಳೂರಿನ ಕಲಾಕಾಲೇಜಿನಲ್ಲಿ ಅಭಿನಯ ಮುಂದುವರಿಕೆ. ಉದ್ಯೋಗಕ್ಕೆ ಸೇರಿದ್ದು ಅಕೌಂಟೆಂಟ್ ಜನರಲ್‌ರ ಪ್ರಧಾನ ಕಚೇರಿ. ನಾಟ್ಯವಾಹಿನಿ ಸಂಸ್ಥೆಕಟ್ಟಿ ಸಿಬ್ಬಂದಿಗಳಿಗೆ ನೀಡಿದ ಮನರಂಜನೆ.
ಸರಸ್ವತಿ ಕಲಾನಿಕೇತನ, ನಾಟ್ಯದರ್ಪಣ, ಕಲಾಸಂಘಗಳ ನಾಟಕಗಳ ನಟರಾಗಿ ರಂಗಭೂಮಿಗೆ ಪಾದಾರ್ಪಣ. ಅ.ನ.ಕೃ.ರವರ ಗುಬ್ಬಚ್ಚಿಗೂಡು ನಾಟಕವನ್ನು ವಿರೋಧದ ನಡುವೆಯೂ ಸಜ್ಜುಗೊಳಿಸಿದ ಖ್ಯಾತಿ. ಪರ್ವತವಾಣಿ, ಶ್ರೀರಂಗರ ನಾಟಕಗಳಲ್ಲಿ ಕ್ರಿಯಾಶೀಲ ಕಾರ್ಯಕರ್ತ. ೬೦-೭೦ರ ದಶಕದಿಂದ ರಂಗಭೂಮಿಯ ರಂಗಸಜ್ಜಿಕೆ, ಧ್ವನಿ, ಬೆಳಕಿಗೆ ಅನಿವಾರ್ಯ ವ್ಯಕ್ತಿ. ಚೋಪಟ್ ರಾಜ, ಅಪಕಾರಿ ಕಥೆ, ನಾಟಕಗಳಲ್ಲಿ ಬಿ.ವಿ. ಕಾರಂತರೊಡನೆ, ಈಡಿಪಸ್ ನಾಟಕದಲ್ಲಿ ಗಿರೀಶ್ ಕಾರ್ನಾಡರೊಡನೆ ಅಭಿನಯ. ನೀ ಕೊಡೆ ನಾ ಬಿಡೆ, ಸ್ವರ್ಗಕ್ಕೆ ಮೂರೇ ಗೇಣು, ತುಘಲಕ್, ಸಂಕ್ರಾಂತಿ, ಬಯಲು ಸೀಮೆ ಸರದಾರ, ಬೆಳ್ಳಿಗುಂಡು ನಾಟಕಗಳ ಹಲವಾರು ಪ್ರಕಾರಗಳಲ್ಲಿ ಪ್ರಮುಖ ಜವಾಬ್ದಾರಿ.
ಆಷಾಡದ ದಿನಗಳು, ಸಿಕ್ಕು, ಉದ್ಭವ, ಮಾರೀಚನ ಬಂಧುಗಳು, ನೆರಳಿಲ್ಲದ ಜೀವಗಳು, ಮಾನವಜನ್ಮ ದೊಡ್ಡದೋ, ತಪಸ್ವಿ, ತರಂಗಿಣಿ, ಸದ್ದು ವಿಚಾರಣೆ ನಡೆಯುತ್ತಿದೆ…. ನಿರ್ದೇಶಿಸಿದ ನಾಟಕಗಳು. ಇಂಗ್ಲೆಂಡಿನ ಮ್ಯಾನ್‌ಚೆಸ್ಟರ್ನಲ್ಲಿ ವಿಶ್ವ ಕನ್ನಡ ಸಮ್ಮೇಳನಕ್ಕಾಗಿ ಉದ್ಭವ ನಾಟಕ ನಿರ್ದೇಶನದಿಂದ ಗಳಿಸಿದ ಖ್ಯಾತಿ. ಹೆಜ್ಜೆಗಳು ನಾಟಕಕ್ಕೆ ತಮ್ಮಣ್ಣ ಸ್ಮಾರಕ ರಾಜ್ಯಮಟ್ಟದ ಪ್ರಶಸ್ತಿ, ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಿತರು.