May 14, 2026

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ : ನಾಥ ಪರಂಪರೆಯ ದಿವ್ಯ ದರ್ಶನ

 ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ : ನಾಥ ಪರಂಪರೆಯ ದಿವ್ಯ ದರ್ಶನ

ನಮ್ಮ ನಾಡಿನ ಮಠಮಾನ್ಯಗಳು ಕೇವಲ ಧಾರ್ಮಿಕ ಕೇಂದ್ರಗಳಲ್ಲ, ಅವು ಸಮಸ್ತ ಸಮಾಜದ ಬದುಕನ್ನು ಬೆಳಗುವ ಚೇತನದ ಕಾರಂಜಿಗಳು. ಕೇವಲ ಮಂತ್ರ-ಘೋಷಗಳಿಗೆ ಸೀಮಿತವಾಗದೆ, ದೀನ-ದಲಿತರ ಮತ್ತು ಸಾಮಾನ್ಯ ಜನರ ಬದುಕಿನಲ್ಲಿ ಸ್ಥಿರತೆಯನ್ನು ತರುವ ಉದಾತ್ತ ಧ್ಯೇಯವನ್ನಿಟ್ಟುಕೊಂಡ ಮಠಗಳ ಸೇವೆ ಅನನ್ಯವಾದುದು. ಯಾವಾಗ ಮಠಗಳು ಸಮಾಜೋದ್ಧಾರವನ್ನೇ ಪರಮ ಧರ್ಮವೆಂದು ಸ್ವೀಕರಿಸುತ್ತವೆಯೋ, ಆಗ ನಾಡಿನ ಜನಜೀವನ ತಾನಾಗಿಯೇ ಪ್ರಗತಿಯ ಪಥದಲ್ಲಿ ಸಾಗುತ್ತದೆ.

ಕರ್ನಾಟಕವು ಇಂದು ಶಿಕ್ಷಣ, ಸಂಸ್ಕೃತಿ ಮತ್ತು ಸಾಮಾಜಿಕ ನ್ಯಾಯದ ರಂಗದಲ್ಲಿ ಜಗತ್ತೇ ಮೆಚ್ಚುವಂತಹ ಸಾಧನೆ ಮಾಡಿದ್ದರೆ, ಅದರ ಹಿಂದೆ ಈ ಪವಿತ್ರ ಮಠಗಳ ನಿಸ್ವಾರ್ಥ ಶ್ರಮವಿದೆ. ಇಂತಹ ಜ್ಞಾನದಾಸೋಹದ ಪರಂಪರೆಯಲ್ಲಿ, ಅಜ್ಞಾನದ ಕತ್ತಲನ್ನು ತೊಲಗಿಸಿ ಲಕ್ಷಾಂತರ ಜನರ ಬಾಳಿಗೆ ಬೆಳಕಾಗಿರುವ ಮುಂಚೂಣಿ ಹೆಸರು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ. ಹಗಲಿರುಳೆನ್ನದೆ ನಾಡಿನ ಅಭ್ಯುದಯಕ್ಕಾಗಿ ಶ್ರಮಿಸುತ್ತಿರುವ ಈ ಮಠವು ನಮ್ಮೆಲ್ಲರ ಗೌರವದ ಸಂಕೇತವಾಗಿದೆ.

ಇಂದು ಕರ್ನಾಟಕದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಭೂಪಟದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಒಂದು ಅಪ್ರತಿಮ ದಿವ್ಯ ಚೇತನವಾಗಿ ಕಂಗೊಳಿಸುತ್ತಿದೆ. ಸೃಷ್ಟಿ ಸೌಂದರ್ಯದ ನಡುವೆ ಮೈದಳೆದಿರುವ ಈ ಪುಣ್ಯಕ್ಷೇತ್ರವು ಕೇವಲ ಒಂದು ಧಾರ್ಮಿಕ ಕೇಂದ್ರವಾಗಿ ಉಳಿಯದೆ, ಲಕ್ಷಾಂತರ ಜನರ ಬದುಕಿಗೆ ದಾರಿದೀಪವಾದ ಶೈಕ್ಷಣಿಕ, ಸಾಮಾಜಿಕ ಮತ್ತು ವೈದ್ಯಕೀಯ ಕ್ರಾಂತಿಯ ಕೇಂದ್ರಬಿಂದುವಾಗಿದೆ. ಹಸಿರು ಕಾನನದ ನಡುವೆ ಸ್ವಚ್ಛಂದವಾಗಿ ನರ್ತಿಸುವ ನವಿಲುಗಳು ಮತ್ತು ಮನಸ್ಸಿಗೆ ಮುದ ನೀಡುವ ಪ್ರಶಾಂತ ಪರಿಸರವನ್ನು ಹೊಂದಿರುವ ಈ ಕ್ಷೇತ್ರವು ನಿಸರ್ಗ ಮತ್ತು ಭಕ್ತಿಯ ಅಪೂರ್ವ ಸಂಗಮವಾಗಿದೆ. 

ಸುಮಾರು ಎರಡು ಸಾವಿರ ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿರುವ ಈ ಕ್ಷೇತ್ರವನ್ನು 'ಸಿದ್ಧವನ' ಅಥವಾ 'ಗಜಾರಣ್ಯ' ಎಂದೂ ಕರೆಯಲಾಗುತ್ತಿತ್ತು. ಪೌರಾಣಿಕ ಹಿನ್ನೆಲೆಯ ಪ್ರಕಾರ, ಆದಿ ದೇವನಾದ ಶಿವನು ಘೋರ ತಪಸ್ಸನ್ನಾಚರಿಸಿದ ಪುಣ್ಯಭೂಮಿ ಇದಾಗಿದೆ. ಶಿವನು ತನ್ನ ತಪಸ್ಸಿನ ನಂತರ ಈ ಕ್ಷೇತ್ರವನ್ನು ನಾಥ ಸಂಪ್ರದಾಯದ ಸಿದ್ಧಯೋಗಿಗಳಿಗೆ ಹಸ್ತಾಂತರಿಸಿದನು ಎಂದು ನಂಬಲಾಗಿದೆ. ಈ ಕಾರಣದಿಂದಲೇ ಇದನ್ನು 'ಸಿದ್ಧ ಸಿಂಹಾಸನ' ಎಂದು ಕರೆಯಲಾಗುತ್ತದೆ. ಪರಶಿವನು ಸಿದ್ಧಯೋಗಿಗೆ ಈ ಪೀಠವನ್ನು ಅನುಗ್ರಹಿಸುವ ಸಂದರ್ಭದಲ್ಲಿ ಅದರ ಅಪ್ರತಿಮ ಮಹಿಮೆಯನ್ನು ಹೀಗೆ ವರ್ಣಿಸಿದ್ದಾನೆ: "ಈ ಪೀಠವು ನನ್ನ ಸ್ವಂತ ತೇಜಸ್ಸಿನ ಅಂಶಗಳಿಂದ ಮೈದೋರಿರುವುದರಿಂದ ಸಂಪೂರ್ಣವಾಗಿ ಅಗ್ನಿಮಯವಾಗಿದೆ. ಈ ದಿವ್ಯ ಪೀಠದ ಮೇಲೆ ವಿರಾಜಮಾನರಾದ ಗುರುಗಳನ್ನು ದರ್ಶನ ಮಾಡಿದ ಭಕ್ತರ ಜನ್ಮವು ಧನ್ಯವಾಗುತ್ತದೆ ಮತ್ತು ಅವರು ಸಕಲ ಪಾಪಗಳಿಂದ ವಿಮೋಚನೆ ಹೊಂದುತ್ತಾರೆ. ಆದರೆ, ಯೋಗನಿಷ್ಠೆ ಮತ್ತು ತಪಃಶಕ್ತಿ ಇಲ್ಲದವರು ಈ ಅಗ್ನಿಪೀಠವನ್ನು ಸ್ಪರ್ಶಿಸಿದರೆ ಕ್ಷಣಾರ್ಧದಲ್ಲಿ ಭಸ್ಮವಾಗುತ್ತಾರೆ."

ಹೀಗೆ ಜ್ವಾಲಾಪೀಠದಲ್ಲಿ ಆಸೀನರಾದ ಗುರುಗಳ ದರ್ಶನ ಪಡೆಯುವುದು, ಸಾಕ್ಷಾತ್ ಕೈಲಾಸದಲ್ಲಿ ಪರಶಿವನ ದರ್ಶನ ಪಡೆದಷ್ಟೇ ಪುಣ್ಯದಾಯಕ ಎಂಬುದು ಭಕ್ತರ ಗಾಢವಾದ ನಂಬಿಕೆಯಾಗಿದೆ. ಹಾಗೆಯೇ ತ್ರೇತಾಯುಗದಲ್ಲಿ ಶ್ರೀರಾಮನು ಸೀತೆಯನ್ನು ಹುಡುಕುತ್ತಾ ಈ ಕಡೆ ಬಂದಾಗ ಶಿವನು ಅವನಿಗೆ ದರ್ಶನ ನೀಡಿ ಆಶೀರ್ವದಿಸಿದನು ಎಂಬ ಉಲ್ಲೇಖಗಳು ಜನಪದ ಸಾಹಿತ್ಯದಲ್ಲಿಯೂ ಕಂಡುಬರುತ್ತವೆ. ಶ್ರೀ ಆದಿಚುಂಚನಗಿರಿ ಪೀಠದ ಗುರುಪರಂಪರೆಯು ಸುದೀರ್ಘವಾದುದು. ಇದುವರೆಗೆ ೭೨ ಮಂದಿ ಧರ್ಮಗುರುಗಳು ಪೀಠಾಧಿಪತಿಗಳಾಗಿದ್ದಾರೆ.

ಕ್ಷೇತ್ರದ ಹೆಸರಿನ ಹಿಂದೆ ಇರುವ 'ಚುಂಚ' ಮತ್ತು 'ಕಂಚ' ಎಂಬ ಇಬ್ಬರು ರಾಕ್ಷಸರ ಕಥೆಯು ಅತ್ಯಂತ ಪ್ರಸಿದ್ಧವಾದುದು. ಈ ರಾಕ್ಷಸರು ಈ ಭಾಗದ ಜನರಿಗೆ ಮತ್ತು ಋಷಿಮುನಿಗಳಿಗೆ ಅಪಾರವಾದ ತೊಂದರೆಯನ್ನು ನೀಡುತ್ತಿದ್ದರು. ಜನರ ಪ್ರಾರ್ಥನೆಗೆ ಒಲಿದ ಪರಶಿವನು ಭೈರವೇಶ್ವರನ ರೂಪದಲ್ಲಿ ಅವತರಿಸಿ ಈ ರಾಕ್ಷಸರನ್ನು ಸಂಹರಿಸಿದನು. ಇದರಲ್ಲಿ ಚುಂಚನು ವಾಸವಿದ್ದ ಬೆಟ್ಟವೇ 'ಆದಿಚುಂಚನಗಿರಿ' ಆಯಿತು. ಇಂದಿಗೂ ಕಾಲಭೈರವೇಶ್ವರನು ಈ ಕ್ಷೇತ್ರದ ರಕ್ಷಕನಾಗಿ, ಅಂದರೆ ಕ್ಷೇತ್ರಪಾಲಕನಾಗಿ ಭಕ್ತರನ್ನು ಕಾಯುತ್ತಿದ್ದಾನೆ ಎಂಬ ಅಚಲ ನಂಬಿಕೆಯಿದೆ. 

ಆದಿಚುಂಚನಗಿರಿಯನ್ನು 'ಪಂಚಲಿಂಗ ಕ್ಷೇತ್ರ' ಎಂದು ಕರೆಯಲಾಗುತ್ತದೆ. ಇಲ್ಲಿ ಶಿವನು ಐದು ವಿಭಿನ್ನ ರೂಪಗಳಲ್ಲಿ ನೆಲೆಸಿದ್ದಾನೆ. ಈ ಐದು ಲಿಂಗಗಳು ಭಕ್ತರ ವಿವಿಧ ಇಷ್ಟಾರ್ಥಗಳನ್ನು ಈಡೇರಿಸುತ್ತವೆ ಎಂಬ ನಂಬಿಕೆ ಜನರಲ್ಲಿದೆ. ಆದಿಚುಂಚನಗಿರಿಯ ಪಂಚಲಿಂಗ ದೇವರುಗಳು.

೧. ಶ್ರೀ ಗಂಗಾಧರೇಶ್ವರ ಸ್ವಾಮಿ 

೨. ಶ್ರೀ ಚಂದ್ರಮೌಳೇಶ್ವರ ಸ್ವಾಮಿ 

೩. ಶ್ರೀ ಮಲ್ಲೇಶ್ವರ ಸ್ವಾಮಿ

೪. ಶ್ರೀ ಸಿದ್ಧೇಶ್ವರ ಸ್ವಾಮಿ

೫. ಶ್ರೀ ಕತ್ತಲೆ ಸೋಮೇಶ್ವರ ಸ್ವಾಮಿ 

ಬೆಟ್ಟದ ಶಿಖರ ಭಾಗವನ್ನು 'ಆಕಾಶ ಭೈರವ' ಎಂದು ಕರೆಯಲಾಗುತ್ತದೆ. ಇಲ್ಲಿನ 'ಬಿಂದು ಸರೋವರ'ವು ಅತ್ಯಂತ ಪವಿತ್ರವಾಗಿದ್ದು, ಇದು ಶಿವನ ಜಟೆಯಿಂದ ಇಳಿದ ಪವಿತ್ರ ನೀರಿನ ಹನಿಯಿಂದ ಸೃಷ್ಟಿಯಾದ ಕೆರೆ ಎಂದು ಹೇಳಲಾಗುತ್ತದೆ. ಭಕ್ತರು ಇಲ್ಲಿ ಸ್ನಾನ ಮಾಡುವುದರಿಂದ ಮಾನಸಿಕ ಅಶಾಂತಿ ದೂರವಾಗಿ ಮನಸ್ಸು ಶುದ್ಧವಾಗುತ್ತದೆ ಎಂಬ ಧಾರ್ಮಿಕ ನಂಬಿಕೆಯಿದೆ. ಇತ್ತೀಚೆಗೆ ಮಠವು ಈ ಸರೋವರವನ್ನು ಆಗಮ ಶಾಸ್ತ್ರದ ಪ್ರಕಾರ ನವೀಕರಿಸಿದೆ. 

ನಾಥ ಸಂಪ್ರದಾಯದ ಗಟ್ಟಿಯಾದ ಬೀಡು  :

ಶ್ರೀ ಆದಿಚುಂಚನಗಿರಿ ಮಠವು ಭಾರತದ ಅತ್ಯಂತ ಪ್ರಾಚೀನ ಸಂಪ್ರದಾಯಗಳಲ್ಲಿ ಒಂದಾದ ‘ನಾಥ ಸಂಪ್ರದಾಯ' ಅಥವಾ 'ನಾಥ ಪಂಥ'ಕ್ಕೆ ಸೇರಿದೆ. ಈ ಪಂಥವು ಯೋಗ, ಧ್ಯಾನ ಮತ್ತು ನೈತಿಕ ಶಿಸ್ತಿನ ಮೇಲೆ ಹೆಚ್ಚು ಒತ್ತು ನೀಡುತ್ತದೆ. ಆದಿನಾಥನಾದ ಶಿವನಿಂದ ಆರಂಭವಾದ ಈ ಪರಂಪರೆಯು ಮತ್ಸ್ಯೇಂದ್ರನಾಥ ಮತ್ತು ಗೋರಕ್ಷನಾಥರ ಮೂಲಕ ದಕ್ಷಿಣ ಭಾರತದಲ್ಲಿ ಗಟ್ಟಿಯಾಗಿ ಬೇರೂರಲು ಆದಿಚುಂಚನಗಿರಿ ಮುಖ್ಯ ಕಾರಣವಾಗಿದೆ. ಕರ್ನಾಟಕದ 'ಜೋಗಿ' ಕುಲದವರಿಗೆ ಇದು ಅತ್ಯುನ್ನತ ಆಧ್ಯಾತ್ಮಿಕ ಕೇಂದ್ರವಾಗಿದೆ. ಈ ಪರಂಪರೆಯ ೭೧ನೇ ಪೀಠಾಧಿಪತಿಗಳಾಗಿ ಬಂದ ಭೈರವೈಕ್ಯ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರು ಈ ಸಿದ್ಧ ಸಿಂಹಾಸನಕ್ಕೆ ಜಾಗತಿಕ ಮನ್ನಣೆಯನ್ನು ತಂದುಕೊಟ್ಟರು. ಇವತ್ತು ಮಠವು ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗದೆ, ಸಾಮಾಜಿಕ ಸಾಮರಸ್ಯ ಮತ್ತು ಮಾನವೀಯ ಮೌಲ್ಯಗಳ ಪ್ರಸಾರಕ್ಕೆ ಹೆಸರಾಗಿದೆ. ಮಠದ ಪ್ರತಿಯೊಂದು ಕಾರ್ಯವೂ 'ಸಮಾಜದ ಕಟ್ಟಕಡೆಯ ವ್ಯಕ್ತಿಯ ಉದ್ಧಾರ' ಎಂಬ ತತ್ವದ ಮೇಲೆ ನಿಂತಿದೆ. 

ಯುಗದ ಸನಾತನ ಧರ್ಮ ಪ್ರವರ್ತಕ :  ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರು

ಹಲವು ಮಹರ್ಷಿಗಳ ತಪೋಭೂಮಿಯಾಗಿ, ಎರಡು ಸಾವಿರ ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿರುವ ಶ್ರೀ ಆದಿಚುಂಚನಗಿರಿ ಮಠದ ಕೀರ್ತಿ ಪತಾಕೆಯು ಜಗತ್ತಿನಾದ್ಯಂತ ಪಸರಿಸಿದ್ದು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಪದ್ಮಭೂಷಣ ಡಾ. ಬಾಲಗಂಗಾಧರನಾಥ ಮಹಾಸ್ವಾಮಿಗಳವರ ದಿವ್ಯ ಕಾಲಘಟ್ಟದಲ್ಲಿ. ಮಹಾಸ್ವಾಮಿಗಳವರು ಈ ಸಿದ್ಧಸಿಂಹಾಸನವನ್ನು ಅಲಂಕರಿಸಿದ ಆ ಸುಮುಹೂರ್ತವು ನಾಡಿನ ಇತಿಹಾಸದಲ್ಲಿ ಒಂದು ಹೊಸ ಕ್ರಾಂತಿಗೆ ನಾಂದಿಯಾಯಿತು.

ಕೇವಲ ಮೂರೂವರೆ ದಶಕಗಳ ಅವಧಿಯಲ್ಲಿ, ಭೈರವನ ಭಕ್ತರಿಗಷ್ಟೇ ಸೀಮಿತವಾಗಿದ್ದ ಈ ಪುಣ್ಯಕ್ಷೇತ್ರವನ್ನು ಒಂದು ವಿಶ್ವಮಾನ್ಯ ಧರ್ಮಪೀಠವನ್ನಾಗಿ ಪರಿವರ್ತಿಸಿದ ಶ್ರೇಯಸ್ಸು ಶ್ರೀಗಳವರದ್ದು. 'ಅನ್ನ, ಅಕ್ಷರ ಮತ್ತು ಆರೋಗ್ಯ' ಎಂಬ ತ್ರಿವಿಧ ದಾಸೋಹಗಳ ಮೂಲಕ ಪ್ರತಿ ಮನೆಯ ಮನಗಳಲ್ಲಿ ದೀಪವಾದ ಅವರು, ಸಮಾಜದ ಸರ್ವತೋಮುಖ ಏಳಿಗೆಗಾಗಿ ತಮ್ಮ ಬದುಕನ್ನೇ ಸಮರ್ಪಿಸಿಕೊಂಡರು.

"ಪರರ ಹಿತಕ್ಕಾಗಿ ಶ್ರಮಿಸಿ ಭಗವಂತನನ್ನು ಪ್ರಸನ್ನಗೊಳಿಸುವುದೇ ಬದುಕಿನ ಸಾರ್ಥಕತೆ" ಎಂಬ ನಿಸ್ವಾರ್ಥ ತತ್ವಕ್ಕೆ ಅವರು ಜೀವಂತ ಉದಾಹರಣೆಯಾಗಿದ್ದರು. “ಸರ್ವೇ ಜನಾಃ ಸುಖಿನೋ ಭವಂತು” ಎಂಬ ವಿಶಾಲ ಭಾವನೆಯೊಂದಿಗೆ, ಅಹೋರಾತ್ರಿ ಸಮಾಜದ ಒಳಿತಿಗಾಗಿ ಶ್ರಮಿಸಿದ ಮಹಾಯೋಗಿ ಅವರು. ತಾವು ಕಂಡ ಲೋಕಕಲ್ಯಾಣದ ಕನಸನ್ನು ನನಸು ಮಾಡುವ ಮೂಲಕ, ನಾಡಿನ ಜನತೆಯ ಪಾಲಿಗೆ ಅಕ್ಷಯ ಚೇತನವಾಗಿ ಇಂದಿಗೂ ನೆಲೆಸಿದ್ದಾರೆ.

ಶ್ರೀಮಠದ ಇತಿಹಾಸದಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರ ಅವಧಿಯನ್ನು 'ಸುವರ್ಣ ಯುಗ' ಎಂದು ಕರೆಯಬಹುದು. ೧೯೪೫ರ ಜನವರಿ ೧೮ರಂದು ರಾಮನಗರ ಜಿಲ್ಲೆಯ ಬಿಡದಿ ಸಮೀಪದ ಬಾನಂದೂರಿನಲ್ಲಿ ಕೃಷಿಕ ಕುಟುಂಬದ ಚಿಕ್ಕಲಿಂಗೇಗೌಡ ಮತ್ತು ಬೋರಮ್ಮ ದಂಪತಿಗಳ ಪುತ್ರನಾಗಿ ಗಂಗಾಧರಯ್ಯ (ಸ್ವಾಮೀಜಿಯವರ ಪೂರ್ವಾಶ್ರಮದ ಹೆಸರು) ಜನಿಸಿದರು. ಬಾಲ್ಯದಿಂದಲೇ ಆಧ್ಯಾತ್ಮದ ಕಡೆಗೆ ಒಲವು ಹೊಂದಿದ್ದ ಇವರು, ೧೯೬೪ರಲ್ಲಿ ತಮ್ಮ ೧೯ನೇ ವಯಸ್ಸಿನಲ್ಲಿ ೭೦ನೇ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ರಮಾನಂದನಾಥ ಮಹಾಸ್ವಾಮೀಜಿಯವರಿಂದ ಸನ್ಯಾಸ ದೀಕ್ಷೆ ಪಡೆದರು. 

೧೯೭೪ರ ಸೆಪ್ಟೆಂಬರ್ ೨೪ರಂದು ಇವರು ೭೧ನೇ ಪೀಠಾಧಿಪತಿಗಳಾಗಿ ಪೀಠಾರೋಹಣ ಮಾಡಿದಾಗ, ಮಠವು ಕೇವಲ ಒಂದು ಸಣ್ಣ ಧಾರ್ಮಿಕ ಕೇಂದ್ರವಾಗಿತ್ತು. ಆದರೆ ಸ್ವಾಮೀಜಿಯವರ ದೂರದೃಷ್ಟಿ ಮತ್ತು ಅವಿರತ ಶ್ರಮದಿಂದ ಅದು ಕೇವಲ ಮೂರುವರೆ ದಶಕಗಳಲ್ಲಿ ಒಂದು ಬೃಹತ್ ಸಾಮಾಜಿಕ ಸಾಮ್ರಾಜ್ಯವಾಗಿ ಬೆಳೆಯಿತು. 

ಸಂಪ್ರದಾಯದಂತೆ ಸಂನ್ಯಾಸ ಎಂದರೆ ಕೇವಲ ವೈಯಕ್ತಿಕ ಮುಕ್ತಿಯ ಮಾರ್ಗ ಎಂಬ ಭಾವನೆ ಇತ್ತು. ಆದರೆ, ಪರಮಪೂಜ್ಯ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳವರು ಸಂನ್ಯಾಸ ಧರ್ಮಕ್ಕೆ ಸಮಾಜ ಧರ್ಮ, ರಾಷ್ಟ್ರ ಧರ್ಮ ಮತ್ತು ಕಾಲ ಧರ್ಮಗಳನ್ನು ಮೇಳವಿಸಿ ಹೊಸ ಭಾಷ್ಯ ಬರೆದರು. ಅವರ ವ್ಯಕ್ತಿತ್ವವು ಎಷ್ಟು ಪ್ರಭಾವಶಾಲಿಯಾಗಿತ್ತೆಂದರೆ, ಇಡೀ ಪ್ರಪಂಚವೇ ಅವರತ್ತ ಆಯಸ್ಕಾಂತದಂತೆ ಆಕರ್ಷಿತವಾಯಿತು.

ಪರಮಪೂಜ್ಯ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳವರು ಮೊದಲು ದೇವಾಲಯಗಳನ್ನು ಕಟ್ಟಲು ಮುಂದಾಗಲಿಲ್ಲ; ಬದಲಾಗಿ ಹಳ್ಳಿ ಹಳ್ಳಿಗಳಲ್ಲಿ ಜ್ಞಾನ ದೇಗುಲಗಳನ್ನು ನಿರ್ಮಿಸಿದರು. "ಸಮಾಜದ ನಿಜವಾದ ಉನ್ನತಿ ಅಡಗಿರುವುದು ಸುಜ್ಞಾನದಲ್ಲಿ" ಎಂಬ ಸತ್ಯವನ್ನು ಅರಿತಿದ್ದ ಶ್ರೀಗಳು, ಶಿಕ್ಷಣ ಕ್ಷೇತ್ರದಲ್ಲಿ ಅಭೂತಪೂರ್ವ ಕ್ರಾಂತಿಯನ್ನೇ ಮಾಡಿದರು. ಗ್ರಾಮೀಣ ಭಾಗದ ಮಕ್ಕಳು ಅಕ್ಷರ ವಂಚಿತರಾಗಬಾರದೆಂಬ ಕಳಕಳಿಯಿಂದ ನಾಡಿನಾದ್ಯಂತ ೪೭೫ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಅಸಂಖ್ಯಾತ ಬಡ ಮಕ್ಕಳ ಭವಿಷ್ಯದ ಕನಸಿಗೆ ರೆಕ್ಕೆಗಳನ್ನು ನೀಡಿದರು.

ಇಂದು ಲಕ್ಷಾಂತರ ವಿದ್ಯಾರ್ಥಿಗಳು ಶ್ರೀಮಠದ ನೆರಳಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದು ಅವರ ಅಚಲ ಶ್ರದ್ಧೆಗೆ ಸಾಕ್ಷಿಯಾಗಿದೆ. ಆಧ್ಯಾತ್ಮಿಕತೆಯ ಜೊತೆಗೆ ವೈಜ್ಞಾನಿಕ ಮನೋಭಾವವನ್ನು ಬೆಳೆಸಿದ ಅವರು, ಗ್ರಾಮೀಣ ಯುವಕರು ಸ್ವಾವಲಂಬಿಗಳಾಗಲು ವೃತ್ತಿಪರ ಶಿಕ್ಷಣಕ್ಕೂ ಒತ್ತು ನೀಡಿದರು. ಅಜ್ಞಾನದ ಅಂಧಕಾರವನ್ನು ಸರಿಸಿ, ಜ್ಞಾನದ ಜ್ಯೋತಿಯನ್ನು ಬೆಳಗುವ ಮೂಲಕ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠವನ್ನು 'ನ ಭೂತೋ ನ ಭವಿಷ್ಯತಿ' ಎಂಬಂತೆ ಜ್ಞಾನದ ಮಹಾಮನೆಯನ್ನಾಗಿ ರೂಪಿಸಿದ ಮಹಾಚೇತನ ಶ್ರೀಗಳವರು.

ಗ್ರಾಮೀಣ ಭಾಗದ ಬಡ ಜನರಿಗೆ ಶಿಕ್ಷಣವೇ ಬದುಕಿನ ಅಸ್ತ್ರ ಎಂದು ನಂಬಿದ್ದ ಮಹಾಸ್ವಾಮೀಜಿಯವರು ೧೯೭೩ರಲ್ಲಿ ‘ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್' ಸ್ಥಾಪಿಸಿದರು. ಇಂದು ಈ ಟ್ರಸ್ಟ್ ಅಡಿಯಲ್ಲಿ ಶಿಶುವಿಹಾರದಿಂದ ಹಿಡಿದು ಮೆಡಿಕಲ್, ಇಂಜಿನಿಯರಿಂಗ್‌ವರೆಗೆ ಸುಮಾರು ೫೭೫ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಈ ಸಂಸ್ಥೆಗಳಲ್ಲಿ ಸುಮಾರು ಒಂದುವರೆ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದು, ಅದರಲ್ಲಿ ಶೇಕಡಾ ೮೫ರಷ್ಟು ವಿದ್ಯಾರ್ಥಿಗಳು ಗ್ರಾಮೀಣ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಬಡ ವಿದ್ಯಾರ್ಥಿಗಳಿಗಾಗಿ ಉಚಿತ ವಸತಿ ನಿಲಯಗಳನ್ನು ಸ್ಥಾಪಿಸಿರುವುದು ಮಠದ ದೊಡ್ಡ ಉದಾತ್ತ ಕಾರ್ಯವಾಗಿದೆ.

ಗ್ರಾಮೀಣ ಜನರಿಗೆ ತುರ್ತು ಆರೋಗ್ಯ ಸೇವೆ ಒದಗಿಸಲು ಸ್ವಾಮೀಜಿಯವರು ಹಾಸನ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬೆಳ್ಳೂರು ಕ್ರಾಸ್ ಬಳಿ ಬೃಹತ್ ಆಸ್ಪತ್ರೆಯನ್ನು ಸ್ಥಾಪಿಸಿದರು. ಈ ‘ಆದಿಚುಂಚನಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ'ವು ಇಂದು ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿದ್ದು, ಪ್ರತಿದಿನ ಸಾವಿರಾರು ಬಡ ರೋಗಿಗಳಿಗೆ ಉಚಿತ ಮತ್ತು ಅತಿ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುತ್ತಿದೆ. ಇದಲ್ಲದೆ, ಬೆಂಗಳೂರಿನಲ್ಲಿ ‘ಬಿ.ಜಿ.ಎಸ್ ಗ್ಲೋಬಲ್ ಆಸ್ಪತ್ರೆ'ಯನ್ನು ಸ್ಥಾಪಿಸಿ ಮಲ್ಟಿ-ಸ್ಪೆಷಾಲಿಟಿ ಚಿಕಿತ್ಸೆಯನ್ನು ಜನಸಾಮಾನ್ಯರಿಗೆ ದೊರೆಯುವಂತೆ ಮಾಡಿದರು. 

ಪರಮಪೂಜ್ಯರು ಶ್ರೀಮಠದ ಮೂಲಕ ಕೇವಲ ಒಂದು ಸಮಾಜವನ್ನಷ್ಟೇ ಉದ್ಧರಿಸಿದವರಲ್ಲ. ಯಾವ ಹಿಂದುಳಿದ ಸಮಾಜಕ್ಕೆ ಸಂಘಟಿತ ಶಕ್ತಿ ಇರಲಿಲ್ಲವೋ, ಆಧುನಿಕ ಜ್ಞಾನದ ಅರಿವೂ ಇರಲಿಲ್ಲವೋ, ಯಾವ ಸಮಾಜ ಸಾಂಸ್ಕೃತಿಕವಾಗಿ ಪರಾವಲಂಬಿಯಾಗಿತ್ತೋ ಅಂತಹ ಸಮಾಜದ ಜನಮಾನಸಕ್ಕೆ ಚೇತನ ಶಕ್ತಿಯಾದವರು. ಮಾನವ ಕುಲದ ಕಲ್ಯಾಣಕ್ಕಾಗಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟು ಜಡವಾಗಿದ್ದ ಸಮಾಜವನ್ನು ಜಾಗೃತಗೊಳಿಸಿದ್ದು ಮಾತ್ರವಲ್ಲ, ಸಮಷ್ಟಿಯ ಉದ್ದಾರ ಮಾಡಿದ ಮನುಕುಲೋದ್ಧಾರಕರೆನಿಸಿದ್ದರು. ಸರ್ವ ಜನಾಂಗದವರನ್ನೂ, ಸರ್ವ ಧರ್ಮೀಯರನ್ನೂ ಸಮಾನವಾಗಿ ಪ್ರೀತಿಸಿದ ಹೆಗ್ಗಳಿಕೆ ಮಹಾಸ್ವಾಮೀಜಿಯವರಿಗೆ ಸಲ್ಲುತ್ತದೆ. ಸಂಸ್ಕೃತ ಭಾಷೆ ಒಂದು ವರ್ಗಕ್ಕಷ್ಟೇ ಸೀಮಿತವಾಗದೆ ಗ್ರಾಮೀಣ ಪ್ರದೇಶದ ಎಲ್ಲ ವರ್ಗದ ಮಕ್ಕಳೂ ಸಂಸ್ಕೃತವನ್ನು ಅಭ್ಯಸಿಸಲು ಅನುಕೂಲ ಕಲ್ಪಿಸಿಕೊಡಬೇಕೆಂದು ಸಂಕಲ್ಪಿಸಿ ಶ್ರೀಕ್ಷೇತ್ರದಲ್ಲಿ ಕಾಲಭೈರವೇಶ್ವರ ಸಂಸ್ಕೃತ ವೇದ-ಆಗಮ  ಮಹಾವಿದ್ಯಾಲಯವನ್ನು, ಶಾಖಾಮಠಗಳಿರುವೆಡೆಯಲ್ಲೆಲ್ಲಾ ಸಂಸ್ಕೃತ ಪಾಠಶಾಲೆಗಳನ್ನೂ ತೆರೆದು, ಜಾತಿ. ಮತಭೇದವಿಲ್ಲದೆ ಅಲ್ಲಿ ಎಲ್ಲರೂ ಅಧ್ಯಯನ ಮಾಡುವಂತೆ ಅವಕಾಶ ಕಲ್ಪಿಸಿದ್ದಾರೆ. ವಿದ್ಯೆಯನ್ನು ನೀಡುವುದರಲ್ಲಿ ಯಾವತ್ತೂ ಜಾತಿ, ವರ್ಗ, ವರ್ಣಗಳ ಭೇದಭಾವ ಶ್ರೀಮಠಕ್ಕೆ ಅಂಟದಂತೆ ನೋಡಿಕೊಂಡಿದ್ದಾರೆ.

ಆಧುನಿಕ ನಾಗರಿಕತೆಯ ಅಬ್ಬರದಲ್ಲಿ ಉಪೇಕ್ಷೆಗೆ ಒಳಗಾಗಿ ನಶಿಸಿ ಹೋಗುತ್ತಿದ್ದ ಜನಪದ ಸಂಸ್ಕೃತಿಯನ್ನು ಸಂರಕ್ಷಿಸಿ ಅದರ ಪುನರುತ್ಥಾನಕ್ಕಾಗಿ ಸಂಕಲ್ಪಿಸಿದವರು ಡಾ. ಬಾಲಗಂಗಾಧರನಾಥ ಮಹಾಸ್ವಾಮಿಗಳವರು. ಜನಪದ ಕಲೆ ಸಂಸ್ಕೃತಿಯ ಪುನರುತ್ಥಾನಕ್ಕೆ ಪೂಜ್ಯರು ನೀಡಿದ ನೆರವು ಅನನ್ಯವಾದುದು. ಪರಮಪೂಜ್ಯ ಗುರೂಜಿಯವರು ಜನಪದದ ಮೂಲಬೇರುಗಳನ್ನು. ಜನಪದ ಸಂಸ್ಕೃತಿ ಹಾಗೂ ಮೌಲ್ಯಗಳನ್ನು ಸಂರಕ್ಷಿಸುವ ಸಂಕಲ್ಪವನ್ನೊಂದಿ ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕಳೆದ ನಾಲ್ಕು ದಶಕಗಳ ಹಿಂದೆಯೇ ಮುಂದಡಿಯಿಟ್ಟವರು. ಜನಪದ ಕಲೆ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ ಹಾಗೂ ಜನಪದ ಕಲಾವಿದರ ಬದುಕನ್ನು ಹಸನುಗೊಳಿಸುವ ನಿಟ್ಟಿನಲ್ಲಿ ಕಳೆದ ನಲವತ್ತು ವರ್ಷಗಳಿಂದಲೂ ಶ್ರೀಕ್ಷೇತ್ರ ಆದಿಚುಂಚನಗಿರಿ ಯಲ್ಲಿ ರಾಜ್ಯಮಟ್ಟದ ಜಾನಪದ ಕಲಾಮೇಳವನ್ನು ಆಯೋಜಿಸಿ. ತನ್ಮೂಲಕ ಜನಪದ ಹಾಗೂ ಜನಪದರ ಬದುಕನ್ನು ಸುವ್ಯವಸ್ಥಿತಗೊಳಿಸುವಲ್ಲಿ ಅಪೂರ್ವ ಕೊಡುಗೆಯನ್ನು ನೀಡಿರುವುದು ಸ್ಮರಣಾರ್ಹ. ಶ್ರೀಗಳವರು ಜನಪದರಿಗಾಗಿ, ಜನಪದ ಕಲೆಗಳಿಗಾಗಿ ತಮ್ಮ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವದ ದಿನಗಳನ್ನು ಮೀಸಲಿರಿಸಿ ಪಟ್ಟಾಭಿಷೇಕ ಮಹೋತ್ಸವವನ್ನು ಜನಪದ ಕಲಾಮೇಳವನ್ನಾಗಿ ಪರಿವರ್ತಿಸಿದ್ದರು. ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರನ್ನು ಗುರುತಿಸಿ ಗೌರವಿಸುವು ದರಿಂದ ನಾಡಿನ ಪ್ರಗತಿಗೆ ನೆರವು ನೀಡಿದಂತಾಗುತ್ತದೆಂದು ನಂಬಿದ್ದ ಸ್ವಾಮಿಗಳವರು ಪ್ರತಿವರ್ಷ ಐದು ಮಂದಿ ಗಣ್ಯರಿಗೆ ‘ಚುಂಚಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದ್ದರು. ಇಂದಿಗೂ ಶ್ರೀಕ್ಷೇತ್ರ ಆದಿಚುಂಚನಗಿರಿಯಲ್ಲಿ ಪ್ರತಿವರ್ಷ ನಡೆಯುವ ಜಾನಪದ ಕಲಾಮೇಳದಲ್ಲಿ ರಾಜ್ಯಾದ್ಯಂತ ಯಾವುದೇ ಜಾತಿ, ಮತ, ಧರ್ಮಗಳ ಭೇದವಿಲ್ಲದೆ ಇಪ್ಪತ್ತು ಸಾವಿರಕ್ಕೂ ಹೆಚ್ಚು ಜಾನಪದ ಕಲಾವಿದರು ಮೇಳೈಸಿ ಜಾನಪದರ ಕಲಾಜಾತ್ರೆಯನ್ನೇ ನಡೆಸುತ್ತಿರುವುದನ್ನು ಕಾಣಬಹುದು.

"ಹಸಿದವನಿಗೆ ಅನ್ನ ನೀಡದ ಆಧ್ಯಾತ್ಮಕ್ಕೆ ಬೆಲೆಯಿಲ್ಲ" ಎಂದು ಸ್ವಾಮೀಜಿ ಹೇಳುತ್ತಿದ್ದರು. ಆದಿಚುಂಚನಗಿರಿ ಕ್ಷೇತ್ರದಲ್ಲಿ ಪ್ರತಿದಿನ ಸಾವಿರಾರು ಜನರಿಗೆ ಉಚಿತವಾಗಿ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಮಠದ ಯಾವುದೇ ಶಾಖೆಗೆ ಹೋದರೂ ಅಲ್ಲಿ ಭಕ್ತರಿಗೆ ಅನ್ನ ಪ್ರಸಾದ ಸಿದ್ಧವಿರುತ್ತದೆ. ಈ ನಿರಂತರ ಅನ್ನದಾನದ ಕಾರಣಕ್ಕಾಗಿಯೇ ಈ ಮಠವನ್ನು ಜನ ಪ್ರೀತಿಯಿಂದ 'ಅನ್ನದಾನಿ ಮಠ' ಎಂದು ಕರೆಯುತ್ತಾರೆ. 

ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರು ಕೇವಲ ಮಾನವ ಕುಲದ ಸೇವೆಯನ್ನಷ್ಟೇ ಮಾಡಲಿಲ್ಲ, ಪ್ರಕೃತಿಯ ಮೇಲಿನ ಅವರ ಪ್ರೀತಿಯೂ ಅಪಾರವಾಗಿತ್ತು. ನಾಡಿನಲ್ಲಿ ಸತತವಾಗಿ ಉಂಟಾಗುತ್ತಿದ್ದ ಬರಗಾಲವನ್ನು ನೋಡಿ ಅವರು 'ವನ ಸಂವರ್ಧನೆ' ಎಂಬ ಅಭಿಯಾನವನ್ನು ಕೈಗೆತ್ತಿಕೊಂಡರು. ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ಸುಮಾರು ೫ ಕೋಟಿ ಗಿಡಗಳನ್ನು ನೆಟ್ಟು ಪೋಷಿಸುವ ಬೃಹತ್ ಯೋಜನೆಯನ್ನು ಅವರು ಸಾಕಾರಗೊಳಿಸಿದರು. ಬೆಂಗಳೂರಿನ ಸುತ್ತಮುತ್ತಲಿನ ಹಸಿರು ಹೊದಿಕೆಯನ್ನು ಹೆಚ್ಚಿಸಲು ಇವರು ಕಾರಣಕರ್ತರಾದರು. ಇದಕ್ಕಾಗಿ ಅವರಿಗೆ ಕರ್ನಾಟಕ ಸರ್ಕಾರವು 'ಪರಿಸರ ರತ್ನ' ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಅಲ್ಲದೆ, 'ಜಲವರ್ಧನೆ' ಯೋಜನೆಯ ಮೂಲಕ ಮಂಡ್ಯ ಮತ್ತು ಸುತ್ತಮುತ್ತಲ ಜಿಲ್ಲೆಗಳ ಅನೇಕ ಕೆರೆಗಳನ್ನು ಹೂಳೆತ್ತಿಸಿ ಅಂತರ್ಜಲ ಮಟ್ಟ ಹೆಚ್ಚಿಸಲು ಶ್ರಮಿಸಿದರು. 

ನಾಥ ಪರಂಪರೆಯಲ್ಲಿ ಗೋವಿಗೆ ಪವಿತ್ರ ಸ್ಥಾನವಿದೆ. ಗೋವುಗಳನ್ನು ಕಸಾಯಿಖಾನೆಗೆ ಹೋಗದಂತೆ ತಡೆಯಲು ಸ್ವಾಮೀಜಿಯವರು ರಾಜ್ಯದ ಹಲವೆಡೆ ಬೃಹತ್ ಗೋಶಾಲೆಗಳನ್ನು ಸ್ಥಾಪಿಸಿದರು. ಮಂಡ್ಯದ ಸಾತನೂರು, ನಾಗಮಂಗಲ, ಚಿತ್ರದುರ್ಗ ಮತ್ತು ಬೆಂಗಳೂರಿನ ಕುಂಬಳಗೋಡು ಬಳಿಯ ಕೆಂಚನಹಳ್ಳಿ ಶಾಖಾ ಮಠಗಳಲ್ಲಿ ಸುಸಜ್ಜಿತ ಗೋಶಾಲೆಗಳಿವೆ. ಇಲ್ಲಿ ಸಾವಿರಾರು ದೇಸೀ ತಳಿಯ ಹಸುಗಳನ್ನು ಅತ್ಯಂತ ಜಾಗರೂಕತೆಯಿಂದ ಸಲಹಲಾಗುತ್ತಿದೆ.

ಸ್ವಾಮೀಜಿಯವರು ಅಂಧ ಮಕ್ಕಳ ಬದುಕಿನಲ್ಲಿ ಬೆಳಕು ತರಲು ರಾಮನಗರ ತಾಲ್ಲೂಕಿನ ಜಾನಪದ ಲೋಕದ ಸಮೀಪ 'ಅಂಧ ಮಕ್ಕಳ ಶಾಲೆ'ಯನ್ನು ಆರಂಭಿಸಿದರು. ಇಂದು ಇಲ್ಲಿ ನೂರಾರು ಅಂಧ ಮಕ್ಕಳು ಉಚಿತವಾಗಿ ಶಿಕ್ಷಣ ಮತ್ತು ಸಂಗೀತ ಕಲಿಯುತ್ತಿದ್ದಾರೆ. ಅಲ್ಲದೆ, ವಯಸ್ಸಾದವರಿಗಾಗಿ ವೃದ್ಧಾಶ್ರಮಗಳನ್ನು ಮತ್ತು ನಿರ್ಗತಿಕ ಮಹಿಳೆಯರಿಗಾಗಿ ಆಶ್ರಮಗಳನ್ನು ಸ್ಥಾಪಿಸಿ ಸಮಾಜದ ನೊಂದ ವರ್ಗದವರಿಗೆ ನೆರವಾದರು. ಜಾತಿ ರಹಿತ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ 'ಸಾಮೂಹಿಕ ವಿವಾಹ'ಗಳನ್ನು ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಿ ಬಡ ಕುಟುಂಬಗಳ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿದರು. 

ಶ್ರೀಮಠವು ಕೇವಲ ಕರ್ನಾಟಕಕ್ಕೆ ಸೀಮಿತವಾಗದೆ ಭಾರತದ ಇತರ ಭಾಗಗಳಲ್ಲಿಯೂ ತನ್ನ ಶಾಖೆಗಳನ್ನು ಹೊಂದಿದೆ. ಉತ್ತರ ಭಾರತಕ್ಕೆ ಹೋಗುವ ಕನ್ನಡಿಗರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಕಾಶಿ (ವಾರಣಾಸಿ) ಮತ್ತು ದೆಹಲಿಯಲ್ಲಿ ಶಾಖಾ ಮಠಗಳನ್ನು ಸ್ಥಾಪಿಸಲಾಗಿದೆ. ಕಾಶಿಯ ಮಣಿಕರ್ಣಿಕಾ ಘಾಟ್ ಬಳಿ ಇರುವ ಶ್ರೀಮಠದ ಶಾಖೆಯು ಅಲ್ಲಿಗೆ ಹೋಗುವ ಭಕ್ತರಿಗೆ ಆಶ್ರಯ ತಾಣವಾಗಿದೆ. ವಿದೇಶಗಳಲ್ಲಿ ನೆಲೆಸಿರುವ ಭಾರತೀಯರಿಗೆ ಆಧ್ಯಾತ್ಮಿಕ ಸಂಸ್ಕಾರ ನೀಡಲು ಅಮೆರಿಕದ ಮಿಚಿಗನ್ ಮತ್ತು ಜರ್ಮನಿಯ ಬರ್ಲಿನ್‌ನಲ್ಲಿ ಮಠದ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. 'ಆದಿಚುಂಚನಗಿರಿ ಕಲ್ಚರಲ್ ಅಂಡ್ ಸ್ಪಿರಿಚುಯಲ್ ಫೌಂಡೇಶನ್' ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಯೋಗ ಮತ್ತು ಸಂಸ್ಕೃತಿಯ ಪ್ರಸಾರವಾಗುತ್ತಿದೆ.

ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಈ ಲೋಕೋತ್ತರ ಸೇವೆಯನ್ನು ಪರಿಗಣಿಸಿ ಅನೇಕ ಗೌರವಗಳು ಅವರನ್ನು ಹುಡುಕಿಕೊಂಡು ಬಂದವು. ೨೦೧೦ರಲ್ಲಿ ಭಾರತ ಸರ್ಕಾರವು ಅವರಿಗೆ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಪದ್ಮಭೂಷಣ' ನೀಡಿ ಗೌರವಿಸಿತು.

೨೦೧೩ರ ಜನವರಿ ೧೩ರಂದು ಈ ಮಹಾನ್ ಚೇತನವು ಕಾಲಭೈರವೇಶ್ವರನಲ್ಲಿ ಲೀನವಾದಾಗ ಇಡೀ ಕರ್ನಾಟಕವೇ ಕಣ್ಣೀರು ಹಾಕಿತು. ಅವರು ಭೌತಿಕವಾಗಿ ದೂರವಾದರೂ, ಅವರು ಹಾಕಿಕೊಟ್ಟ ದಾರಿ ಮತ್ತು ಅವರು ಸ್ಥಾಪಿಸಿದ ಸಂಸ್ಥೆಗಳು ಲಕ್ಷಾಂತರ ಜೀವಗಳಿಗೆ ಇಂದಿಗೂ ಆಧಾರವಾಗಿವೆ.



ಜ್ಞಾನ ಮತ್ತು ವಿಜ್ಞಾನದ ಸಮನ್ವಯಕಾರ : ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು

ಭೈರವೈಕ್ಯ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ನಂತರ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಸಿದ್ಧ ಸಿಂಹಾಸನವನ್ನು ಅಲಂಕರಿಸಿದವರು ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು. ಇವರ ಆಗಮನವು ಮಠಕ್ಕೆ ಒಂದು ಹೊಸ ತಾಂತ್ರಿಕ ಮತ್ತು ವೈಜ್ಞಾನಿಕ ದೃಷ್ಟಿಕೋನವನ್ನು ನೀಡಿದೆ. ೧೯೬೯ರ ಜುಲೈ ೨೦ರಂದು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಚೀರನಹಳ್ಳಿಯಲ್ಲಿ ಜನಿಸಿದ ಇವರು (ಪೂರ್ವಾಶ್ರಮದ ಹೆಸರು ನಾಗರಾಜು), ಅತ್ಯಂತ ಬಡ ಕೃಷಿಕ ಕುಟುಂಬದಿಂದ ಬಂದವರು. ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಶೈಕ್ಷಣಿಕ ಹಿನ್ನೆಲೆಯು ಅತ್ಯಂತ ಆಕರ್ಷಕವಾಗಿದೆ. ಇವರು ಭಾರತದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಐ.ಐ.ಟಿ ಮದ್ರಾಸ್‌ನಲ್ಲಿ ಸ್ಟ್ರಕ್ಚರಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಎಂ.ಟೆಕ್ ಪದವಿ ಪಡೆದಿದ್ದಾರೆ, ಅದೂ ಚಿನ್ನದ ಪದಕದೊಂದಿಗೆ. ಸನ್ಯಾಸ ಸ್ವೀಕರಿಸುವ ಮುನ್ನ ಇವರು ಪುಣೆಯ ಕೇಂದ್ರ ಜಲ ಮತ್ತು ಶಕ್ತಿ ಸಂಶೋಧನಾ ಕೇಂದ್ರದಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸಿದ್ದರು. ಆದರೆ ಲೌಕಿಕ ಯಶಸ್ಸು ಅವರನ್ನು ತೃಪ್ತಿಪಡಿಸಲಿಲ್ಲ. ರಾಮನಗರದ ಅಂಧ ಮಕ್ಕಳ ಶಾಲೆಯಲ್ಲಿ ಅವರು ಮಾಡಿದ ಸ್ವಯಂಸೇವಕ ಕೆಲಸವು ಅವರ ಜೀವನದ ದಾರಿಯನ್ನು ಬದಲಿಸಿತು. 

೧೯೯೮ರಲ್ಲಿ ಅವರು ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರಿಂದ ಸನ್ಯಾಸ ದೀಕ್ಷೆ ಪಡೆದರು. ಆಧುನಿಕ ವಿಜ್ಞಾನದ ಅರಿವು ಮತ್ತು ವೇದೋಪನಿಷತ್ತುಗಳ ಜ್ಞಾನದ ಅಪರೂಪದ ಸಂಗಮ ಇವರಲ್ಲಿ ಕಾಣಬಹುದು. ಇವರು ಸಂಸ್ಕೃತದಲ್ಲಿಯೂ ಪಾಂಡಿತ್ಯ ಹೊಂದಿದ್ದು, ಗುಲ್ಬರ್ಗ ವಿಶ್ವವಿದ್ಯಾಲಯದಿಂದ 'ನಾಥ ಪಂಥ'ದ ಕುರಿತಾದ ಅಧ್ಯಯನಕ್ಕೆ ಪಿ.ಎಚ್.ಡಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. 

ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಕನಸಾಗಿದ್ದ 'ಆದಿಚುಂಚನಗಿರಿ ವಿಶ್ವವಿದ್ಯಾಲಯ'ವನ್ನು ೨೦೧೮ರಲ್ಲಿ ಸಾಕಾರಗೊಳಿಸಿದ್ದು, ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಅತಿದೊಡ್ಡ ಸಾಧನೆ. ನಾಗಮಂಗಲ ತಾಲ್ಲೂಕಿನ ಬಿ.ಜಿ.ನಗರದಲ್ಲಿರುವ ಈ ವಿಶ್ವವಿದ್ಯಾಲಯವು ಇಂದು ಸಂಶೋಧನೆ ಮತ್ತು ಉನ್ನತ ಶಿಕ್ಷಣದಲ್ಲಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತಿದೆ. ಈ ವಿಶ್ವವಿದ್ಯಾಲಯದ ಅಡಿಯಲ್ಲಿ ಮೆಡಿಕಲ್, ಇಂಜಿನಿಯರಿಂಗ್, ಫಾರ್ಮಸಿ ಮತ್ತು ನರ್ಸಿಂಗ್ ವಿಭಾಗಗಳು ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿವೆ. ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರಗಳು  ಬಹುಶಿಸ್ತೀಯ ಸಂಶೋಧನಾ ಕೇಂದ್ರಗಳಾಗಿದ್ದು, ಇಲ್ಲಿ ಆಧುನಿಕ ವಿಜ್ಞಾನ ಮತ್ತು ಸಾಂಪ್ರದಾಯಿಕ ಜ್ಞಾನದ ಕುರಿತು ಅಧ್ಯಯನ ನಡೆಯುತ್ತಿದೆ. ಚಿಕ್ಕಬಳ್ಳಾಪುರದ ನಂದಿ ಗ್ರಾಮದಲ್ಲಿ ಸ್ಥಾಪಿಸಲಾದ ಉಚಿತ ವಸತಿ ಶಾಲೆಯವನ್ನು ಶ್ರೀಮಠದ ವತಿಯಿಂದ ಸ್ಥಾಪಿಸಲಾಗಿದ್ದು, ಇಲ್ಲಿ ಅತ್ಯಂತ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಅಂತರರಾಷ್ಟ್ರೀಯ ಮಟ್ಟದ ಶಿಕ್ಷಣ ಮತ್ತು ಸಂಸ್ಕಾರವನ್ನು ನೀಡಲಾಗುತ್ತಿದೆ. 

ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಕೇವಲ ಮಠದ ಆಡಳಿತಕ್ಕೆ ಸೀಮಿತವಾಗದೆ, ಸ್ವತಃ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾರೆ. ಚಿಕ್ಕಬಳ್ಳಾಪುರದ ಶಾಖಾ ಮಠದಲ್ಲಿ ಅವರು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕೇವಲ ತಾಂತ್ರಿಕ ವಿಷಯಗಳನ್ನಷ್ಟೇ ಅಲ್ಲದೆ, ನೈತಿಕ ಮೌಲ್ಯ ಮತ್ತು ಜೀವನ ನಿರ್ವಹಣೆಯ ಕುರಿತು ತರಗತಿಗಳನ್ನು ತೆಗೆದುಕೊಳ್ಳುತ್ತಾರೆ. ಅವರ ಭಾಷಣಗಳು ವೈಜ್ಞಾನಿಕ ತರ್ಕದಿಂದ ಕೂಡಿರುವುದರಿಂದ ಯುವಜನತೆಯನ್ನು ಬಹಳವಾಗಿ ಆಕರ್ಷಿಸುತ್ತವೆ. ಆಕ್ಸ್ಫರ್ಡ್, ಕೇಂಬ್ರಿಡ್ಜ್ ಮತ್ತು ಪ್ರಿನ್ಸ್ಟನ್‌ನಂತಹ ಜಾಗತಿಕ ವಿಶ್ವವಿದ್ಯಾಲಯಗಳಲ್ಲಿ ಅವರು ನೀಡಿರುವ ಉಪನ್ಯಾಸಗಳು ಮಠದ ಕೀರ್ತಿಯನ್ನು ವಿಶ್ವವ್ಯಾಪಿ ಮಾಡಿದೆ. ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಶ್ರೀಮಠದ ಆಡಳಿತ ವ್ಯವಸ್ಥೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಿದ್ದಾರೆ. ‘ಡಿಜಿಮೆಡ್' ನಂತಹ ನವೀನ ಕಾರ್ಯಕ್ರಮಗಳ ಮೂಲಕ ವೈದ್ಯಕೀಯ ಶಿಕ್ಷಣದಲ್ಲಿ ಡಿಜಿಟಲ್ ಉಪಕರಣಗಳ ಬಳಕೆಯನ್ನು ಹೆಚ್ಚಿಸಿದ್ದಾರೆ. ಇದಲ್ಲದೆ, ಮಠದ ಆವರಣದಲ್ಲಿ ಪರಿಸರ ಸ್ನೇಹಿ ಇಂಧನ ವ್ಯವಸ್ಥೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಬೇಕೆಂಬ ಉದ್ದೇಶದಿಂದ ಮಠವು 'ಮಹಿಳಾ ಜಾಗೃತಿ ಶಿಬಿರ'ಗಳನ್ನು ರಾಜ್ಯದಾದ್ಯಂತ ಆಯೋಜಿಸುತ್ತಿದೆ. ಗ್ರಾಮೀಣ ಭಾಗದ ಮಹಿಳೆಯರಿಗೆ ಸ್ವಯಂ ಉದ್ಯೋಗ ತರಬೇತಿ ನೀಡಲಾಗುತ್ತಿದೆ. ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ವಸತಿ ಸೌಲಭ್ಯ ಮತ್ತು ವಿದ್ಯಾರ್ಥಿವೇತನವನ್ನು ನೀಡುವ ಮೂಲಕ ಅವರ ಉನ್ನತ ಶಿಕ್ಷಣಕ್ಕೆ ಮಠವು ಪ್ರೋತ್ಸಾಹ ನೀಡುತ್ತಿದೆ. 

ಆದಿಚುಂಚನಗಿರಿಯ ಮತ್ತೊಂದು ವಿಶೇಷತೆಯೆಂದರೆ ಅದು ನವಿಲುಗಳ ಸಂರಕ್ಷಿತ ಪ್ರದೇಶ. ಮಠದ ಆವರಣದಲ್ಲಿ ನವಿಲುಗಳು ಭಯವಿಲ್ಲದೆ ಓಡಾಡುತ್ತವೆ. "ಮಯೂರವನ" ಎಂದು ಕರೆಯಲ್ಪಡುವ ಈ ಪ್ರದೇಶವು ಪ್ರಕೃತಿ ಪ್ರೇಮಿಗಳಿಗೆ ಸ್ವರ್ಗದಂತಿದೆ. ಪ್ರತಿದಿನ ಬೆಳಿಗ್ಗೆ ಮಠದ ಸುತ್ತಮುತ್ತ ಕೇಳಿಬರುವ ನವಿಲುಗಳ ಕೂಗು ಮತ್ತು ವೇದ ಮಂತ್ರಗಳ ಘೋಷ ಆಧ್ಯಾತ್ಮಿಕ ಉತ್ತುಂಗವನ್ನು ನೀಡುತ್ತದೆ. 

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಕಳೆದ ಐವತ್ತು ವರ್ಷಗಳಲ್ಲಿ ಮಾಡಿರುವ ಸಾಧನೆಗಳು ಅಕ್ಷರಶಃ ಪವಾಡಗಳೇ ಸರಿ. ಕೇವಲ ಒಂದು ಧಾರ್ಮಿಕ ಪೀಠವು ಹೇಗೆ ಒಂದು ಇಡೀ ಸಮಾಜದ ಶೈಕ್ಷಣಿಕ ಮತ್ತು ಆರ್ಥಿಕ ಚಿತ್ರಣವನ್ನು ಬದಲಿಸಬಹುದು ಎಂಬುದಕ್ಕೆ ಈ ಮಠವೇ ಅತ್ಯುತ್ತಮ ಉದಾಹರಣೆ. ಭೈರವೈಕ್ಯ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರು ಹಾಕಿಕೊಟ್ಟ ಭದ್ರ ಬುನಾದಿಯ ಮೇಲೆ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಜ್ಞಾನ ಮತ್ತು ವಿಜ್ಞಾನದ ಮಹಲನ್ನು ಕಟ್ಟುತ್ತಿದ್ದಾರೆ. ಅನ್ನದ ಮೂಲಕ ಹಸಿವು ನೀಗಿಸುವುದು, ಅಕ್ಷರದ ಮೂಲಕ ಅರಿವು ಮೂಡಿಸುವುದು ಮತ್ತು ಆರೋಗ್ಯದ ಮೂಲಕ ಜೀವ ಉಳಿಸುವುದು - ಈ ಮಠದ ಮೂಲ ಮಂತ್ರವಾಗಿದೆ. ಇವತ್ತು ಲಕ್ಷಾಂತರ ವಿದ್ಯಾರ್ಥಿಗಳು ಇಲ್ಲಿ ಕಲಿತು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದಾರೆ. ಸಮಾಜದ ನೊಂದವರು, ಅಶಕ್ತರು ಮತ್ತು ನಿರ್ಗತಿಕರು ಈ ಮಠದ ನೆರಳಿನಲ್ಲಿ ಬದುಕುತ್ತಿದ್ದಾರೆ. ಸೃಷ್ಟಿ ಸೌಂದರ್ಯದ ತಾಣವಾದ ಆದಿಚುಂಚನಗಿರಿಯು ಕೇವಲ ನೋಡುವ ಕಣ್ಣುಗಳಿಗಷ್ಟೇ ಅಲ್ಲದೆ, ಪ್ರತಿಯೊಬ್ಬರ ಹೃದಯಕ್ಕೂ ತಂಪನ್ನು ನೀಡುವ ಮಹಾ ಕ್ಷೇತ್ರವಾಗಿದೆ. ಭವಿಷ್ಯದಲ್ಲಿಯೂ ಈ ಸಿದ್ಧ ಸಿಂಹಾಸನವು ತನ್ನ ದಿವ್ಯ ಪ್ರಭೆಯಿಂದ ನಾಡಿನ ಮತ್ತು ರಾಷ್ಟ್ರದ ಉದ್ಧಾರಕ್ಕೆ ಶ್ರಮಿಸುತ್ತಾ, ಮಾನವೀಯತೆಯ ದಾರಿದೀಪವಾಗಿ ಬೆಳಗಲಿ ಎಂಬುದು ಸಮಸ್ತ ಭಕ್ತರ ಆಶಯವಾಗಿದೆ.

* * * * *


Apr 21, 2024

ನಾಟ್ಯರಾಣಿ ಶಾಂತಲಾ

 

ನಾಟ್ಯರಾಣಿ ಶಾಂತಲಾ

    ನಾಟ್ಯರಾಣಿ ಶಾಂತಲಾ ದೇವಿಯು ೧೨ ನೇ ಶತಮಾನದ ಪ್ರಸಿದ್ದ ಹೊಯ್ಸಳ ರಾಜವಂಶದ ರಾಜ ವಿಷ್ಣುವರ್ಧನನ ಹೆಂಡತಿ. ರಾಣಿ ಶಾಂತಲಾ ದೇವಿಯು ಲಲಿತಕಲೆಗಳಲ್ಲಿ ಪಾರಂಗತಳಾಗಿದ್ದಳು. ಅವಳು ನೃತ್ಯ, ಗಾಯನ ಮತ್ತು ವಾದ್ಯ ಸಂಗೀತದಲ್ಲಿ ಉತ್ತಮವಾದಳು. ಆಕೆ ಭರತನಾಟ್ಯ ನೃತ್ಯ ಪ್ರಕಾರದಲ್ಲಿ ಚೆನ್ನಾಗಿ ತರಬೇತಿ ಪಡೆದಿದ್ದಳು. ಅವಳು ಜೈನ ಧರ್ಮದ ಅನುಯಾಯಿಯಾಗಿದ್ದಳು. ವಿಷ್ಣುವರ್ಧನನ ಮೂಲತಃ ಜೈನನೇ ಆಗಿದ್ದವನು. ಆಗಿನ ಅವರ ಹೆಸರು ‘ಬಿಟ್ಟಿದೇವ’. ಶ್ರೀ ವೈಷ್ಣವ ಶಿಕ್ಷಕರಾದ ರಾಮಾನುಜಚಾರ್ಯರ ಪ್ರಭಾವದಿಂದ ಅವರು ಶ್ರೀ ವೈಷ್ಣವ ಧರ್ಮಕ್ಕೆ ಮತಾಂತರಗೊAಡರು. ಆದರೆ ವಿಷ್ಣುವರ್ಧನ ಜೈನ ಧರ್ಮವನ್ನು ಪೋಷಿಸುವ ಕಾರ್ಯವನ್ನು ಮುಂದುವರೆಸಿದರು. ರಾಣಿ ಶಾಂತಲಾ ದೇವಿಯು ಚೆನ್ನಕೇಶವ ದೇವಾಲಯದ ರೇಖೆಗಳ ಆಧಾರದ ಮೇಲೆ ಜಿನ್ನಿಗರಾಯ ದೇವಾಲಯ ಎಂಬ ದೇವಾಲಯವನ್ನು ಸ್ಥಾಪಿಸಿದ ಕೀರ್ತಿಗೆ ಪಾತ್ರಳಾಗಿದ್ದಾಳೆ. ಅವರು ಶ್ರವಣಬೆಳಗೊಳದ ಚಂದ್ರಗಿರಿಯಲ್ಲಿ ಸವತಿ ಗಂಧವರ ದೇವಸ್ಥಾನವನ್ನು ಸ್ನಾಪಿಸಿದರು. ತನ್ನ ಗುರುಗಳಾದ ಪ್ರಭಾಚಂದ್ರ ಸಿದ್ಧಾಂತ ದೇವರು ಆಚರಣೆಗಳನ್ನು ನಡೆಸಲು ಮೊಟ್ಟೆನವಿಲೆ ಎಂಬ ಗ್ರಾಮವನ್ನು ದಾನ ಮಾಡುತ್ತಾಳೆ. ಶಾಂತಲಾ ದೇವಿ ಉತ್ತರ ಮತ್ತು ದಕ್ಷಿಣ ಭಾರತದ ಸಾಂಸ್ಕೃತಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿದ್ದರು.
    ಶಾಂತಲಾ ದೇವಿ ಪಡೆದ ಬಿರುದುಗಳು:
    ರಾಣಿ ಶಾಂತಲಾ ದೇವಿಯು ೧೧೧೭ ರಲ್ಲಿ ಪಟ್ಟಮಹಾದೇವಿಯಾಗಿ ಪಟ್ಟಾಭಿಷಿಕ್ತಳಾದಳು. ಅವರು ‘ಪರಿಪೂರ್ಣ ನಂಬಿಕೆಯ ರತ್ನ’, ‘ಜೈನ ನಂಬಿಕೆಯ ಕೋಟೆ’, ‘ಯುದ್ಧದಲ್ಲಿ ವಿಜಯದ ದೇವತೆ’ ಮತ್ತು ‘ಸಂಪತ್ತು ಮತ್ತು ಶಾಂತಿಯಲ್ಲಿ ಖ್ಯಾತಿಯ ದೇವತೆ’. ಶಾಂತಲೆಯ ಪ್ರಸಿದ್ದ ಬಿರುದು ‘ಸವತಿ ಗಂಧವಾರಿಣಿ’. ಇದೇ ಹೆಸರಿನಲ್ಲಿ ಶ್ರವಣ ಬೆಳಗೊಳದ ಚಿಕ್ಕಬೆಟ್ಟದಲ್ಲಿ ಬಸದಿ ಕಟ್ಟಿಸಿದ್ದಾಳೆ.
    ಮದನಿಕೆಯರಿಗೆ ಶಾಂತಲೆಯೇ ರೂಪದರ್ಶಿ ಆಗಿದ್ದಳು ಎಂಬ ಐತಿಹ್ಯ ಇದೆ. ಆದರೆ ಅದಕ್ಕೆ ಐತಿಹಾಸಿಕ ಆಧಾರಗಳು ಇಲ್ಲ. ಶಾಂತಲಾ ದೇವಿಯ ಸ್ಮರಣಾರ್ಥ ದೇವಾಲಯಗಳನ್ನು ನಿರ್ಮಿಸಲಾಗಿದೆ. ಶಾಂತಲಾ ದೇವಿಯ ಸೌಂದರ್ಯದಿAದ ಸ್ಫೂರ್ತಿ ಪಡೆದ ರಾಜ ವಿಷ್ಣುವರ್ಧನನು ಕರ್ನಾಟಕದ ಬೇಲೂರಿನಲ್ಲಿರುವ ಚೆನ್ನಕೇಶವನ ದೇವಾಲಯದಲ್ಲಿ ಹಲವಾರು ಆಕಾಶ ಸ್ತಿçà ವ್ಯಕ್ತಿಗಳನ್ನು ನಿರ್ಮಿಸಿದನು. ಅಂದಾಜಿನ ಪ್ರಕಾರ, ಸುಮಾರು ನಲವತ್ತೆರಡು ‘ಮದನಿಕರು’ ಇದ್ದಾರೆ. ಶಾಂತಲಾ ದೇವಿಯು ಸೌಂದರ್ಯದ ಪ್ರತಿರೂಪವಾಗಿದ್ದಳು ಮತ್ತು ಶಿಲ್ಪಿಗಳು ಸಹ ಅವಳ ಅನುಗ್ರಹದಿಂದ ಪ್ರೇರಿತರಾಗಿದ್ದರು. ಆದ್ದರಿಂದ, ಶಿಲ್ಪಗಳು ಅವುಗಳನ್ನು ಸೂಕ್ಷವಾಗಿ ಕೆತ್ತಲಾಗಿದೆ ಮತ್ತು ಅವೆಲ್ಲವೂ ಭರತನಾಟ್ಯದ ಭಂಗಿಗಳಲ್ಲಿವೆ. ಚೆನ್ನಕೇಶವನ ಸಭಾಂಗಣದಲ್ಲಿ ನಯಗೊಳಿಸಿದ ಕಲ್ಲಿನ ವೇದಿಕೆ ಇದೆ. ಶಾಂತಲಾ ದೇವಿಯು ಈ ವೇದಿಕೆಯಲ್ಲಿ ಚೆನ್ನಕೇಶವನನ್ನು ಸ್ತುತಿಸಿ ನರ್ತಿಸಿದಳು ಎಂದು ಹೇಳಲಾಗುತ್ತದೆ. ರಾಜ ವಿಷ್ಣುವರ್ಧನನು ಶಾಂತಲಾ ದೇವಿಯ ಸ್ಮರಣಾರ್ಥ ಶಿವಗಂಗಾ ಬಟ್ಟದಲ್ಲಿ ‘ಶ್ರೀ ಶಾಂತಲೇಶ್ವರ’ ದೇವಾಲಯವನ್ನು ನಿರ್ಮಿಸಿದ್ದನು. ರಾಣಿ ಶಾಂತಲಾ ದೇವಿಯು ಶಿವಗಂಗೆಯಲ್ಲಿ ‘ಸಲ್ಲೇಖನ’ ಎಂಬ ಜೈನ ಪದ್ದತಿಯನ್ನು ಆಚರಿಸಿದ ನಂತರ ಮರಣಹೊಂದಿದಳು ಎಂದು ಹೇಳಲಾಗುತ್ತದೆ.

    ಜನ್ನ

     ಜನ್ನ ಕನ್ನಡದ ಪ್ರಸಿದ್ಧ ಜೈನಕವಿ. ಈತ ೧೨ನೆಯ ಶತಮಾನದ ಉತ್ತರಾರ್ಧ ಮತ್ತು ೧೩ನೆಯ ಶತಮಾನದ ಪೂರ್ವಾರ್ಧದಲ್ಲಿ ಕೃತಿರಚನೆ ಮಾಡಿದವ.

    ಹಳೆಯಬೀಡು ಪ್ರಾಂತದವನಾದ ಜನ್ನನ ತಂದೆ ಸುಮನೋಬಾಣನೆಂಬ ಬಿರುದು ಪಡೆದಿದ್ದ ಶಂಕರ. ತಾಯಿ ಗಂಗಾದೇವಿ. ಜನ್ನನ ಹೆಂಡತಿ ಲಕುಮಾದೇವಿ. ಜನ್ನನ ಧರ್ಮಗುರು ರಾಮಚಂದ್ರ ದೇವ ಮುನಿ, ಉಪಾಧ್ಯಾಯ ಇಮ್ಮಡಿ ನಾಗವರ್ಮ. ಜನ್ನನು, ಸಿಂದಗಿ ತಾಲೂಕಿನ ಕೊಂಡಗೂಳಿಯಲ್ಲಿ ಹುಟ್ಟಿ, ಹಳೆಯಬೀಡಿನಲ್ಲಿರುವ ವಿಜಯ ಪಾರ್ಶ್ವನಾಥ ದೇವಾಲಯದ ಮುಖಭಾಗದಲ್ಲಿ ಸೊಗಸಾದ ಮುಖಮಂಟಪವನ್ನು ಕಟ್ಟಿಸಿ ಅಲ್ಲಿ ತನ್ನ ಕಾವ್ಯ ಅನಂತನಾಥಪುರಾಣದ ೧,೦೦೦ ತಾಳೆಗರಿಗಳ ಪ್ರತಿಗಳನ್ನು ಬರೆಸಿ, ಉದಾರ ಸಂಭಾವನೆಯೊAದಿಗೆ ವಿದ್ಯಾಂಸರಿಗೆ ಕೊಟ್ಟು, ಗೌರವಿಸಿದನೆಂದು ತಿಳಿದುಬರುತ್ತದೆ. ಬಾಲಕರಗಣದ ಮೇಘನಂದಿ ಸಿದ್ಧಾಂತಿದೇವರು, ಜನ್ನನ ಆಧ್ಯಾತ್ಮಿಕ ಗುರು ಮಕಾಶಿಗಳಾಗಿದ್ದರು. ಜೀವಿಸಿ ಧರ್ಮಾಚರಣೆಯನ್ನು ಮರೆಯದೆ ಧರ್ಮದ, ನೀತಿಯ ನೆಲಗಟ್ಟನ್ನು ಮೀರದೇ ಇಹಲೋಕದ ಸುಖವನ್ನು ಪರಲೋಕ ಗತಿಯ ಆಶಯವನ್ನೂ ಸಾಧಿಸಿಕೊಳ್ಳಲು ಶ್ರಮಿಸಿದ ಶ್ರೇಷ್ಠವರ್ಗದ ಸಾಧಕ.
    ಜನ್ನ ಹೊಯ್ಸಳ ಬಲ್ಲಾಳನಿಂದ ಕವಿಚಕ್ರವರ್ತಿ ಎಂಬ ಬಿರುದನ್ನು ಪಡೆದು, ಅನಂತರ ನರಸಿಂಹನಲ್ಲಿ ದಂಡಾಧಿಪತಿಯೂ ಮಂತ್ರಿಯೂ ಆಗಿದ್ದ.
    ಜನ್ನ “ಅನುಭವಮುಕುರ” ವೆಂಬ ಕಾಮಶಾಸ್ತç ಸಂಬAಧವಾದ ಕೃತಿಯನ್ನೂ ಯಶೋಧರ ಚರಿತೆ, ಅನಂತನಾಥಪುರಾಣ ಎಂಬ ಎರಡು ಕಾವ್ಯಗಳನ್ನೂ ಬರೆದಿದ್ದಾನೆ. ಕೆಲವು ಶಾಸನಗಳೂ ಈತನಿಂದ ರಚಿತವಾಗಿವೆ.
    ಯಶೋಧರಚರಿತೆ, ಅನಂತನಾಥ ಪುರಾಣ ಎರಡೂ ಧಾರ್ಮಿಕ ಕೃತಿಗಳು. ಯಶೋಧರಚರಿತೆ ಬಹುಸುಂದರವಾದ ಪುಟ್ಟಕಾವ್ಯ.
    ಮನುಷ್ಯ ಮನಸ್ಸಿನ ಸಂಕೀರ್ಣತೆ ಮತ್ತು ‘ಹಿಂಸೆ’ ಯ ವ್ಯಾಖ್ಯಾನ, ನೇರ ಹಿಂಸೆ ಮತ್ತು ಭಾವಹಿಂಸೆ (ಸಂಕಲ್ಪ ಹಿಂಸೆ)- ಇವುಗಳ ಕುರಿತಾದ ಚರ್ಚೆ, ಇದರ ಜೊತೆಗೆ ಭವಾವಳಿಗಳ ಮೂಲಕ ‘ಹಿಂಸೆ’ಯ ಪರಿಣಾಮದ ಬಗ್ಗೆ ತಿಳಿ ಹೇಳುವ ಈ ಕಾವ್ಯ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮಹಾನ್ ಕೃತಿ ಎಂಬುದಾಗಿ ದಾಖಲಾಗುತ್ತದೆ. ಅನಂತನಾಥಪುರಾಣ ೧೪ನೆಯ ತೀರ್ಥಂಕರನಾದ ಅನಂತನಾಥನ ಕತೆಯನ್ನು ಬಣ್ಣಿಸುವ ತೀರ್ಥಕರ ಭವಾವಳಿಯನ್ನೂ ಪಂಚಕಲ್ಯಾಣಗಳನ್ನೂ ವಿಸ್ತಾರವಾಗಿ ವರ್ಣಿಸಿದ್ದಾನೆ, ಜನ್ನ ಕೊನೆಯ ಭಾಗದಲ್ಲಿ ವಸುಷೇಣ ಚಂಡಶಾಸನರ ಕಥೆಯನ್ನು ರಸಮಯವಾಗಿ ಹೇಳಿದ್ದಾನೆ. ಜನ್ನ ತುಂಬುಜೀವನವನ್ನು ಯಶೋಧರ ಚರಿತೆಯಲ್ಲಿಯೂ’ಅನಂತನಾಥ ಪುರಾಣ’ದಲ್ಲಿಯೂ ಜನ್ನನು ಪ್ರಣಯವನ್ನೂ ತದಾಭಾಸವನ್ನೂ ನೈಪುಣ್ಯದಿಂದ ನಿರೂಪಿಸಿದ್ದಾನೆ.
    ೧೪ ಆಶ್ವಾಸಗಳ ಪ್ರೌಢ ಚಂಪೂ ಕಾವ್ಯ. ಇದಕ್ಕೆ ಮುಖ್ಯವಾದ ಆಕರ ಗುಣಭದ್ರಾಚಾರ್ಯರು ಸಂಸ್ಕೃತದಲ್ಲಿ ರಚಿಸಿರುವ ಉತ್ತರಪುರಾಣ. ಅಲ್ಲಿ ಕಿರಿದಾಗಿ ಬರುವ ಅನಂತನಾಥನ ಕತೆಯನ್ನು ಜನ್ನ ಎಳೆದು ಹಿಗ್ಗಸಿ ೧೪ ಆಶ್ವಾಸಗಳಷ್ಟು ದೊಡ್ಡದು ಮಾಡಿದ್ದಾನೆ. ಇದರಲ್ಲಿನ ಚಂಡಶಾಸನನ ಉಪಾಖ್ಯಾನ ಒಂದು ಹೃದಯಂಗಮವಾದ ಭಾಗ. ಉತ್ತರ ಪುರಾಣದಲ್ಲಿ ಬಿಂದುರೂಪವಾಗಿ ಬರುವ ಕತೆಯನ್ನು ಇಲ್ಲಿ ಜನ್ನ ಸೊಗಸಾಗಿ ವಿಸ್ತರಿಸಿದ್ದಾನೆ. ಯಶೋಧರಚರಿತೆಯಲ್ಲಿ ಹೆಣ್ಣಿನ ನಿಷಿದ್ಧ ಕಾಮ ಚಿತ್ರಿತವಾಗಿದ್ದರೆ ಚಂಡಶಾಸನ ವೃತ್ತಾಂತದಲ್ಲಿ ಗಂಡಿನ ದುರಂತ ವ್ಯಾಮೋಹ ನಿರೂಪಿತವಾಗಿದೆ. ಸುಮಾರು ೮೦ ಪದಗಳಷ್ಟು ಚಿಕ್ಕದಾದರೂ ಈ ಉಪಾಖ್ಯಾನ ಸಹೃದಯರ ಚಿತ್ರದ ಮೇಲೆ ಅಳಿಸಲಾಗದ ಮುದ್ರೆಯೊತ್ತುತ್ತದೆ.
    ಯಶೋಧರಚರಿತೆ ಹಾಗೂ ಅನಂತನಾಥಪುರಾಣದ ಚಂಡಶಾಸನ ಕಥೆ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನ ಪಡೆಯುತ್ತವೆ. ಸಂಪ್ರದಾಯಬದ್ಧವೂ ಚಿರಪರಿಚಿತವೂ ಆದ ವಸ್ತುವನ್ನು ಬಿಟ್ಟು, ಕವಿ ವಿಷಮಪ್ರಣಯದ ಎರಡು ದಿಕ್ಕುಗಳನ್ನು ಚಿತ್ರಿಸಿ ಬದುಕಿನ ವಾಸ್ತವಿಕತೆಗೆ ಕನ್ನಡಿ ಹಿಡಿದಿದ್ದಾನೆ. ವಿಮರ್ಶಕರೊಬ್ಬರು ಹೇಳುವಂತೆ ಅದಮ್ಯವಾದ ಕಾಮದ, ಧರ್ಮವಿರುದ್ದ ಪ್ರಣಯದ ಮುಖ ಪುರಷ ಮುಖಗಳನ್ನು ಉಜ್ವಲವಾಗಿ ಕ್ರಾಂತಿಕಾರಕ ರೀತಿಯಲ್ಲಿ ಚಿತ್ರಿಸಿದ ಜನ್ನ ಕನ್ನಡ ಸಾಹಿತ್ಯಕ್ಕೆ ಸ್ವಂತ ಕಾಣಿಕೆ ಸಲ್ಲಿಸಿದ್ದಾನೆ. ಕನ್ನಡ ಸಾಹಿತ್ಯಕ್ಕೆ ಮಾತ್ರವಲ್ಲ, ಜಾಗತಿಕ ಸಾಹಿತ್ಯಕ್ಕೂ ಬೆಲೆಯುಳ್ಳ ಕಾಣಿಕೆ ಸಲ್ಲಿಸಿದ್ದಾನೆ. ಮಹಾಕಾವ್ಯದ ಔನ್ನತ್ಯ, ಭವ್ಯತೆಗಳು ಆಂಶಿಕವಾಗಿಯಾದರೂ ಅವನ ಎರಡು ಕಿರುಗಬ್ಬಗಳಲ್ಲಿ, ತಲೆದೋರಿವೆ.
    ಜನ್ನನು ಚನ್ನರಾಯಪಟ್ಟಣದ ತಾಮ್ರಶಾಸನವನ್ನು ಕ್ರಿ.ಶ. ೧೧೯೧ರಲ್ಲಿಯೂ ತರೀಕೆರೆಯ ಶಾಸನವನ್ನು ಕ್ರಿ.ಶ. ೧೧೯೭ರಲ್ಲಿಯೂ ಬರೆದನು. ಕ್ರಿ.ಶ. ೧೨೦೯ರಲ್ಲಿ ‘ಯಶೋಧರ ಚರಿತೆ’ಯನ್ನು, ಕ್ರಿ.ಶ. ೧೨೩೦ರಲ್ಲಿ ಅನಂತನಾಥ ಪುರಾಣ'ವನ್ನೂ ರಚಿಸಿದನು. ಈ ಕವಿಯ ಸಾಹಿತ್ಯ ಸೇವೆ ಕ್ರಿ.ಶ. ೧೧೯೧ ರಿಂದ ಕ್ರಿ.ಶ. ೧೨೩೦ರವರಗೆ ನಲವತ್ತು ವರ್ಷಗಳ ಕಾಲ ನಡೆಯಿತು. ಜನ್ನ ‘ಇತ್ತಕೈಯಲ್ಲದೇ ಒಡ್ಡಿದ ಕೈಯಲ್ಲದ ಪೆಂಪು' ಎಂದು ಹೇಳಿಕೊಂಡಿರುವುದರಿAದ ಇವನು ಶ್ರೀಮಂತನೂ ಧಾರಾಳಿಯೂ ಆಗಿದ್ದನೆಂದು ತಿಳಿಯಬಹುದು. ಇವನು ದ್ವಾರಸಮುದ್ರದ ಪಾರ್ಶ್ವಜಿನನ ಮಂದಿರದ ದ್ವಾರವನ್ನು ಮಾಡಿಸಿಕೊಟ್ಟನು. ಅನಂತನಾಥ ಸ್ವಾಮಿಗೆ ಒಂದು ಬಸದಿಯನ್ನೇ ಕಟ್ಟಿಸಿದನು. ಇವನು ಹಿಂದಿನ ಕವಿಗಳಲ್ಲಿ ಪಂಪ, ಪೊನ್ನ, ರನ್ನ ನಾಗಚಂದ್ರ ಮೊದಲಾದವರನ್ನು ಹೊಗಳಿದ್ದಾನೆ. ಮಧುರಕವಿಯು ಇವನನ್ನು ನೇಮಿಚಂದ್ರನ ಜತೆಗೆ ಸೇರಿಸಿ ನೇಮಿ ಜನ್ನಮರಿರ್ವರೆ ಕರ್ಣಾಟಕೃತಿಗೆ ಸೀಮಾಪುರುಷರ್' ಎಂದು ಕೊಂಡಾಡಿದ್ದಾನೆ. ಪ್ರಶಸ್ತಿ, ಪುರಸ್ಕಾರ, ಬಿರುದು: ಇವನುನಾಳ್ಪçಭು’ವೂ ಆಗಿದ್ದನಂತೆ! ಜಿನೇಂದ್ರ ನಿಲಯ ನಿರ್ಮಾಣಧನಂ' ಎಂದು ಹೇಳಿಕೊಂಡಿರುವ ಜನ್ನನು ಶ್ರೀಮಂತನಾಗಿದ್ದನೆAದು ತಿಳಿಯಬೇಕು. ಇವನಿಗೆ ‘ಕವಿಚಕ್ರವರ್ತಿ,’ ‘ಕವಿ ಭಾಳನೇತ್ರಂ',ಉದ್ದಂಡಕವಿ’ ಅಸಹಾಯ ಸುಕವಿ',ಸಾಹಿತ್ಯ ರತ್ನಾಕರಂ’ ಎಂಬ ಬಿರುದುಗಳಿವೆ.

    ಚಾವುಂಡರಾಯ

     ಚಾವುಂಡರಾಯ ಶ್ರವಣಬೆಳಗೊಳದ ಪ್ರಸಿದ್ದ ಗೊಮ್ಮಟ ವಿಗ್ರಹವನ್ನು ಪ್ರತಿಷ್ಠಾಪಿಸಿ ಕೀರ್ತಿ ಪಡೆದವ; ಚಾವುಂಡರಾಯ ಪುರಾಣ”ವೆಂದು ಹೆಸರಾಗಿರುವ ತ್ರಿಷಷ್ಟಿ ಲಕ್ಷಣ ಮಹಾಪುರಾಣವೆಂಬ ಮಹಾಪುರಾಣವನ್ನು ಗದ್ಯದಲ್ಲಿ ರಚಿಸಿದವ.

    ಚಾವುಂಡರಾಯ: ಪೋಸ್ಟಕಾರ್ಡ್ ಕಲ್ಪನೆ – ಮಹಾವೀರ್ ಕುಂದೂರ್, ವರ್ಣಚಿತ್ರ – ಶ್ರೀ ಸುರೇಶ್ ಅರ್ಕಸಾಲಿ, ಹುಬ್ಬಳ್ಳಿ; ಕಲೆ – ಸ್ವಾತಿ ಗ್ರಾಫಿಕ್ಸ್, ಹುಬ್ಬಳ್ಳಿ.

    ಈತ ಪಶ್ಚಿಮ ಗಂಗವಂಶದ ರಾಜರಾದ ಮಾರಸಿಂಹ II (೯೬೧-೭೪) ಮತ್ತು ರಾಚಮಲ್ಲ ೪ನೇ (೯೭೪-೭೭) ಇವರಲ್ಲಿ ಯೋಧಾಗ್ರಣಿಯೂ, ಮಂತ್ರಿಯೂ ಆಗಿದ್ದವ. ಈತನನ್ನು ಚಾಮುಂಡರಾಯ (ನಮಿ ತೀರ್ಥಂಕರನ ಯಕ್ಷಿಯಾದ ಚಾಮುಂಡಿ ಎಂಬುದರಿAದ ಬಂದಿರಬೇಕು) ಎಂದೂ ಕರೆಯಲಾಗಿದೆ.

    ಗೊಮ್ಮಟ ಈತನ ಇನ್ನೊಂದು ಹೆಸರು. ‘ಗೊಮ್ಮಟ’ ಎಂಬುದು ಚಾವುಂಡರಾಯನ ಹೆತ್ತವರು ಮುದ್ದಿನಿಂದ ಕರೆಯುತ್ತಿದ್ದ ಹೆಸರು. ಗೊಮ್ಮಟ ಎಂದರೆ ‘ಸುಂದರ’ ಎಂದು ಅರ್ಥ. ಇದರಿಂದಾಗಿಯೇ ಗೊಮ್ಮಟ ಕೆತ್ತಿಸಿದ ಬಾಹುಬಲಿ ಬಿಂಬಕ್ಕೆ ಗೊಮ್ಮಟೇಶ್ವರ (ಗೊಮ್ಮಟನ ದೇವರು) ಎಂಬುದಾಗಿ ಕರೆಯಲ್ಪಟ್ಟು ಮೂಲ ಹೆಸರೇ ಮರೆತುಹೋಗುವಷ್ಟು ಜನಪ್ರಿಯ ಅಗಿದೆ ಅಷ್ಟೇ.

    ಈತ ಜೈನ, ಬ್ರಹ್ಮ ಕ್ಷತಕುಲೋತ್ಪನ್ನನೆಂದು ತಾನೇ ಹೇಳಿಕೊಂಡಿದ್ದಾನೆ. ತಂದೆತಾಯಿಗಳ ವಿಚಾರ ತಿಳಿಯದು. ಈತನಿಗೆ ಜಿನದೇವಣ ಎಂಬ ಮಗನಿದ್ದನೆಂಬ ಅಂಶಕ್ಕೆ ಶಾಸನಾಧಾರವಿದೆ. ಅಜಿತಸೇನಾಚಾರ್ಯ ಮತ್ತು ನೇಮಿಚಂದ್ರ ಸಿದ್ಧಾಂತ ಚಕ್ರವರ್ತಿ ಈತನ ಗುರುಗಳು. ಈತ ಇಮ್ಮಡಿ ಮಾರಸಿಂಹನ ಸಹಪಾಠಿಯಾಗಿ ಮುಂದೆ ಆತನ ನೆಚ್ಚಿನ ಸೇನಾನಿಯಾಗಿ ಅವನ ಪರವಾಗಿ ಅನೇಕ ಯುದ್ಧಗಳಲ್ಲಿ ಭಾಗವಹಿಸಿದ ವಿಷಯ ಚಾವುಂಡರಾಯಪುರಾಣದಲ್ಲಿ ಬರುವ ಉಲ್ಲೇಖಗಳಿಂದಲೂ ಶ್ರವಣಬೆಳ್ಗೊಳದ ಒಂದು ಶಾಸನದಿಂದಲೂ ಅನಂತರ ಪಟ್ಟಕ್ಕೆ ಬಂದ ನಾಲ್ವಡಿ ರಾಚಮಲ್ಲನಲ್ಲಿ ಮಂತ್ರಿಯಾಗಿದ್ದನೆAದು ‘ಸ್ಥಿರ ಜಿನಶಾಸನೋದ್ಧರಣರಾದಿಯೊಳಾರನೆ ರಾಚಮಲ್ಲ ಭೂವರ ವರಮಂತ್ರಿ ರಾಯನೆ…’ ಎಂಬ ಶಾಸನವಾಕ್ಯದಿಂದಲೂ ತಿಳಿದುಬರುತ್ತದೆ. ಈತನಿಗೆ ಗುಣರತ್ನಭೂಷಣಂ, ಕವಿಜನಶೇಖರಂ ಎಂಬ ಬಿರುದುಗಳಲ್ಲದೆ ಸಮರಧುರಂಧರ, ವೀರಮಾರ್ತಾಂಡ, ರಣರಂಗಸಿಂಗ, ವೈರಿಕುಲಕಾಲ ದಂಡ, ಭುಜವಿಕ್ರಮ, ಚಲದಂಕರAಗ, ಸಮರ ಪರಶುರಾಮ, ಪ್ರತಿಪಕ್ಷರಾಕ್ಷಸ, ಭಟಮಾರಿ, ಸುಭಟಚೂಡಾಮಣಿ-ಎಂಬ ಶೌರ್ಯಮೂಲವಾದ ಬಿರುದುಗಳಿದ್ದಂತೆ ತಿಳಿದುಬರುತ್ತದೆ. ಇವು ಈತನ ಕಲಿತನಕ್ಕೆ ಸಾಕ್ಷಿಯಾಗಿವೆ.
    ತ್ರಿಷಷ್ಠಿಲಕ್ಷಣ ಮಹಾಪುರಾಣ ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟ ಸ್ಥಾನ ಪಡೆದಿದೆ. ಪ್ರಾಚೀನ ಗದ್ಯ ಗ್ರಂಥಗಳಲ್ಲಿ ಒಂದು ಎಂಬುದರ ಮೇಲೂ ಇದರ ಹಿರಿಮೆ ನಿಂತಿದೆ. ವಡ್ಡಾರಾಧನೆ ದೊರೆತು ಪ್ರಕಟವಾಗುವ ಮೊದಲು ಕನ್ನಡ ಸಾಹಿತ್ಯದ ಪ್ರಥಮ ಗದ್ಯಕೃತಿ ಎಂದು ಇದು ಮನ್ನಣೆ ಪಡೆದಿತ್ತು. ಜೈನಧರ್ಮಕ್ಕೆ ಸಂಬಂಧಿಸಿದ ಈ ಮಹಾಪುರಾಣ ರಚನೆಯಲ್ಲಿ ಜಿನಸೇನಾಚಾರ್ಯ, ಗುಣಭದ್ರಾಚಾರ್ಯರ ಮಹಾಪುರಾಣವನ್ನು ಅವಲಂಬಿಸಿ ಅನುಸರಿಸಲಾಗಿದೆ.

    ಶಲಾಕಪುರುಷರಾದ ತೀರ್ಥಂಕರರು ೨೪, ಚಕ್ರವರ್ತಿಗಳು ೧೨, ಬಲದೇವರು ೯, ವಾಸುದೇವರು ೯, ಪ್ರತಿವಾಸುದೇವರು ೯-ಹೀಗೆ ೬೩ ಜನರ ಚರಿತ್ರೆಯೇ ಈ ಮಹಾಪುರಾಣದ ವಸ್ತು. ಇದರ ಮೂಲವನ್ನು ಬಳಸಿಕೊಳ್ಳುವಾಗ ಅತ್ಯಾವಶ್ಯಕವಾದ ತೀರ್ಥಂಕರಾದಿ ಮಹಾಪುರುಷ ಸಂಬಂಧವಾದ ಕಥಾಸಾರವನ್ನು ಉಳಿಸಿಕೊಂಡು ಅನುಪಯುಕ್ತವಾದ ಕಥಾವಿವರಣೆಗಳನ್ನೂ ವರ್ಣನೆಗಳನ್ನೂ ವ್ಯಕ್ತಿ-ಗುಣ-ವಸ್ತು ವಿಶೇಷಣಾದಿಗಳನ್ನೂ ಅಲಂಕಾರ ವೈಚಿತ್ರö್ಯಗಳನ್ನೂ ನೀತಿಪರವಾಕ್ಯಗಳನ್ನೂ ಧಾರ್ಮಿಕ ಪ್ರಕ್ರಿಯಾವಿವರಗಳನ್ನೂ ಪಾರಿಭಾಷಿಕ ಪದಸಮುಚ್ಚಯಗಳನ್ನೂ ಬಹುಮಟ್ಟಿಗೆ ಬಿಟ್ಟಿದ್ದಾನೆ. ಈತನ ಸಂಗ್ರಾಹಕತೆ ಎಷ್ಟೆಂದರೆ ಆದಿಪುರಾಣದ ಚಕ್ರವರ್ತಿಚರಿತದಲ್ಲಿ ಪ್ರಸಿದ್ಧರಾಗಿರುವ ಭರತ ಬಾಹುಬಲಿಗಳ ವ್ಯಾಯೋಗ ಪ್ರಸಂಗವನ್ನು ಜಿನಸೇನರು ಪೂರ್ಣಪುರಾಣದಲ್ಲಿ ಎರಡೂವರೆ ಪರ್ವಗಳಷ್ಟು ವಿಸ್ತಾರದಲ್ಲೂ ಪಂಪಕವಿ ೧೩೩ ಪದ್ಯಗಳಲ್ಲೂ ಹೇಳಿದ್ದರೆ ಚಾವುಂಡರಾಯ ಕೇವಲ ೨೭ ಸಾಲುಗಳಲ್ಲಿ ಸಂಕ್ಷಿಪ್ತವಾಗಿ ಅಡಕಗೊಳಿಸಿದ್ದಾನೆ. ಇಂಥ ನಿದರ್ಶನಗಳಿಂದ ಚಾವುಂಡರಾಯ ಕುಶಲಸಂಗ್ರಾಹಕನೆAದು ಒಪ್ಪಿಕೊಳ್ಳದಿದ್ದರೂ ನಿಷ್ಟುರ ಸಂಗ್ರಾಹಕನೆನ್ನದೆ ವಿಧಿಯಿಲ್ಲ. ಈ ಸಂಗ್ರಾಹಕತೆಯಿAದಾಗಿ ತೀರ್ಥಂಕರ ಚರಿತ್ರೆಗಳಲ್ಲಿ ಮನ ಸೆಳೆಯುವ ಕಥಾಂಶ, ವಿವರಗಳು ಇಲ್ಲ. ತೀರ್ಥಂಕರ ಚರಿತ್ರೆಯ ಮುಖ್ಯಾಂಶಗಳನ್ನು ಮೂಲಕ್ಕೆ ಚ್ಯುತಿಬಾರದಂತೆ ಸಂಕ್ಷೇಪಿಸಿ ಜೈನಧರ್ಮದ ಬಗ್ಗೆ ಜೈನರಲ್ಲಿ ಶ್ರದ್ಧಾಸಕ್ತಿ ಬೆಳೆಯುವಂತೆ ಮಾಡಿರುವುದು ಇಲ್ಲಿನ ಒಂದು ಸಾಧನೆ.

    ಭಾರತೀಯ ಅಂಚೆ ಇಲಾಖೆ ಹೊರತಂದಿರುವ ಚಾವುಂಡರಾಯನ ವರ್ಣಚಿತ್ರದ ಪೋಸ್ಟಕಾರ್ಡ್.

    ಭಾರತದಲ್ಲಿ ಮಹಾಪುರಾಣ ತುಂಬ ಪುರಾತನವಾದುದಾದರೂ ಕನ್ನಡಕ್ಕೆ ಮೊದಲ ಬಾರಿಗೆ ಅದನ್ನು ತಂದವ ಚಾವುಂಡರಾಯನೇ. ಕನ್ನಡದಲ್ಲಿ ತ್ರಿಷಷ್ಠಿ ಶಲಾಕಾಪುರುಷರ ಚರಿತ್ರೆಯನ್ನು ಕುರಿತು ಮಹಾಪುರಾಣ ಇದೇ ಎನ್ನುವುದರಿಂದಲೂ ಕನ್ನಡದಲ್ಲಿ ಜೈನಪರಂಪರೆಯ ರಾಮಾಯಣ, ಭಾರತ, ಭಾಗವತ ಕಥೆಗಳಿಗೆ ಪ್ರಥಮ ಆಕರಗ್ರಂಥವಾಗಿರುವುದರಿAದಲೂ ಈ ಗ್ರಂಥಕ್ಕೆ ಪ್ರಾಶಸ್ತö್ಯ ಬಂದಿದೆ. ಸಾಮಾನ್ಯವಾಗಿ ಬೇರೆ ಗ್ರಂಥಗಳಲ್ಲಿ ದೊರಕದ, ಸಂಸ್ಕೃತ ಮಹಾಪುರಾಣಗಳ ಕವಿ ಪರಂಪರೆಯನ್ನು ಚಾವುಂಡರಾಯ ಸ್ಪಷ್ಟವಾಗಿ ಹೇಳಿದ್ದಾನೆ, ಈ ದೃಷ್ಟಿಯಿಂದಲೂ ಜೈನಸಾಹಿತ್ಯದಲ್ಲಿ ಚಾವುಂಡರಾಯಪುರಾಣ ಅಧಿಕೃತ ದಾಖಲೆಯಾಗಿ ನಿಲ್ಲುತ್ತದೆ. ತ್ರಿಷಷ್ಟಿ ಲಕ್ಷಣ ಮಹಾಪುರಾಣವನ್ನು ೯೭೮ರಲ್ಲಿ ರಚಿಸಿದುದಾಗಿ ಕವಿಯೆ ಹೇಳಿಕೊಂಡಿದ್ದಾನೆ. ಗದ್ಯದಲ್ಲಿಯೇ ರಚಿತವಾದ ಈ ಗ್ರಂಥದ ಆದಿ, ಅಂತ್ಯ ಹಾಗೂ ಕಥೆಗಳ ಮಧ್ಯದಲ್ಲಿ ಅಲ್ಲಲ್ಲಿ ಪದ್ಯಗಳೂ ಉಂಟು. ಜಿನಸೇನಾಚಾರ್ಯ, ಗುಣ ಭದ್ರಾಚಾರ್ಯರ ಮಹಾಪುರಾಣವನ್ನೇ ಅನುಸರಿಸಿ ಈತ ತನ್ನ ಗ್ರಂಥವನ್ನು ರಚಿಸಿದ್ದರೂ ಈತ ಸಂಸ್ಕೃತ ಪ್ರಾಕೃತ ಭಾಷೆಗಳಲ್ಲಿ ಹಿಂದೆ ರಚಿತವಾದ ಇತರ ಮಹಾಪುರಾಣಗಳಿಂದಲೂ ಪ್ರಭಾವಿತನಾಗಿರುವುದಕ್ಕೆ ಇಲ್ಲಿ ಕಂಡುಬರುವ ಅನೇಕ ಬದಲಾವಣೆಗಳು ಸಾಕ್ಷಿಯಾಗಿವೆ. ಇದಲ್ಲದೆ ಈತ ತನ್ನ ಗುರು ನೇಮಿಚಂದ್ರ ಸಿದ್ಧಾಂತ ಚಕ್ರವರ್ತಿ ಬರೆದ ಗೊಮ್ಮಟಸಾರಕ್ಕೆ ವೀರಮತ್ತಂಡೀ (ವೀರಮಾರ್ತಂಡೀ) ಎಂಬ ದೇಸೀವೃತ್ತಿಯನ್ನೂ (ಬಹುಶಃ ಕನ್ನಡ) ಬರೆದಂತೆ ಹೇಳಲಾಗಿದೆ. ಆದರೆ ಆ ಗ್ರಂಥ ಉಪಲಬ್ದವಿಲ್ಲ. ಚಾವುಂಡರಾಯನ ಹೆಸರು ಶಾಶ್ವತವಾಗಿ ನಿಂತಿರುವುದು ಆತ ಶ್ರವಣಬೆಳಗೊಳದ ಇಂದ್ರಗಿರಿಯ ಮೇಲೆ ಕೆತ್ತಿಸಿದ ಬಾಹುಬಲಿ ವಿಗ್ರಹದಿಂದ. ಬಾಹುಬಲಿಮೂರ್ತಿಯ ಬಲಭಾಗದ ಪಾದಗಳ ಬಳಿಯ ‘ಶ್ರೀ ಚಾಮುಣ್ಡರಾಜಂ ಮಾಡಿಸಿದಂ’ ಎನ್ನುವ ಶಾಸನದಿಂದಲೂ ತಮಿಳು ಮತ್ತು ಮರಾಠಿ ಭಾಷೆಯ ಅದೇ ಅರ್ಥದ ವಾಕ್ಯಗಳು ಬರುವುದರಿಂದಲೂ ವಿಗ್ರಹವನ್ನು ಕಡೆದಿದ್ದು ಈತನೇ ಎನ್ನುವುದು ಖಚಿತವಾಗುತ್ತದೆ. ಈ ಮೂರ್ತಿಯ ಸ್ಥಾಪನೆ ಬಹುಶಃ ೯೮೩ರಲ್ಲಿ ಆಯಿತೆಂದು ಹೇಳಲಾಗಿದೆ. ಬೊಪ್ಪಣಪಂಡಿತನ ಗೊಮ್ಮಟ ಜಿನೇಂದ್ರ ಗುಣಸ್ತವ ಶಾಸನದಲ್ಲಿ ಚಾವುಂಡರಾಯ ಈ ಮೂರ್ತಿಯನ್ನು ಸ್ಕಾಪಿಸಿದ ವಿವರ ಬಂದಿದೆ. ಭರತ ಪೌದನಪುರದಲ್ಲಿ ಬಾಹುಬಲಿಯ ೫೨೫ ಬಿಲ್ಲುಗಳಷ್ಟು ಎತ್ತರದ ಮೂರ್ತಿಯನ್ನು ಮಾಡಿ ನಿಲ್ಲಿಸಿದನಷ್ಟೆ. ಆ ಮೂರ್ತಿಯ ಮಹಾತಿಶಯವನ್ನು ಕೇಳಿದ ತಾಯಿ ಕಾಳಲಾದೇವಿಗೆ ಚಾವುಂಡರಾಯ ಅದರ ದರ್ಶನ ಪಡೆಯಲು ಹಂಬಲಿಸಿದನAತೆ. ಆ ಮೂರ್ತಿಯಿದ್ದ ಸ್ಥಳ ದೂರವೂ ದುರ್ಗಮವೂ ಆಗಿದೆಯೆಂದು ಬಲ್ಲವರು ಹೇಳಿದಾಗ ಅಂಥದೇ ಇನ್ನೊಂದು ಮೂರ್ತಿಯನ್ನು ತಾನು ಕಡೆಸುವುದಾಗಿ ನಿಶ್ಚಯಿಸಿ ಶ್ರವಣಬೆಳಗೊಳದಲ್ಲಿ ಬಾಹುಬಲಿ ವಿಗ್ರಹವನ್ನು ಪ್ರತಿಷ್ಠಾಪಿಸಿದನಂತೆ, ಚಾವುಂಡರಾಯನ ಈ ಅಸಾಧಾರಣ ಕಾರ್ಯ ಜನರೂಢಿಯಲ್ಲಿ ಪೌರಾಣಿಕ ಕಲ್ಪನೆಯ ಹಂತವನ್ನು ಮುಟ್ಟುವಷ್ಟು ಪ್ರಭಾವಶಾಲಿಯಾಯಿತು. ಇದರ ಬಗ್ಗೆ ಅನೇಕ ರೀತಿಯ ಕಥೆಗಳು ಬೆಳೆದುಬಂದಿದೆ. ಈ ಪವಾಡಸದೃಶಕಾರ್ಯ ಮಾಡಿದ ಚಾವುಂಡರಾಯನಿಗೆ ‘ರಾಯ’ ಎಂಬ ಬಿರುದು ಕೊಟ್ಟು ರಾಚಮಲ್ಲ ಗೌರವಿಸಿದ. ಚಾವುಂಡರಾಯನ ಈ ಧಾರ್ಮಿಕ ವ್ಯಕ್ತಿತ್ವದಿಂದಾಗಿಯೇ ಬಹುಶಃ ಇತರರು ಆತನನ್ನು ಅಣ್ಣ ಎಂದು ಸಂಬೋಧಿಸಿರಬೇಕು.
    ಅಜಿತಸೇನಾಚಾರ್ಯರಲ್ಲಿ ಶಿಷ್ಯವೃತ್ತಿಯಲ್ಲಿದ್ದಾಗ ಕವಿ ರನ್ನ ಈತನ ಸಹಪಾಠಿಯಾಗಿದ್ದಿರಬೇಕು. ಅನಂತರವೂ ಈತ ರನ್ನನಿಗೆ ಸಾಕಷ್ಟು ಸಹಾಯ ಮಾಡಿರಬೇಕು. ಬಹುಶಃ ಆ ಕೃತಜ್ಞತೆಯಿಂದಲೇ ರನ್ನ ತನ್ನ ಮಗನಿಗೆ ರಾಯನೆಂದು ಹೆಸರಿಟ್ಟಂತೆ ತೋರುತ್ತದೆ. ಒಂದನೆಯ ನಾಗವರ್ಮನೂ ಚಾವುಂಡರಾಯನ ಆಶ್ರಯ ಪಡೆದಂತೆ ತನ್ನ ಛಂದೋAಬುಧಿಯಲ್ಲಿ ಹೇಳಿಕೊಂಡಿದ್ದಾನೆ.

    ಭಾರತೀಯ ಅಂಚೆ ಇಲಾಖೆಯು ಕನ್ನಡ ರಾಜ್ಯೋತ್ಸವ – ೨೦೨೨ರ ಅಂಗವಾಗಿ “ಜಿನರತ್ನ ಭೂಷಣರು” ಮಾಲಿಕೆಯ ಭಾಗವಾಗಿ “ಚಾವುಂಡರಾಯ” ವರ್ಣಚಿತ್ರದ ಪೋಸ್ಟಕಾರ್ಡ್ ಹೊರತಂದಿದೆ. ಹೊಂಬುಜ ಜೈನಮಠದವತಿಯಿಂದ ವರ್ಣಚಿತ್ರದ ಪೋಸ್ಟಕಾರ್ಡುಗಳನ್ನು ಪ್ರಾಯೋಜಿಸಲಾಗಿದೆ.

    ದಾನಚಿಂತಾಮಣಿ ಅತ್ತಿಮಬ್ಬೆ

     ದಾನಚಿಂತಾಮಣಿ ಅತ್ತಿಮಬ್ಬೆ ಪ್ರಾಚೀನ ಕರ್ನಾಟಕದ ಸ್ತ್ರೀಯರಲ್ಲಿ ಅಗ್ರಗಣ್ಯರು. ಇವರ ಕಾಲ ಕ್ರಿ.ಶ. ಹತ್ತನೆಯ ಶತಮಾನದ ಉತ್ತರಾರ್ಧ ಮತ್ತು ಹನ್ನೊಂದನೆಯ ಶತಮಾನದ ಪೂರ್ವಾರ್ಧ ಅಂದರೆ ಇವರು ಚಾಳುಕ್ಯ ಚಕ್ರವರ್ತಿ ಅಹವಮಲ್ಲ ತೈಲಪ (೯೭೩-೯೯೭) ಹಾಗೂ ಆತನ ಮಗ ಇರಿವ ಬೆಡಂಗ ಸತ್ಯಾಶ್ರಯರ (೯೯೭-೧೦೦೮) ಕಾಲದಲ್ಲಿದ್ದರು.

    ದಾನಚಿಂತಾಮಣಿ ಅತ್ತಿಮಬ್ಬೆ: ಪೋಸ್ಟಕಾರ್ಡ್ ಕಲ್ಪನೆ – ಮಹಾವೀರ್ ಕುಂದೂರ್, ವರ್ಣಚಿತ್ರ – ಶ್ರೀ ಸುರೇಶ್ ಅರ್ಕಸಾಲಿ, ಹುಬ್ಬಳ್ಳಿ; ಕಲೆ – ಸ್ವಾತಿ ಗ್ರಾಫಿಕ್ಸ್, ಹುಬ್ಬಳ್ಳಿ.

    ಅತ್ತಿಮಬ್ಬೆ ಅವರ ಆಶ್ರಯದಲ್ಲೇ ರನ್ನಕವಿ ತಮ್ಮ ಅಜಿತಪುರಾಣವನ್ನು ಬರೆದದ್ದು (೯೯೩). ಈಕೆ ಲಕ್ಕುಂಡಿಯಲ್ಲಿ ಬಸದಿಯನ್ನು ಕಟ್ಟಿಸಿ ಅದಕ್ಕೆ ದತ್ತಿಗಳನ್ನು ಬಿಡಿಸಿದ್ದು ೧೦೦೭ರಲ್ಲಿ ಎಂದು ಅಲ್ಲಿಯ ಶಾಸನದಿಂದ ತಿಳಿದುಬರುತ್ತದೆ.
    ಅತ್ತಿಮಬ್ಬೆಯವರ ಕುರಿತು ಅನೇಕ ಸಂಗತಿಗಳು ರನ್ನ ಕವಿಯ ಅಜಿತಪುರಾಣದಿಂದಲೂ ಆತನೇ ಬರದಿರಬಹುದಾದ ಲಕ್ಕುಂಡಿಯ ಶಾಸನದಿಂದಲೂ ತಿಳಿದುಬರುತ್ತವೆ. ಈಕೆಯ ತೌರುಮನೆಯ ಹಲವು ಸಂಗತಿಗಳು ಪೊನ್ನನ ಶಾಂತಿಪುರಾಣದಿಂದ ತಿಳಿದುಬರುತ್ತವೆ. ಜೊತೆಗೆ, ಈಕೆಯ ಮೇಲೆ ರಚಿತವಾದ ಬ್ರಹ್ಮಶಿವನ ಸಮಯಪರೀಕ್ಷೆಯೂ ಏಳೆಂಟು ಶಾಸನಗಳೂ ಅತ್ತಿಮಬ್ಬೆಯವರನ್ನು ಕೊಂಡಾಡಿವೆ. ಅತ್ತಿಮಬ್ಬೆಯ ತಂದೆಯ ತಂದೆ ನಾಗಮಯ್ಯ. ಈತ ಈಗಿನ ಆಂಧ್ರಪ್ರದೇಶಕ್ಕೆ ಸೇರಿರುವ ವೆಂಗಿಮಂಡಲದ ಕಮ್ಮೆನಾಡಿನ ಪುಂಗನೂರಿನವರು.

    ಜೈನ ಬ್ರಾಹ್ಮಣ ಸಂಪ್ರದಾಯಸ್ಥರಾದ ಇವರ ಮಕ್ಕಳು ಮಲ್ಲಪಯ್ಯ ಮತ್ತು ಪೊನ್ನಮಯ್ಯ. ಮಲ್ಲಪಯ್ಯ ಪಂಡಿತ ಮಂಡಳಿಗಂ ಕವಿಮಂಡಳಿಗಂ ತನ್ನ ಮನೆ ತವರ್ಮನೆಯೆನೆ ಬಾಳಿದವರು. ಈ ಸೋದರರಿಬ್ಬರ ಆಶ್ರಯದಲ್ಲಿ ಪೊನ್ನ ಶಾಂತಿಪುರಾಣವನ್ನು ಬರೆದದ್ದು. ಪೊನ್ನಮಯ್ಯ ತನ್ನ ದೊರೆ ತೈಲಪನಿಗಾಗಿ ಕಾವೇರಿ ತೀರದ ಯುದ್ದದಲ್ಲಿ ಪ್ರಾಣವನ್ನು ಒಪ್ಪಿಸಿದ. ಇವರಲ್ಲಿ ಮಲ್ಲಪಯ್ಯ ಮತ್ತು ಅಪ್ಪಕಬ್ಬೆಯರ ಮಗಳೇ ಅತ್ತಿಮಬ್ಬೆ.
    ಅತ್ತಿಮಬ್ಬೆಯನ್ನು ಅವರ ತಂಗಿ ಗುಂಡಮಬ್ಬೆಯ ಜೊತೆಯಲ್ಲಿ ಚಾಲುಕ್ಯ ಚಕ್ರವರ್ತಿ ಅಹವಮಲ್ಲನ ಭುಜಾದಂಡದಂತಿದ್ದ ನಾಗದೇವನಿಗೆ ಕೊಟ್ಟಿದ್ದರು. ಈ ನಾಗದೇವ ಚಾಲುಕ್ಯ ಚಕ್ರವರ್ತಿಯ ಮಹಾಮಂತ್ರಿ ಧಲ್ಲಪನ ಹಿರಿಯ ಮಗ. ಹೀಗೆ ಅತ್ತಿಮಬ್ಬೆಯನ್ನು ಕೊಟ್ಟ ಮತ್ತು ತಂದುಕೊಂಡ ಮನೆತನಗಳೆರಡೂ ಪ್ರಖ್ಯಾತವಾಗಿದ್ದುವು. ಅತ್ತಿಮಬ್ಬೆ ಅವರಿಗೆ ಅಣ್ಣಿಗದೇವನೆಂಬ ಕಿರಿ ವಯಸ್ಸಿನ ಮಗನೂ ಇದ್ದ. ಆದರೆ ಆಕೆ ಇನ್ನೂ ಯೌವನದಲ್ಲಿರುವಾಗಲೇ ಆಕೆಯ ಗಂಡ ನಾಗದೇವ ಸ್ವರ್ಗಸ್ಥನಾದ. ಆಗ ಅವಳ ತಂಗಿ ಗುಂಡಮಬ್ಬೆ ಅಕ್ಕನನ್ನು ಕಷ್ಟದಿಂದ ಒಪ್ಪಿಸಿ, ತಾನೂ ಗಂಡನೊಡನೆ ಸಹಗಮನ ಮಾಡಿದಳು.

    ಪತಿಯ ಅಗಲಿಕೆಯಿಂದ ಜರ್ಝರಿತರಾದ ಅತ್ತಿಮಬ್ಬೆ ಕಟ್ಟುಮನಸ್ಸು ಮಾಡಿ ಮಗನ ಲಾಲನೆ ಪಾಲನೆಗೊಸ್ಕರ ಉಳಿದರು. ಆದರೆ ಉಗ್ರವ್ರಂತನೇಮಾದಿಗಳಲ್ಲಿ ದೇಹವನ್ನು ಬಳಲಿಸಿದರು; ತಮ್ಮ ಬಳಿಯಿದ್ದ ಐಶ್ವರ್ಯವನ್ನು ಉದಾರವಾಗಿ ಸತ್ಕಾರ್ಯಗಳಿಗೆ ವ್ಯಯಿಸಿದರು.
    ಅತ್ತಿಮಬ್ಬೆ ಅವರು ಮಾಡಿದ ಧಾರ್ಮಿಕ ಕಾರ್ಯಗಳಲ್ಲಿ ಕೆಲವು ಇಂತಿವೆ: ಮಣಿಖಚಿತವಾದ ೧,೫೦೦ ಜಿನ ಪ್ರತಿಮೆಗಳನ್ನು ಮಾಡಿಸಿ ದಾನ ಮಾಡಿದರು; ಲಕ್ಕುಂಡಿಯಲ್ಲಿ ದೊಡ್ಡ ಬಸದಿಯನ್ನು ಕಟ್ಟಿಸಿದರು; ರನ್ನ ಕವಿಯಿಂದ ಅಜಿತಪುರಾಣವನ್ನು ಹೇಳಿಸಿದ್ದಲ್ಲದೆ, ಅಜಿತ ಪುರಾಣ ೨ನೇಯ ತೀರ್ಥಂಕರ ಅಜಿತಸ್ವಾಮಿಯ ಕುರಿತ ೧೨ ಆಶ್ವಾಸಗಳ ವಿಸ್ತçತ ಕಥೆ. ಮತ್ತು ದಾನಚಿಂತಾಮಣಿ ‘ಅತ್ತಿಮಬ್ಬೆ’ ರನ್ನನಿಂದ ಬರೆಯಿಸಿದಳು. ಪೊನ್ನನಿಂದ ಹೇಳಿಸಿದ ಶಾಂತಿ ಪುರಾಣ ಹಸ್ತಪ್ರತಿಗಳ ಅಭಾವದಿಂದ ಜನರಲ್ಲಿ ಪ್ರಚಾರವಾಗದಿರುವ ಸಂಗತಿಯನ್ನು ಗಮನಿಸಿ ಅದರ ಸಾವಿರ ಪ್ರತಿಗಳನ್ನು ಮಾಡಿಸಿ ಹಂಚಿಸಿದರು.

    ಅತ್ತಿಮಬ್ಬೆ ತಮ್ಮ ತಪಸ್ಸು, ನಿಷ್ಠೆ, ಔದಾರ್ಯ, ತ್ಯಾಗ, ಧರ್ಮಾನುರಾಗ, ಕಾವ್ಯಪ್ರೇಮ ಇತ್ಯಾದಿಗಳಿಂದ ತಮ್ಮ ಕಾಲದ ಜನರ ಕಣ್ಣಲ್ಲಿ ಅದ್ಭುತ ವ್ಯಕ್ತಿಯಾದರು. ಅವರು ಮೆರೆದ ಪವಾಡಗಳನ್ನು ಅವರ ಆಶ್ರಯದಲ್ಲಿದ್ದ ರನ್ನ ಕವಿಯ ಮಾತುಗಳು ಮತ್ತು ಆಕೆಯ ಕುರಿತ ಶಾಸನವೂ ಕೊಂಡಾಡಿವೆ. ಜಿನನನ್ನು ಹೊತ್ತು ತಂದ ಅತ್ತಿಮಬ್ಬೆಯನ್ನು ಕಂಡ ಗೋದಾವರಿ ತನ್ನ ಪ್ರವಾಹವನ್ನು ಉಡುಗಿಸಿತು; ಇದರಿಂದಾಗಿ ತೈಲಪ ತನ್ನ ಸೈನ್ಯದೊಡನೆ ನದಿಯನ್ನು ದಾಟುವುದು ಸಾಧ್ಯವಾಯಿತು.

    ಭಾರತೀಯ ಅಂಚೆ ಇಲಾಖೆ ಹೊರತಂದಿರುವ ದಾನಚಿಂತಾಮಣಿ ಅತ್ತಿಮಬ್ಬೆಯ ವರ್ಣಚಿತ್ರದ ಪೋಸ್ಟಕಾರ್ಡ್.

    ಮದಿಸಿದ ಆನೆ ಅತ್ತಿಮಬ್ಬೆಯ ಪಾದಗಳಿಗೆ ಶರಣಾಗಿ ಎರಗಿತು. ಅಕಸ್ಮಾತ್ ನದಿಯಲ್ಲಿ ಬಿದ್ದುಹೋದ ಜಿನಬಿಂಬ ಎಂಟು ದಿನಗಳಲ್ಲಿ ಕೈಗೆ ಬಂದಿತು (ಆ ಎಂಟು ದಿನವೂ ಆಕೆ ಉಪವಾಸವಿದ್ದರು). ಶ್ರವಣಬೆಳಗೊಳದ ಗೊಮ್ಮಟ ವಿಗ್ರಹವನ್ನು ನೋಡುವವರೆಗೆ ಅನ್ನವನ್ನು ತ್ಯಜಿಸುವೆನೆಂಬ ನಿಯಮವನ್ನು ಪಾಲಿಸಿ, ದರ್ಶನಕ್ಕಾಗಿ ಪರ್ವತವನ್ನು ಹತ್ತಿದಾಗ ಅವರ ಮಾರ್ಗಾಯಾಸ ಪರಿಹಾರಕ್ಕಾಗಿ ಅಕಾಲವೃಷ್ಟಿಯೂ ಆಯಿತು. ಇವು ಅತ್ತಿಮಬ್ಬೆ ಮಾಡಿದರೆಂದು ಹೇಳಲಾದ ಕೆಲವು ಪವಾಡಗಳು.
    ಹೀಗೆ ಅತ್ತಿಮಬ್ಬೆ ಈಚಿನವರ ಕಣ್ಣಲ್ಲಿ ಮಾತ್ರವಲ್ಲ, ತಮ್ಮ ಕಾಲದಲ್ಲಿಯೇ ಪವಾಡ ವ್ಯಕ್ತಿಯಾಗಿ ಪರಿಣಮಿಸಿದ್ದರು. ಚಕ್ರವರ್ತಿ ಪೂಜಿತೆಯೂ ಆಗಿದ್ದರು. ಅವರ ಜೀವಿತ ಕಾಲದ ನಂತರ ಹುಟ್ಟಿದ ಅನೇಕ ಶಾಸನಗಳಲ್ಲಿಯೂ ಬ್ರಹ್ಮಶಿವನ ಸಮಯ ಪರೀಕ್ಷೆಯಲ್ಲಿಯೂ ಅವರನ್ನು ಮನಸಾರೆ ಕೊಂಡಾಡಲಾಗಿದೆ. ಅವರು ನಾಡಿನಲ್ಲಿ ಶೀಲ ಅನುಪಮಗುಣ ಔದಾರ್ಯ ಅಭಿಮಾನಗಳಿಗೆ ಸಂಕೇತವಾಗಿ ಬಾಳಿದರು.
    ಅತ್ತಿಮಬ್ಬೆ ಮುಂದಿನ ಜನಾಂಗದ ಮೇಲೆಯೂ ತಮ್ಮ ಪ್ರಭಾವನ್ನು ಬೀರಿದ ಮಹಾವ್ಯಕ್ತಿಗಳಲ್ಲಿ ಒಬ್ಬರನಿಸಿದ್ದಾರೆ.

    ಅತ್ತಿಮಬ್ಬೆ ಮಾಡಿರುವ ಕೆಲಸಗಳು:
    ೧. ರನ್ನನಂಥ ವರಕವಿಗಳಿಗೆ ಸ್ಫೂರ್ತಿ, ಆಶ್ರಯ ಕೊಟ್ಟಳು.
    ೨. ನಾಗದೇವ, ಅಣ್ಣಿಗದೇವರಂಥ ರಣಕಲಿಗಳಿಗೆ ಉತ್ಸಾಹ ತುಂಬಿದಳು.
    ೩. ಓಲೆಗರಿ ಪ್ರತಿಗಳನ್ನು – ಶಾಂತಿಪುರಾಣ, ಅಜಿತಪುರಾಣ ಕಾವ್ಯಗಳ ಹಲವಾರು ಪ್ರತಿಗಳನ್ನು ಬರಸಿ ಕನ್ನಡ ಸಾಹಿತ್ಯವನ್ನು ಪುನರುಜೀವಿಸಿದ ಪುಣ್ಯಮೂರ್ತಿಯಾದಳು.
    ೪. ಜಿನಬಿಂಬಗಳನ್ನು ದಾನಮಾಡಿ ಭಕ್ತರನ್ನು ಉದ್ದೀಪನಗೊಳಿಸಿದಳು.
    ೫. ಮುನಿಗಳಿಗೆ ಆತ್ಮಾನುಸಂಧಾನದ ಧ್ಯಾನಕಾರ್ಯದಲ್ಲಿ ನೆರವಾದಳು.
    ೬. ಆರ್ಯಿಕೆಯರಿಗೆ ಆಹಾರ ದಾನವಿತ್ತು ಅವರ ನಿರಾತಂಕ ಜೀವನಕ್ಕೆ ಇಂಬಾದಳು.
    ೭. ನಾಡಿನಾದ್ಯಂತ ನೂರಾರು ಚೈತ್ಯಾಲಯಗಳನ್ನು ನಿರ್ಮಿಸುವುದರ ಮೂಲಕ ಧಾರ್ಮಿಕ ಚೈತನ್ಯವನ್ನು ಸಾಮಾನ್ಯ ಚೇತನದಲ್ಲೂ ತುಂಬಿ ಹರಿಯಿಸಿದ ಮಹಾಚೇತನವಾದಳು.
    ೮. ಬೇಡಿದವರಿಗೆ ಅವರು ಬೇಡಿದ್ದನ್ನು ತಡಮಾಡದೆ ಒಡನೆಯೇ ಹಿಡಿ ಹಿಡಿಯಾಗಿ ‘ಹಿಡಿ-ಹಿಡಿ’ ಎಂದು ಮುಕ್ತಹಸ್ತದಿಂದ ನೀಡಿದಳು; ತನ್ನದೆಂಬ ಸರ್ವಸ್ವವನ್ನೂ ಧರ್ಮಕ್ಕಾಗಿ, ಸಹಮಾನವರ ಒಳಿತಿಗಾಗಿ ದಾನಾಮಾಡಿದಳು.

    ಅತ್ತಿಮಬ್ಬೆಯ ಬಿರುದುಗಳು:
    ೧. ಕವಿವರ ಕಾಮಧೇನು
    ೨. ಗಿಣದಂಕಕಾರ್ತಿ
    ೩. ಜಿನಶಾಸನದೀಪಿಕೆ
    ೪. ದಾನಚಿಂತಾಮಣಿ
    ೫. ಗುಣದಖನಿ
    ೬. ಜೈನ ಶಾಸನ ಲಕ್ಷö್ಮ
    ೭. ಅಕಲಂಕಚರಿತೆ
    ೮. ಸಜ್ಜನೈಕಚೂಡಾಮಣಿ
    ೯. ಸರ್ವಕಳಾವಿದೆ; ಮುಂತಾದುವು

    ಭಾರತೀಯ ಅಂಚೆ ಇಲಾಖೆಯು ಕನ್ನಡ ರಾಜ್ಯೋತ್ಸವ – ೨೦೨೨ರ ಅಂಗವಾಗಿ “ಜಿನರತ್ನ ಭೂಷಣರು” ಮಾಲಿಕೆಯ ಭಾಗವಾಗಿ “ದಾನಚಿಂತಾಮಣಿ ಅತ್ತಿಮಬ್ಬೆಯ” ವರ್ಣಚಿತ್ರದ ಪೋಸ್ಟಕಾರ್ಡ್ ಹೊರತಂದಿದೆ. ಹೊಂಬುಜ ಜೈನಮಠದ ವತಿಯಿಂದ ವರ್ಣಚಿತ್ರದ ಪೋಸ್ಟಕಾರ್ಡುಗಳನ್ನು ಪ್ರಾಯೋಜಿಸಲಾಗಿದೆ.

    ಪೊನ್ನ ಕವಿ ಒಬ್ಬ ಕವಿ ಚಕ್ರವರ್ತಿ ಮತ್ತು ರತ್ನತ್ರಯರಲ್ಲಿ ಒಬ್ಬ.

     ಪೊನ್ನ ಕವಿ ಒಬ್ಬ ಕವಿ ಚಕ್ರವರ್ತಿ ಮತ್ತು ರತ್ನತ್ರಯರಲ್ಲಿ ಒಬ್ಬ. ಈತನಿಗೆ ಪೊನ್ನಿಗ, ಪೊನ್ನಮಯ್ಯ ಎಂಬ ಹೆಸರುಗಳೂ ಉಂಟು.

    ಪೊನ್ನ: ಪೋಸ್ಟಕಾರ್ಡ್ ಕಲ್ಪನೆ – ಮಹಾವೀರ್ ಕುಂದೂರ್, ವರ್ಣಚಿತ್ರ – ಶ್ರೀ ಸುರೇಶ್ ಅರ್ಕಸಾಲಿ, ಹುಬ್ಬಳ್ಳಿ; ಕಲೆ – ಸ್ವಾತಿ ಗ್ರಾಫಿಕ್ಸ್, ಹುಬ್ಬಳ್ಳಿ.

    ವಿಮರ್ಶಕರು ಪೊನ್ನನ ಕಾಲವನ್ನು ಸುಮಾರು ಕ್ರಿ.ಶ. ೯೫೦ ಎಂದು ಪರಿಗಣಿಸಿದ್ದಾರೆ. ಪೊನ್ನನು ಜನ್ಮತ ಒಬ್ಬ ಜೈನ, ಕಮ್ಮನಾಡಿನ ವೆಂಗಿಬಿಷಯ ಎಂಬ ಪ್ರಾಂತ್ಯಕ್ಕೆ ಸೇರಿದವನು. ಇದು ಈಗಿನ ಆಂಧ್ರದ ಚಿತ್ತೂರು ಜಿಲ್ಲೆಯ ಪುಂಗನೂರು ಪ್ರದೇಶದಿಂದ ಈಗಿನ ಗುಲ್ಬರ್ಗಾ ಜಿಲ್ಲೆಗೆ ಸೇರಿದ ರಾಷ್ಟ್ರಕೂಟರ ರಾಜಧಾನಿಯಾದ ಮಾನ್ಯಖೇತಕ್ಕೆ ವಲಸೆ ಬಂದನೆಂದು ವಿದ್ವಾಂಸರ ಅಭಿಪ್ರಾಯವಾಗಿದೆ.
    ಇಂದ್ರನಂದಿಮುನಿ ತನ್ನ ವಿದ್ಯಾಗುರುವೆಂದೂ, ಜಿನಚಂದ್ರ ಮುನೀಂದ್ರ ತನ್ನ ಧಾರ್ಮಿಕ ಗುರುವೆಂದೂ ಪೊನ್ನ ಶಾಂತಿಪುರಾಣದಲ್ಲಿ ಹೇಳಿಕೊಂಡಿದ್ದಾನೆ.
    ಪೊನ್ನ ರಾಷ್ಟ್ರಕೂಟರ ದೊರೆ ಮುಮ್ಮಡಿ ಕೃಷ್ಣನ ಆಶ್ರಯದಲ್ಲಿದ್ದು “ಉಭಯಕವಿ ಚಕ್ರವರ್ತಿ” ಎಂಬ ಬಿರುದನ್ನು ಪಡೆದಿದ್ದ. ಈತ ಕವಿ, ಗಮಕಿ, ವಾದಿ, ವಾಗ್ಮಿಯಾಗಿದ್ದನೆಂದೂ ಸರ್ವದೇವ ಕವೀಂದ್ರನೆಂಬ ಬಿರುದು ಪಡೆದಿದ್ದುದಾಗಿಯೂ ತಿಳಿದುಬರುತ್ತದೆ.

    ಕವಿ ತನ್ನನ್ನು “ಕುರುಳ್ಗಳ ಸವಣ” ಎಂದು ಹೇಳಿಕೊಂಡಿರುವುದನ್ನು ಗಮನಿಸಿದರೆ ಕವಿಯ ನಿರ್ಲಿಪ್ತ ಮನೋಭಾವ ವ್ಯಕ್ತವಾಗುತ್ತದೆ. ಕೃಷ್ಣಚಕ್ರವರ್ತಿಯಿಂದ ಧನ, ಕನಕ, ಕೀರ್ತಿ, ಪ್ರತಿಷ್ಠೆಗಳನ್ನು ಗಳಿಸಿದ್ದರೂ ಲೌಕಿಕ ವ್ಯಾಮೋಹದಿಂದ ದೂರಾಗಿದ್ದ ಭವ್ಯ ವ್ಯಕ್ತಿತ್ಯ ಪೊನ್ನನದಾಗಿತ್ತು.

    ರಾಷ್ಟ್ರಕೂಟ ಮುಮ್ಮಡಿ ಕೃಷ್ಣನ ಆಶ್ರಯದಲ್ಲಿ ಭುವನೈಕ ರಾಮಾಭ್ಯುದಯವನ್ನು ರಚಿಸಿದ ಪೊನ್ನ ಚಾಲುಕ್ಯ ಚಮೂಪತಿಗಳಾಗಿದ್ದ ಮಲ್ಲಪ್ಪಯ್ಯ ಪುನ್ನಮಯ್ಯರ ಆಶ್ರಯದಲ್ಲಿ ಶಾಂತಿಪುರಾಣವನ್ನು ಬರೆದ.
    ಪೊನ್ನನ ಹೆಸರಿನಲ್ಲಿರುವ ಕೃತಿಗಳೆಂದರೆ : ಶಾಂತಿಪುರಾಣ, ಭುವನೈಕ ರಾಮಾಭ್ಯುದಯ, ಜಿನಾಕ್ಷರ ಮಾಲೆ, ಗತಪ್ರತ್ಯಾಗತ, ಅಲಂಕಾರ, ಆದಿಪುರಾಣಮು, ವಿರಾಟಮು. ಇವುಗಳಲ್ಲಿ ಶಾಂತಿಪುರಾಣ ಮತ್ತು ಜಿನಾಕ್ಷರ ಮಾಲೆಗಳೂ ಉಪಲಬ್ದವಿದ್ದು ಉಳಿದವು ಕಾಲಗರ್ಭದಲ್ಲಿ ಅಡಗಿಹೋಗಿವೆ.

    ಭುವನೈಕರಾಮಾಭ್ಯುದಯವನ್ನು ಕುರಿತು ಪೊನ್ನ ತನ್ನ ಶಾಂತಿಪುರಾಣದಲ್ಲಿ ಪ್ರಸ್ತಾಪಿಸಿದ್ದಾನೆ. ೧೪ ಭುವನಂಗಳಿಗೆ ಸರಿಸಮಾನವಾದಂಥ ೧೪ ಆಶ್ವಾಸಗಳುಳ್ಳ ಭುವನೈಕ ರಾಮಾಭ್ಯುದಯದ ಕಥಾವಸ್ತು ರಾಮಕಥೆಯೆಂದು ಶಾಂತಿಪುರಾಣದಲ್ಲಿ ಹೇಳಲಾಗಿದೆ. ಕಾವ್ಯಾವಲೋಕನ, ಶಬ್ದಮಣಿದರ್ಪಣ, ಸೂಕ್ತಿಸುಧಾರ್ಣವ, ಕಾವ್ಯಸಾರಗಳಲ್ಲಿ ದೂರಕುವ ಕೆಲವು ಲಕ್ಷಪದ್ಯಗಳನ್ನು ಭುವನೈಕ ರಾಮಾಭ್ಯುದಯದಿಂದ ಆಯ್ದವೆಂದು ಗುರುತಿಸಲಾಗಿದೆ. ಅವುಗಳ ಆಧಾರದ ಮೇಲೆ ಭುವನೈಕ ರಾಮಾಭ್ಯುದಯ ವೈದಿಕ ಸಂಪ್ರದಾಯದ ರಾಮಾಯಣವೆಂದು ತಿಳಿದುಬರುತ್ತದೆ. ಸಮಕಾಲೀನ ಸಂಪ್ರದಾಯದಂತೆ ಈ ಲೌಕಿಕ ಕೃತಿಯಲ್ಲಿ ಕಥಾನಾಯಕ ರಾಮನೊಡನೆ, ತನ್ನ ಆಶ್ರಯದಾತ ರಾಷ್ಟçಕೂಟ ಮುಮ್ಮಡಿ ಕೃಷ್ಣನನ್ನು ಒಂದುಗೂಡಿಸಿ ಹೇಳಿದ್ದಾನೆ. ಭುವನೈಕರಾಮ ಎಂದು ದೊರೆ ಕೃಷ್ಣ್ಯನಿಗೆ ಸಂದ ಬಿರುದೇ ಇಲ್ಲಿ ಕಾವ್ಯದ ಶಿರೋನಾಮೆಯಾಗಿದೆ. ತೆಕ್ಕೋಲ ಎಂಬ ಸ್ಥಳದಲ್ಲಿ ನಡೆದ ಯುದ್ಧದಲ್ಲಿ ಮೂವಡಿ ಚೋಳ ರಾಜಾದಿತ್ಯನ ಮೇಲೆ ರಾಷ್ಟçಕೂಟ ಮುಮ್ಮಡಿ ಕೃಷ್ಣ ಸಾಧಿಸಿದ ವಿಜಯದ ಸಂದರ್ಭದಲ್ಲಿ ಈ ಕೃತಿ ಜನ್ಮ ತಳೆಯಿತು.

    ಪೊನ್ನ ತಾನು ‘ಗತಪ್ರತ್ಯಾಗತ’ ಎಂಬ ಸಂಸ್ಕೃತ ಕೃತಿಯನ್ನು ರಚಿಸಿದುದಾಗಿಯೂ ಅದರಿಂದ ತನಗೆ ಉಭಯ ಕವಿ ಚಕ್ರವರ್ತಿ ಬಿರುದು ದೊರೆತುದಾಗಿಯೂ ತನ್ನ ಶಾಂತಿಪುರಾಣದಲ್ಲಿ ಹೇಳಿಕೊಂಡಿದ್ದಾನೆ.
    ಆದಿಪುರಾಣಮು ಮತ್ತು ವಿರಾಟಮು ಎಂಬ ತೆಲುಗು ಕೃತಿಗಳನ್ನು ಸರ್ವದೇವನೆಂಬ ಕವಿ ರಚಿಸಿದನೆಂದು ತೆಲುಗು ಸಾಹಿತ್ಯ ಚರಿತ್ರಕಾರರು ಹೇಳುತ್ತಾರೆ; ಈ ಸರ್ವದೇವ ಮತ್ತು ಕನ್ನಡದ ಪೊನ್ನ ಒಬ್ಬನೇ ಎಂದು ಹಲವು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.

    ಭಾರತೀಯ ಅಂಚೆ ಇಲಾಖೆ ಹೊರತಂದಿರುವ ಪೊನ್ನನ ವರ್ಣಚಿತ್ರದ ಪೋಸ್ಟಕಾರ್ಡ್.

    ಆದಿವುರಾಣಮು ಮತ್ತು ವಿರಾಟಮು ಕೃತಿಗಳು ಕಣ್ಮರೆಯಾಗಿವೆ. ಲಕ್ಷಣಸಾರ ಎಂಬ ಛಂದೋಗ್ರಂಥ ಮತ್ತು ಪ್ರಬಂಧಮಣಿಭೂಷಣಮು ಎಂಬ ಸಂಕಲನ ಗ್ರಂಥಗಳಲ್ಲಿ ಸರ್ವದೇವನ ಕೃತಿಗಳಿಂದ ಆಯ್ದ ಕೆಲವು ಲಕ್ಷö್ಯಪದ್ಯಗಳು ದೊರೆಯುತ್ತವೆ. ಪೊನ್ನನು ಕನ್ನಡದಲ್ಲಿಯಂತೆ ತೆಲುಗಿನಲ್ಲಿಯೂ ಆದಿಪುರಾಣಮು ಎಂಬ ಧಾರ್ಮಿಕ ಕಾವ್ಯವನ್ನೂ, ವಿರಾಟಮು ಎಂಬ ಲೌಕಿಕ ಖಂಡಕಾವ್ಯವನ್ನೂ ಬರೆದಿರುವ ಸಾಧ್ಯತೆಗಳಿವೆ ಎಂಬ ಅಭಿಪ್ರಾಯವಿದೆ. ಮಲ್ಲಪಯ್ಯ ಪುನ್ನಮಯ್ಯರ ಆಶ್ರಯ ಪಡೆದು ಪುಂಗನೂರಿನಲ್ಲಿ ನೆಲಸಿದ ಈ ಕವಿ ತೆಲುಗು ಸಾಹಿತ್ಯವನ್ನೂ ಅಭ್ಯಸಿಸಿ ಕೃತಿರಚನೆ ಮಾಡಿರುವ ಸಾಧ್ಯತೆ ಉಂಟು ಎಂಬುದು ವಿದ್ವಜ್ಜನರ ಊಹೆ.
    ಜಿನಾಕ್ಷರ ಮಾಲೆ ಪೊನ್ನನ ಉಪಲಬ್ಧ ಕೃತಿಗಳಲ್ಲೊಂದಾಗಿದೆ. ೩೯ ಕಂದಪದ್ಯಗಳ ಸ್ತೋತ್ರ ರೂಪದ ಈ ಕೃತಿಯಲ್ಲಿ ೨೫ ವರ್ಗೀಯ ವ್ಯಂಜನಗಳು ಹಾಗೂ ೧೨ ಆವರ್ಗೀಯ ವ್ಯಂಜನಗಳನ್ನು ಅಂತಾದಿಕ್ರಮದಲ್ಲಿ ಹೊಂದಿಸಲಾಗಿದೆ. ಕುರುಳ್ಗಳ ಸವಣ ಎಂಬ ನಾಮಾಂಕಿತದಲ್ಲಿಯೇ ಹೆಣೆಯಲಾದ ಈ ಕೃತಿಗಳಲ್ಲಿ ಕವಿಯ ಹೆಸರು ಎಲ್ಲಿಯೂ ಇಲ್ಲ.
    ಪೊನ್ನ ಕವಿಯ ಮತ್ತೊಂದು ಉಪಲಬ್ಧ ಕೃತಿ ಶಾಂತಿಪುರಾಣ. ಹದಿನಾರನೆಯ ತೀರ್ಥಂಕರನೂ, ಐದನೆಯ ಚಕ್ರವರ್ತಿಯೂ ಆದ ಶಾಂತಿನಾಥನನ್ನು ಕುರಿತು ಕನ್ನಡದಲ್ಲಿ ರೂಪಿತವಾದ ಮೊದಲ ಕೃತಿಯಿದು. ಈ ಕೃತಿಗೆ ಆಸಗ ಕವಿಯ ಸಂಸ್ಕೃತ ಶಾಂತಿಪುರಾಣವು ಆಕರವಾಗಿದೆ. ೧೨ ಆಶ್ವಾಸಗಳುಳ್ಳ ಈ ಚಂಪೂ ಕೃತಿಯಲ್ಲಿ ಶ್ರೀಷೇಣ, ಭೂಗಭೂಮಿಜ, ಶ್ರೀದೇವ, ಅಮಿತತೇಜ, ಮಣಿಚೂಳ, ಅಪರಾಜಿತ, ಅಚ್ಯುತೇಂದ್ರ, ವಜ್ರಾಯುಧ, ಅಹಮಿಂದ್ರ, ಮೇಘರಥ, ಮಹೇಂದ್ರ- ಈ ಹನ್ನೊಂದು ಭವಗಳಲ್ಲಿ ತೊಳಲಿ ಬಂದ ಜೀವ ಶಾಂತಿನಾಥನಾಗಿ ಜಿನತ್ಯವನ್ನು ಪಡೆಯುತ್ತದೆ. ಕಥನಕ್ರಮದಲ್ಲಿ ಅಸಗನನ್ನೇ ಅನುಸರಿಸಿರುವ ಪೊನ್ನ ಕವಿ ವರ್ಣನೆಗಳಲ್ಲಿ ಸ್ವಂತಿಕೆಯನ್ನು ಮೆರೆದಿದ್ದಾನೆ. ಪಾತ್ರಗಳಿಗೆ ಮಾನವೀಯತೆಯ ಮೆರುಗನ್ನಿತ್ತು ಸಜೀವವಾಗಿಸಿದ್ದಾನೆ. ಇದರಲ್ಲಿ ಜಿನ ಜನಾಭಿಷೇಕದ ಭಾಗವನ್ನು ಪಂಪನಿಂದ ಸ್ವೀಕರಿಸಿದ್ದಾನೆ. ಜ್ಯೋತಿಃ ಪ್ರಭಾ ಸ್ವಯಂವರ ಸಂದರ್ಭವನ್ನು ಕಾಳಿದಾಸನ ರಘುವಂಶದಿಂದ ಭಾಷಾಂತರಿಸಿದ್ದಾನೆ. ಶಾಂತಿನಾಥನ ದಿಗ್ವಿಜಯ ವರ್ಣನೆಯಲ್ಲಿ ರಘುವಂಶದ ರಘು ಮಹಾರಾಜನ ದಿಗಿಜಯ ವರ್ಣನೆಯನ್ನು ಬಿಂಬಿಸಿದ್ದಾನೆ. ಸುಂದರ ವರ್ಣನೆಗಳಿಂದ ಕೂಡಿದ ಶಾಂತಿನಾಥ ಪುರಾಣ ಕೇವಲ ಧಾರ್ಮಿಕ ಪುರಾಣವಾಗಿರದೆ ಕಾವ್ಯವೂ ಆಗಿದೆ. ಶಾಂತಿಪುರಾಣವು ಧಾರ್ಮಿಕ ವಿಷಯಗಳ ನಿರೂಪಣೆಯಲ್ಲಿ ಸರಳತೆಯನ್ನಳವಡಿಸಿಕೊಂಡ ಕೃತಿ ಎಂದೆನಿಸಿದೆ.

    ಭಾರತೀಯ ಅಂಚೆ ಇಲಾಖೆಯು ಕನ್ನಡ ರಾಜ್ಯೋತ್ಸವ – ೨೦೨೨ರ ಅಂಗವಾಗಿ “ಜಿನರತ್ನ ಭೂಷಣರು” ಮಾಲಿಕೆಯ ಭಾಗವಾಗಿ “ಪೊನ್ನನ” ವರ್ಣಚಿತ್ರದ ಪೋಸ್ಟಕಾರ್ಡ್ ಹೊರತಂದಿದೆ. ಹೊಂಬುಜ ಜೈನಮಠದವತಿಯಿಂದ ವರ್ಣಚಿತ್ರದ ಪೋಸ್ಟಕಾರ್ಡುಗಳನ್ನು ಪ್ರಾಯೋಜಿಸಲಾಗಿದೆ.

    Feb 8, 2024

    ಕೋಲರು, ಮುಂಡರು, ನಾಗರು, ಮಹಿಷರು

     

    ಕೋಲರು, ಮುಂಡರು, ನಾಗರು, ಮಹಿಷರು

    ದೇವಿಪುರಾಣದಲ್ಲಿ ಕಾಣಸಿಗುವ ಎರಡು ಮಹತ್ವದ ಸಮುದಾಯಗಳೆಂದರೆ ಕೋಲರು ಹಾಗು ಮುಂಡರು. ಕೋಲರು ಈಗ ತಮಿಳುನಾಡಿನಲ್ಲಿರುವ ನೀಲಗಿರಿ ಪ್ರದೇಶದಲ್ಲಿ ವಾಸವಾಗಿದ್ದಾರೆ. ಇವರಾಡುವ ಭಾಷೆ ತಮಿಳು ಹಾಗು ಕನ್ನಡ ಕೂಡಿದ ಭಾಷೆ. ಓಡಿಸಾದಲ್ಲಿರುವ ಒಂದು ಸಮುದಾಯಕ್ಕೂ ಕೋಲ ಎನ್ನುವ ಹೆಸರಿದೆ. ಈ ಸಮುದಾಯದ ಇತರ ಹೆಸರುಗಳು: ಕುಂಟಮ್, ಕುಡ, ಕೋರ, ಮಿರ್ಧ, ಮೊರ್ಭ, ಬಿರ್ಹೋರ ಮತ್ತು ನಾಗೇಸಿಯ. ಇವರ ಭಾಷೆ ದ್ರಾವಿಡ. ಕರ್ನಾಟಕದಲ್ಲಿಯ ಒಂದು ಸಮುದಾಯಕ್ಕೆ ಕುಡಒಕ್ಕಲಿಗರು ಎಂದು ಕರೆಯಲಾಗುತ್ತಿದೆ. ಇದರಂತೆ ಕೋಲರ ಮತ್ತೊಂದು ಹೆಸರಾದ ನಾಗೇಸಿಯ ಎನ್ನುವದು ದ್ರಾವಿಡ ಸಮುದಾಯಗಳಿಗೂ ನಾಗ ಸಮುದಾಯಕ್ಕೂ ಇರುವ ಸಂಬಂಧವನ್ನು ತೋರಿಸುತ್ತದೆ.

    ವೈದಿಕ ದೇವತೆಯಾದ ಇಂದ್ರನು ರಚಿಸಿದ ದೇವಿಸ್ತುತಿಯಲ್ಲಿ ಈ ರೀತಿಯ ವರ್ಣನೆ ಇದೆ:
    “ ನಮಸ್ತೇ ಗರುಡಾರೂಢೆ, ಕೋಲಾಸುರ ಭಯಂಕರೀ|
    ಸರ್ವದುಃಖಹರೇ ದೇವಿ, ಮಹಾಲಕ್ಷ್ಮಿ ನಮೋಸ್ತುತೇ||

    ವೈದಿಕ ದೇವತೆಯಾದ ಇಂದ್ರನು ಪಿತೃಪ್ರಧಾನ ಜನಾಂಗದ ದೇವತೆ. ದೇವಿಯು ಮಾತೃಪ್ರಧಾನ ಜನಾಂಗದ ದೇವತೆಯಾಗಿದ್ದಾಳೆ. ಯಾವ ಕಾರಣಕ್ಕಾಗಿ ವೈದಿಕ ಧರ್ಮಾನುಯಾಯಿಗಳಾದ, ಪಿತೃಪ್ರಧಾನ ಆರ್ಯರು, ಅವೈದಿಕ ಸಂಪ್ರದಾಯದ, ಮಾತೃಪ್ರಧಾನ, ಆರ್ಯೇತರ ಜನಾಂಗದ ನೆರವನ್ನು ಪಡೆದರು ಎನ್ನುವದು ನಿಗೂಢವಾಗಿದೆ. ಈ ದೇವಿಯು ಕೋಲ ಸಮುದಾಯವನ್ನಲ್ಲದೆ, ಮುಂಡ ಸಮುದಾಯವನ್ನೂ ಸಹ ಸಂಹರಿಸಿದಳು.

    “ಚಾಮುಂಡಾ, ಮುಂಡಮಥನೀ, ಚಂಡಿಕಾ, ಚಕ್ರಧಾರಿಣೀ|”
    …………………(ಲಲಿತಾ ಸಹಸ್ರನಾಮ)

    ಕರ್ನಾಟಕದಲ್ಲಿ ಕೋಲ ಪದದಿಂದ ಪ್ರಾರಂಭವಾಗುವ ೪೫ ಹಾಗು ಕೋರ ಪದದಿಂದ ಪ್ರಾರಂಭವಾಗುವ ೨೨, ಅಂದರೆ ಒಟ್ಟಿನಲ್ಲಿ ೬೭ ಗ್ರಾಮಗಳಿವೆ. ಕೆಲವು ಉದಾಹರಣೆಗಳು: ಕೋಲಾರ, ಕೋರಮಂಗಲ. ಕರ್ನಾಟಕದ ಹೊರಗೂ ಸಹ ಕೋಲ/ಕೋರ ಪದದಿಂದ ಪ್ರಾರಂಭವಾಗುವ ಸ್ಥಳಗಳಿವೆ. ಇವುಗಳಲ್ಲಿ ಪ್ರಸಿದ್ಧ ಹೆಸರೆಂದರೆ ಮಹಾರಾಷ್ಟ್ರ ರಾಜ್ಯದಲ್ಲಿಯ ಕೊಲ್ಲಾಪುರ ಹಾಗೂ ಕೋರೆಗಾವ.

    ಮುಂಡ ಸಮುದಾಯವು ಸದ್ಯಕ್ಕೆ ಝಾರಖಂಡ, ಛತ್ತೀಸಘಡ ಮೊದಲಾದ ಪ್ರದೇಶಗಳಲ್ಲಿ ವಾಸಿಸುತ್ತಿದ್ದು ಇವರ ಜನಸಂಖ್ಯೆ ಸುಮಾರು ೨೦ ಲಕ್ಷದಷ್ಟಿದೆ. ಇವರ ಭಾಷೆ ಮುಂಡಾರಿ. ಇದು ಆಸ್ಟ್ರೋ-ಏಶಿಯಾಟಿಕ್ ಭಾಷೆ. ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟ ಪ್ರಾರಂಭಿಸಿದ ಭಾರತೀಯರಲ್ಲಿ ಮುಂಡ ಜನಾಂಗದ ‘ ಕರಿಯ ಮುಂಡ ’ ಎನ್ನುವವನೇ ಮೊದಲಿಗನು. ಈತ ಮಧ್ಯಪ್ರದೇಶದವನು. ಕರಿಯ ಎನ್ನುವ ಈತನ ಹೆಸರನ್ನು ಗಮನಿಸಿರಿ. ಇದು ದ್ರಾವಿಡ ಹೆಸರು. ಕರ್ನಾಟಕದಲ್ಲಿ ಮುಂಡ ಪದದಿಂದ ಪ್ರಾರಂಭವಾಗುವ ೨೫ ಗ್ರಾಮಗಳಿವೆ. ಉದಾಹರಣೆಗಳು: ಮುಂಡರಗಿ, ಮುಂಡಗೋಡ, ಮುಂಡರಟ್ಟಿ ಇತ್ಯಾದಿ. ಆದರೆ ಸದ್ಯದಲ್ಲಿ ಮುಂಡ ಜನಾಂಗವು ಕರ್ನಾಟಕದಲ್ಲಿ ಉಳಿದಿಲ್ಲ.

    ಜನಾಂಗಸೂಚಕ ಸ್ಥಳನಾಮಗಳಲ್ಲಿ ಮಲ್ಲರ ನಂತರದ ಸ್ಥಾನ ಸಿಗುವದು ನಾಗ ಪದಕ್ಕೆ. ಕರ್ನಾಟಕದಲ್ಲಿ ನಾಗ ಪದದಿಂದ ಪ್ರಾರಂಭವಾಗುವ ೩೧೩ ಗ್ರಾಮಗಳಿವೆ. ಪುರಾಣಗಳ ಪ್ರಕಾರ ನಾಗರೂ ಸಹ ಹಿಮಾಲಯದ ಅಡಿಯಲ್ಲಿದ್ದವರು. ಇಂದ್ರನು ದೇವಿಸ್ತುತಿಯಲ್ಲಿ ದೇವಿಯನ್ನು ‘ಗರುಡಾರೂಢೇ’ ಎಂದು ಬಣ್ಣಿಸುತ್ತಾನೆ. ಗರುಡಪಕ್ಷಿಯು ನಾಗರ ವೈರಿ ಎನ್ನುವದು ಸರ್ವವಿದಿತವಿದೆ. ಈಗಲೂ ಸಹ ಭಾರತದ ಈಶಾನ್ಯ ಭಾಗದಲ್ಲಿ ನಾಗ ಜನಾಂಗದವರಿದ್ದಾರೆ. ಶಂ. ಬಾ. ಜೋಶಿಯವರು ಋಗ್ವೇದಲ್ಲಿ ದೊರೆಯುವ ನಾಗಪ್ರತಿಮೆಗಳ ಬಗೆಗೆ ಆಳವಾದ ಅಧ್ಯಯನವನ್ನೇ ಮಾಡಿದ್ದಾರೆ. ಆದರೆ ನಾಗರಿಗೂ ಕರ್ನಾಟಕಕ್ಕೂ ಏನಾದರೂ ಸಂಬಂಧವಿದೆಯೆ? ಕರ್ನಾಟಕದ ಎಲ್ಲ ಭಾಗದಲ್ಲಿಯೂ ನಾಗ ಪದದಿಂದ ಪ್ರಾರಂಭವಾಗುವ ಸ್ಥಳಗಳಿವೆ. ಕೆಲವು ಉದಾಹರಣೆಗಳು: ನಾಗನೂರು, ನಾಗರಭಾವಿ, ನಾಗರಾಳ, ನಾಗಮಂಗಲ ಇತ್ಯಾದಿ.

    ಅರ್ಜುನನು ಖಾಂಡವವನದಿಂದ ಉತ್ಪಾಟಿಸಿದ್ದು ನಾಗಕುಲವನ್ನು. ಈ ನಾಗರು ಕರ್ನಾಟಕಕ್ಕೆ ಬಂದು ನೆಲಸಿದರೆ?
    ಕರ್ನಾಟಕದಲ್ಲಿ ನಾಗರಖಂಡವೆನ್ನುವ ಪ್ರದೇಶವಿದೆ. ಕರ್ನಾಟಕದ ಕರಾವಳಿ ಹಾಗು ಘಟ್ಟ ಪ್ರದೇಶದಲ್ಲಿ ನಾಗಪೂಜೆಯ ಬಲವಾದ ಸಂಪ್ರದಾಯವಿದೆ. ಇದು ನಾಗ ಜನಾಂಗದ ಕೊಡುಗೆಯೆ? ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಸುಬ್ರಹ್ಮಣ್ಯ ಕ್ಷೇತ್ರದಲ್ಲಿಯೆ ನಾಗಪೂಜೆಯನ್ನು ಪುತ್ರಲಾಭಕ್ಕಾಗಿ ಮಾಡುವದನ್ನು ಗಮನಿಸಿರಿ. ಕೆಲವು ಪಂಡಿತರ ಅಭಿಪ್ರಾಯದ ಪ್ರಕಾರ ಕಂದ ಶಬ್ದದಿಂದ ಸ್ಕಂದ ಶಬ್ದ ಬಂದಿರುವ ಶಕ್ಯತೆ ಇದೆ. ಕಂದ ಜನಾಂಗದ ನಿವಾಸವೇ ಖಾಂಡವವನವಾಗಿರುವದರಿಂದ, ಕಂದರು ಹಾಗು ನಾಗರು ಪರ್ಯಾಯ ಪದಗಳಾಗಿರುವ ಸಂಭಾವ್ಯತೆ ಕಂಡು ಬರುತ್ತದೆ. ಅಥವಾ ಸೋದರ ಸಮುದಾಯದವರಾಗಿರಬಹುದು. ಆದುದರಿಂದ ನಾಗರು ಕರ್ನಾಟಕಕ್ಕೆ ಬಂದು ನೆಲಸಿದ್ದರಲ್ಲಿ ಏನೂ ಆಶ್ಚರ್ಯವಿಲ್ಲ.

    ಮಾತೃಸೈನ್ಯದಿಂದ ಸೋಲಿಸಲ್ಪಟ್ಟ ಮತ್ತೊಂದು ಅಸುರಕುಲದವರೆಂದರೆ ಮಹಿಷಕುಲ. ಇವರು ಎಮ್ಮೆಗಳ ಹೈನುಗಾರಿಕೆಯಲ್ಲಿ ತೊಡಗಿಕೊಂಡವರು. ಕರ್ನಾಟಕದಲ್ಲಿ ಮಹಿಷಿ, ಮಹಿಷವಾಡಗಿ, ಮೈಸಾವಿ(=ಮ್ಹೈಸಾವಿ), ಮೈಸಾಳಗಾ(=ಮ್ಹೈಸಾಳಗಾ), ಮೈಸವಳ್ಳಿ(=ಮ್ಹೈಸವಳ್ಳಿ), ಮೈಸೂರು(=ಮ್ಹೈಸೂರು) ಮೊದಲಾದ ಸ್ಥಳನಾಮಗಳು, ಈ ಪ್ರದೇಶದಲ್ಲಿ ವ್ಯಾಪಕವಾಗಿ ನೆಲೆಸಿದ್ದ ಮಹಿಷ ಸಮುದಾಯವನ್ನು ತೋರಿಸುತ್ತವೆ. ಇದರಂತೆ ಎಮ್ಮೆ ಅಥವಾ ಕೋಣ ಪದದಿಂದ ಪ್ರಾರಂಭವಾಗುವ ೫೮ ಸ್ಥಳಗಳು (ಉದಾಹರಣೆಗೆ ಎಮ್ಮಿಗನೂರು, ಕೋಣಾಜೆ, ಕೋಣಂದೂರು ಇತ್ಯಾದಿ) ಕರ್ನಾಟಕದಲ್ಲಿವೆ.

    ಈ ಮಹಿಷ ಕುಲದವರು ಹಾಗು ಆಕಳ ಹೈನುಗಾರಿಕೆಯಲ್ಲಿ ತೊಡಗಿದ ಗೊಲ್ಲರು ಬೇರೆ ಬೇರೆ ಸಮುದಾಯದವರು. ಆಕಳ ಹೈನುಗಾರಿಕೆಯನ್ನು ಸೂಚಿಸುವ ೧೭೧ ಗ್ರಾಮಗಳು ಕರ್ನಾಟಕದಲ್ಲಿವೆ.
    (ಉದಾ: ಗೋನಾಳ, ಗೋಹಟ್ಟಿ, ಗೋಕಾವಿ ಇತ್ಯಾದಿ.
    ಟಿಪ್ಪಣಿ: ಗೋಗಾವ ಇದು ಗೋಕಾವಿಯಾಗಿ ಮಾರ್ಪಟ್ಟು, ತನ್ನಂತರ ಬ್ರಿಟಿಶ್ ಕಾಲದಲ್ಲಿ ಗೋಕಾಕ ಎಂದು ಬದಲಾವಣೆಯಾಗಿದೆ).

    ಕರ್ನಾಟಕದ ಹೊರಗೂ ಸಹ, ಈ ಸ್ಥಳನಾಮಗಳು ದೊರೆಯುತ್ತಿದ್ದು, ‘ಗೋವಾ’ ಇದಕ್ಕೆ ಉತ್ತಮ ಉದಾಹರಣೆ.
    ಮಹಿಷ ಕುಲದ ಗ್ರಾಮಗಳು ಮಹಾರಾಷ್ಟ್ರ, ಕರ್ನಾಟಕ ಹಾಗು ಆಂಧ್ರಪ್ರದೇಶದ ದೊಡ್ಡ ಭಾಗವನ್ನು ವ್ಯಾಪಿಸಿಕೊಂಡಿವೆ. ಆಂಧ್ರಪ್ರದೇಶದಲ್ಲಿಯ ‘ಎಮ್ಮಿಗನೂರು’ ಪ್ರಸಿದ್ಧ ಸ್ಥಳ. ಅದರಂತೆ, ಮಹಾರಾಷ್ಟ್ರದಲ್ಲಿಯೂ ಸಹ ‘ಮ್ಹೈಸಾಳ’ ಮೊದಲಾದ ಹೆಸರಿನ ಗ್ರಾಮಗಳಿವೆ. ಕರ್ನಾಟಕದ ಪಶ್ಚಿಮೋತ್ತರ ಭಾಗವನ್ನು ಹಾಗು ಮಹಾರಾಷ್ಟ್ರದ ದಕ್ಷಿಣ ಭಾಗವನ್ನು ಮಹಿಷಮಂಡಲ ಎಂದು ಕರೆಯಲಾಗುತ್ತದೆ.

    ಮಾತೃಸೈನ್ಯವು ಆಕಳ ಹೈನುಗಾರಿಕೆಯ ಗೊಲ್ಲ ಕುಲದವರಿಗೆ ಹಾನಿ ಮಾಡದೆ, ಎಮ್ಮೆಯ ಹೈನುಗಾರಿಕೆಯಲ್ಲಿ ತೊಡಗಿಕೊಂಡ ಮಹಿಷ ಕುಲದವರನ್ನು ಸಂಹರಿಸಲು ಕಾರಣವೇನು? ಬಹುಶಃ, ಆರ್ಯ ಜನಾಂಗದವರಿಗೂ, ಮಾತೃಪ್ರಧಾನ ಆರ್ಯೇತರ ಜನಾಂಗದವರಿಗೂ ಒಪ್ಪಂದವಾಗಿರುವ ಸಾಧ್ಯತೆಗಳಿವೆ!

    ಕನ್ನರು, ಕರರು, ಶಿರರು, ಬಂಕರು, ಅಂಕರು

     

    ಕನ್ನರು, ಕರರು, ಶಿರರು, ಬಂಕರು, ಅಂಕರು

    ಕನ್ನ ಜನಾಂಗದಿಂದಲೇ, ಈ ನಾಡಿಗೆ ಕಂನಾಡು (=ಕರ್ನಾಟಕ) ಎನ್ನುವ ಹೆಸರು ಬಂದಿತು; ಇವರ ನುಡಿಯೇ ಕಂನುಡಿ ಎಂದು ಕೀರ್ತಿಶೇಷ ಶಂ. ಬಾ. ಜೋಶಿಯವರು ಸಿದ್ಧ ಮಾಡಿದ್ದಾರೆ. ‘ಕನ್ನ’ ಪದದಿಂದ ಪ್ರಾರಂಭವಾಗುವ ೧೬೯ ಸ್ಥಳನಾಮಗಳು ಕರ್ನಾಟಕದಲ್ಲಿವೆ. ಥಟ್ಟನೆ ನೆನಪಾಗುವದು ‘ಕನ್ನಂಬಾಡಿ’. ಇತರ ಕೆಲವು ಉದಾಹರಣೆಗಳೆಂದರೆ: ಕಣಕುಂಬಿ, ಕಣಗಲಿ, ಕಣಸೋಗಿ, ಕಣ್ಣಾಟ, ಕನ್ನೂರು, ಕನವಳ್ಳಿ, ಕನಮಡಿ, ಕನ್ನಡಗಿ, ಕನ್ನಸಂದ್ರ, ಖನಗಾವಿ, ಖನ್ನೂರು, ಖನಟ್ಟಿ, ಖನಪೇಠ ಇತ್ಯಾದಿ. ಕರ್ನಾಟಕದ ಹೊರಗೆ, ಮಹಾರಾಷ್ಟ್ರದಲ್ಲಿಯೂ ಸಹ ಕನ್ನಡ, ಕಾನ್ಹೇರಿ ಮೊದಲಾದ ಊರುಗಳಿವೆ.

    ಶ್ರೀ ಶ್ರೀನಿವಾಸ ಕಟ್ಟಿಯವರು ಒಂದು ಸ್ವಾರಸ್ಯಕರ ಸಂಗತಿಯನ್ನು ತಿಳಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಕನ್ನಡ ಎನ್ನುವ ಊರಿದೆ. ಇಲ್ಲಿಯ ಮೂಲನಿವಾಸಿಗಳು ಕನ್ನಡವನ್ನು ಮಾತನಾಡುತ್ತಾರೆ. ಆದರೆ, ಅತ್ಯಂತ ಹಿಂದುಳಿದ ಸ್ಥಿತಿಯಲ್ಲಿ ಇರುವ ಈ ಸಮುದಾಯಕ್ಕೆ, ತಾವಾಡುವ ಕನ್ನಡ ಭಾಷೆಯು ಒಂದು ರಾಜ್ಯಭಾಷೆ ಎನ್ನುವದೇ ತಿಳಿಯದು!

    ವರಕವಿ ಬೇಂದ್ರೆಯವರು ತಮ್ಮ ಒಂದು ಕವನದಲ್ಲಿ
    “ ಕನ್ನಡ ನುಡಿದಿತು ಕನ್ನಡಹಕ್ಕಿ, ಕನ್ನಡವೆಂದಿತು ಆ ಗೋದೆ,
    ಕಾವೇರಿಯು ತಂಪಾಯಿತು, ಕನ್ನಡ ಗಾಳಿಯು ಉಸಿರಿತು ಈ ಬೋಧೆ ”
    ಎಂದು ಹೇಳುವಾಗ, ಅವರು ಗೋದಾವರಿಯ ದಂಡೆಯ ಮೇಲಿರುವ ಈ ‘ಕನ್ನಡ’ ಗ್ರಾಮವನ್ನು refer ಮಾಡಿದ್ದಾರೆ.

    ಉತ್ತರ ಮಹಾರಾಷ್ಟ್ರ, ಗುಜರಾತ ಹಾಗು ರಾಜಸ್ಥಾನವನ್ನು ಒಳಗೊಂಡ ಒಂದು ಪ್ರದೇಶಕ್ಕೆ ಒಂದು ಕಾಲದಲ್ಲಿ
    “ ಖಾನದೇಶ “ ಎಂದು ಕರೆಯಲಾಗುತ್ತಿತ್ತು. ಈ ಹೆಸರು ಯಾವದೇ “ಖಾನ್” ನಿಂದಾಗಿ ಬಂದಿದ್ದಲ್ಲ.
    ‘ಕನ್ನದೇಶ’ ವೇ, ‘ಆರೇ’ರ ಬಾಯಿಯಲ್ಲಿ ‘ಖಾನದೇಶ’ವಾಯಿತು. “ಕನ್ನ”ರು “ಖನ್ನಾ” ಆದರು. ಆದುದರಿಂದ, ಕೆಲವು ವರ್ಷಗಳ ಹಿಂದಿನ superstar ‘ರಾಜೇಶ ಖನ್ನಾ’ ನಿಜವಾಗಿಯೂ ‘ರಾಜೇಶ ಕನ್ನ’, ಅಂದರೆ ಕನ್ನಡಿಗ! ಕನ್ನಡಿಗರೆಲ್ಲರೂ ಇದಕ್ಕಾಗಿ ಹೆಮ್ಮೆಪಟ್ಟುಕೊಳ್ಳಬೇಕೊ ಅಥವಾ ಕನ್ನಡಿಗರ metamorphosisಗಾಗಿ ಮರಗಬೇಕೊ?—ಕನ್ನೇಶ್ವರನೇ ಹೇಳಬೇಕು!

    ಅಷ್ಟೇಕೆ, ಯಾವ ದೇವನಿಗೆ ಭಾರತೀಯರೆಲ್ಲರೂ “ತಮ್ ವಂದೇ ಜಗದ್ಗುರುಮ್ ” ಎಂದು ಪೂಜಿಸುತ್ತಾರೊ, ಆ ಕೃಷ್ಣನೇ ‘ಕನ್ಹೈಯಾ(=ಕನ್ನಯ್ಯಾ)’ ಅಂದರೆ ಕನ್ನಡಿಗನಲ್ಲವೇ!
    (ಮಲೆನಾಡಿನಲ್ಲಿ ಹಿಂದುಳಿದ ಸಮುದಾಯದ ವ್ಯಕ್ತಿಗಳ ಹೆಸರು ‘ಕನ್ನೇಗೌಡ’ ಇತ್ಯಾದಿಯಾಗಿ ಇರುವದನ್ನು ಗಮನಿಸಿ.)
    ಅನೇಕ ಆರ್ಯಭಾಷೆಗಳಲ್ಲಿ ಕನ್ನಡ ಪದಗಳು ಸಿಗುತ್ತವೆ. ಉದಾಹರಣೆಗೆ ಮರಾಠಿಯಲ್ಲಿ ಇರುವ ‘ಚಾಂಗಲಾ(=ಒಳ್ಳೆಯವನು)’ ಈ ಪದದ ಮೂಲವಾದ ಚಾಂಗು ಪದವು ಕನ್ನಡ ಪದ. ಇಂದಿಗೂ ಚಾಂಗದೇವನು ಮಹಾರಾಷ್ಟ್ರದಲ್ಲಿ ಆರಾಧಿಸಲ್ಪಡುತ್ತಿರುವ ಒಬ್ಬ ಯೋಗಿಯಾಗಿದ್ದಾನೆ. ಆದರೆ ಸದ್ಯಕ್ಕೆ ಕನ್ನಡದಿಂದಲೇ ಈ ಶಬ್ದ ಮರೆಯಾಗಿದ್ದರಿಂದ, ಚಾಂಗು ಇದು ಮರಾಠಿ ಪದವೆನ್ನುವ ಭ್ರಮೆಯಲ್ಲಿ ಕನ್ನಡಿಗರಿದ್ದಾರೆ.

    ಕನ್ನ ಸಮುದಾಯದಂತೆ, ಐತಿಹಾಸಿಕವಾದ ಮತ್ತೊಂದು ಸಮುದಾಯವೆಂದರೆ ‘ಕರ’ ಎನ್ನುವ ಸಮುದಾಯ. ರಾಮಾಯಣದಲ್ಲಿ ಶ್ರೀರಾಮಚಂದ್ರನಿಂದ ಹತರಾದ ರಾಕ್ಷಸರು ಖರ ಹಾಗು ದೂಷಣರು. ಇಲ್ಲಿ ಖರ ಎಂದರೆ ‘ಕರ’ ಸಮುದಾಯಕ್ಕೆ ಸೇರಿದ ವ್ಯಕ್ತಿ. ಪಶ್ಚಿಮ ಬಂಗಾಲದಲ್ಲಿರುವ ಪ್ರಸಿದ್ಧ ಪಟ್ಟಣ ಖರಗಪುರವು ಈ ಕರ ಸಮುದಾಯದ ಒಂದು ಕಾಲದ ವಾಸಸ್ಥಾನ.

    ಕರ ಪದದಿಂದ ಪ್ರಾರಂಭವಾಗುವ ೭೭ ಗ್ರಾಮಗಳು ಹಾಗು ಗರ ಪದದಿಂದ ಪ್ರಾರಂಭವಾಗುವ ೨೮ ಗ್ರಾಮಗಳು, ಒಟ್ಟಿನಲ್ಲಿ ೧೦೫ ಗ್ರಾಮಗಳು ಕರ್ನಾಟಕದಲ್ಲಿವೆ. ಉದಾಹರಣೆಗಳು: ಕರಗುಪ್ಪಿ, ಕರಜಗಿ, ಕರಮಡಿ, ಕರಹರಿ, ಕರಬೈಲು, ಕರಗೂರು, ಕರಗೋಡು, ಕರಸುಳ್ಳಿ, ಕರಚಖೇಡ, ಕರಂಬಾಳ, ಕರಗಾವಿ, ಗರಗ,ಗರಗದಕಟ್ಟೆ, ಗರಗದಪಲ್ಲಿ ಇತ್ಯಾದಿ.

    ಕರ್ನಾಟಕದ ಹೊರಗೆ, ಮಹಾರಾಷ್ಟ್ರದಲ್ಲಿ ಕರ್ಹಾಡ(=ಕರಹಾಡ), ಕರ್ಜತ್ತ(=ಕರಜತ್ತ) ಮೊದಲಾದ ಪಟ್ಟಣಗಳಿವೆ.
    ಅಷ್ಟೇಕೆ, ಕೊಲ್ಲಾಪುರದ(=ಕೋಲಾಪುರದ), ದೇವಿ ಮಹಾಲಕ್ಷ್ಮಿಗೆ “ ಕರವೀರ ನಿವಾಸಿನಿ” ಎಂದೇ ಕರೆಯಲಾಗುತ್ತಿದೆ.

    ಕರ್ನಾಟಕದಲ್ಲಿಯೂ ಸಹ ಕರ ಹಾಗೂ ಕರಕ ಈ ಪದಗಳ ಸಂಬಂಧಿಪದಗಳು ಸಿಗುತ್ತವೆ. ಉದಾಹರಣೆಗೆ: ಕರಕರೆಡ್ಡಿ, ಕರಕಗೋಳ ಇತ್ಯಾದಿ. ಕರಕ ಪದವೇ ಮಾರ್ಪಟ್ಟು ಖರಗವಾಗಿ, ತನ್ನಂತರ “ ಖರ್ಗೆ ” ಆಗಿದೆ. ಕರ್ನಾಟಕದ ಮಾಜಿ ಮಂತ್ರಿ ಖರ್ಗೆಯವರು ಮೂಲತಃ “ಕರಕ”ರು. ಆರೇರ ಬಾಯಿಯಲ್ಲಿ ಅವರು ಖರ್ಗೆ ಆದರು. ಅದರಂತೆ ಈ ಕರಕರು “ಗರಗ” ಸಹ ಆಗಿ ಮಾರ್ಪಟ್ಟಿದ್ದಾರೆ. ಧಾರವಾಡದ ಹತ್ತಿರ ಗರಗ ಎನ್ನುವ ಹಳ್ಳಿಯಿದ್ದು ಅದು ಮೂಲತಃ ಕರಕವೇ ಆಗಿದೆ. ತನ್ನಂತರ ಈ ಗರಗ ಪದದಿಂದ ಘಾರಗಿ ಎನ್ನುವ ಪದ ಉತ್ಪನ್ನವಾಯಿತು. ಘಾರಗಿ ಎನ್ನುವ ಅಡ್ಡ ಹೆಸರಿನ ಅನೇಕರು ಕರ್ನಾಟಕದಲ್ಲಿದ್ದಾರೆ.

    ಕರ್ನಾಟಕದ ಹೊರಗೂ ಸಹ ಇಂತಹ ಅನೇಕ ಸ್ಥಳಗಳಿದ್ದು, ಆ ಸ್ಥಳಗಳು ಈ ಆದಿವಾಸಿಗಳ ಒಂದು ಕಾಲದ ನಿವಾಸಗಳೇ ಆಗಿದ್ದವು. ಆರೇರ(=ಆರ್ಯರ) ವಿರುದ್ಧ ನಡೆದ ಹೋರಾಟದಲ್ಲಿ ಸೋತು ಹೋದ ಈ ಸಮುದಾಯಗಳು, ಆರ್ಯಭಾಷೆಯನ್ನು , ಆರ್ಯಸಂಸ್ಕೃತಿಯನ್ನು ಅನುಸರಿಸುವದು, ನಕಲು ಮಾಡುವದು ಅನಿವಾರ್ಯವಾಗಿತ್ತು. ಆದರೆ, ಆರ್ಯರೂ ಸಹ ಅನಾರ್ಯ ಸಂಸ್ಕೃತಿಯ philosophyಯನ್ನು, ಅನೇಕ ರೂಢಿಗಳನ್ನು assimilate ಮಾಡಿಕೊಂಡರು. (ಇದನ್ನೇ ಶಂ.ಬಾ. ಜೋಶಿಯವರು ತಮ್ಮ ಗ್ರಂಥಗಳಲ್ಲಿ ತೋರಿಸಿದ್ದಾರೆ). ಅನೇಕ ಕನ್ನಡ ಪದಗಳನ್ನು ಸಂಸ್ಕೃತವು ಸ್ವೀಕರಿಸಿದೆ. (ಶಂ. ಬಾ. ಜೋಶಿಯವರು ಇಂತಹ ಅನೇಕ ಪದಗಳನ್ನು ತೋರಿಸಿದ್ದಾರೆ. ಉದಾಹರಣೆಗೆ ಕರ ಎನ್ನುವ ಸಂಸ್ಕೃತ ಪದ ಹಾಗು ಪಟ ಎನ್ನುವ ಕನ್ನಡ ಪದಗಳ ಜೋಡಣೆಯಿಂದ ಕರ್ಪಟ(=ಹತ್ತಿ) ಎನ್ನುವ ಪದ ರೂಪಿತವಾಗಿದೆ. ಕರ್ಪಟ=ಕಪಡಾ=ಅರಿವೆ).

    ಅರ್ಯ ಸಮುದಾಯಗಳ ಒತ್ತಡ ಹೆಚ್ಚಿದಂತೆ, ಕನ್ನ, ಕರ ಮೊದಲಾದ ಅನೇಕ ಮೂಲ ಸಮುದಾಯಗಳು ದಕ್ಷಿಣಕ್ಕೆ ಗುಳೇ ಹೋದವು. ಭಾಷೆಯಲ್ಲಿ , ಹೆಸರಿನಲ್ಲಿ ತಮ್ಮ ಮೂಲಸ್ವರೂಪವನ್ನು ಉಳಿಸಿಕೊಂಡವು. ಚಲಿಸದೇ ಅಲ್ಲಿಯೇ ಉಳಿದಂತಹ ಜನಭಾಗಗಳು, ಶರಣಾಗತರಾದ ಸಮುದಾಯಗಳು ಆರ್ಯೀಕರಣವನ್ನು ಒಪ್ಪಿಕೊಂಡವು.

    ಭಾರತದ ತುಂಬೆಲ್ಲ ದೊರೆಯುವ ಇಂತಹ ಮತ್ತೊಂದು ಜನಾಂಗ ಸೂಚಕ ಸ್ಥಳನಾಮವೆಂದರೆ “ ಶಿರ ”. ಕರ್ನಾಟಕದಲ್ಲಿ ಇಂತಹ ೯೯ ಊರುಗಳಿವೆ. ಉದಾಹರಣೆಗಳು: ಶಿರಸಿ, ಶಿರಾಳ, ಶಿರೋಳ, ಶಿರಹಟ್ಟಿ, ಶಿರಸಂಗಿ, ಶಿರಗುಪ್ಪಿ, ಶಿರಕೋಳ, ಶಿರಗುಂಜಿ, ಶಿರಗೋಡ, ಶಿರಡಾ, ಶಿರಡಿ, ಶಿರಡೋಣ, ಶಿರನಾಳ, ಶಿರಪಟ್ಣ, ಶಿರಬಡಗಿ, ಶಿರಡನಹಳ್ಳಿ, ಶಿರಗೂರ, ಶಿರಾ ಇತ್ಯಾದಿ.

    ಉತ್ತರ ಪ್ರದೇಶದಲ್ಲಿ ಚಂಡೌಲ ಜಿಲ್ಲೆಯಲ್ಲಿ ಸಹ ಸಿರಸಿ ಎನ್ನುವ ಒಂದು ಊರಿದೆ. ಆಂಧ್ರಪ್ರದೇಶದಲ್ಲಿ ಸಿರಸಿಲ್ಲ ಎನ್ನುವ ಗ್ರಾಮವಿದೆ. ಮಹಾರಾಷ್ಟ್ರದಲ್ಲಿ ಇರುವ ಶಿರಡಿ ಗ್ರಾಮವಂತೂ ಅಲ್ಲಿ ಆಗಿ ಹೋದ ಸಾಯಿಬಾಬಾರಿಂದಾಗಿ ತುಂಬಾ ಪ್ರಸಿದ್ಧವಾಗಿದೆ. ಮಹಾರಾಷ್ಟ್ರದಲ್ಲಿ ಶಿರಪುಂಜಿ ಎನ್ನುವ ಊರಿದೆ. ಆಸಾಮಿನಲ್ಲಿರುವ ಚಿರಾಪುಂಜಿಯು ಮೂಲತಃ ಶಿರಾಪುಂಜಿಯೆ?—ಎನ್ನುವ ಅನುಮಾನ ಹುಟ್ಟುತ್ತದೆ. ಆದರೆ ಚಿರಾಪುಂಜಿಯ ಮೂಲ ಹೆಸರು ಬೇರೆಯೇ ಆಗಿದ್ದು, ಬ್ರಿಟಿಶ್ ಆಡಳಿತದ ಕಾಲದಲ್ಲಿ ಆ ಗ್ರಾಮಕ್ಕೆ ಚಿರಾಪುಂಜಿ ಎನ್ನುವ ಹೆಸರು ಬಂದಿರುವದರಿಂದ, ಈ ವಿಷಯದಲ್ಲಿ, ಹೆಚ್ಚಿನ ಮಾಹಿತಿ ದೊರೆಯದೆ ಏನನ್ನೂ ಹೇಳಲಾಗುವದಿಲ್ಲ.

    ಕರ್ನಾಟಕದಲ್ಲಿ ಇರುವ ೯೯ ಗ್ರಾಮಗಳಲ್ಲಿ ಅತಿ ಹೆಚ್ಚಿನ ಶಿರಸೂಚಕ ಗ್ರಾಮಗಳು ಉತ್ತರ ಕನ್ನಡ ಜಿಲ್ಲೆಯಲ್ಲಿವೆ. (೧೬). ಅನಂತರದ ಸ್ಥಾನ ದೊರೆಯುವದು ಬೆಳಗಾವಿ ಜಿಲ್ಲೆಗೆ. (೧೫).

    ಬಂಕ ಸೂಚಕ ೧೭ ಸ್ಥಳನಾಮಗಳು ಮಾತ್ರ ಕರ್ನಾಟಕದಲ್ಲಿವೆ. ಉದಾಹರಣೆಗಳು: ಬಂಕನಕಟ್ಟೆ, ಬಂಕನಹಳ್ಳಿ, ಬಂಕನಾಳ, ಬಂಕನೇರಿ, ಬಂಕಸಾನ, ಬಂಕಾಪುರ, ಬಂಗಣೆ, ಬಂಗವಾಡಿ ಇತ್ಯಾದಿ. ಅದಾಗ್ಯೂ ಈ ಜನಾಂಗಕ್ಕೆ ಬಹಳ ಮಹತ್ವವಿದೆ. ಪಶ್ಚಿಮ ಬಂಗಾಲದಲ್ಲಿ ಮಲ್ಲರ ರಾಜಧಾನಿಯಾದ ಬಿಷ್ಣುಪುರ ಇರುವದು ಬಂಕೂರು ಎನ್ನುವ ಜಿಲ್ಲೆಯಲ್ಲಿ. ಬಂಕೂರು ಎಂದರೆ ಬಂಕರ ಊರು. ಅಂದ ಮೇಲೆ ಬಂಗಾಲ ಎನ್ನುವದು ಬಂಕಾಲ ಅರ್ಥಾತ್ ಬಂಕರ ಹಾಳ ಎನ್ನುವ ಪದದಿಂದ ಬಂದಿರುವದು ಸಹಜವಾಗಿದೆ. ಪೌರಾಣಿಕ ಕಾಲದಲ್ಲಿ ಇಡೀ ಬಂಗಾಲವೇ(=ಪಶ್ಚಿಮ ಬಂಗಾಲ+ಬಂಗ್ಲಾ ದೇಶ) ಈ ಬಂಕರ ಪ್ರದೇಶವಾಗಿದ್ದು, ಆರ್ಯರ ಆಕ್ರಮಣದ ನಂತರ ಅರ್ಯೀಕರಣಗೊಂಡಿತು. ಹೀಗಾಗಿ ಬಂಗ ದೇಶವು ವಂಗ ದೇಶವಾಗಿ ಮಾರ್ಪಾಡುಗೊಂಡಿತು.

    ಬಂಕ ಪದದಿಂದ ವಂಗ ಪದ ಬಂದಂತೆಯೇ, ಅಂಕ ಪದದಿಂದ ಅಂಗ ಪದ ಹುಟ್ಟಿಕೊಂಡಿತು. ಮಹಾಭಾರತದಲ್ಲಿ ಬರುವ ಅಂಗದೇಶಕ್ಕೆ ಕರ್ಣನು ರಾಜನಾಗಿದ್ದನು. ಅಂಕ ಪದದಿಂದ ಪ್ರಾರಂಭವಾಗುವ ೬೯ ಊರುಗಳು ಕರ್ನಾಟಕದಲ್ಲಿವೆ. ಉದಾಹರಣೆಗೆ: ಅಂಕೋಲಾ, ಅಂಕಲಗಿ, ಅಂಕನಳ್ಳಿ, ಅಂಕನಾಥಪುರ, ಅಂಕಲಿ, ಅಂಕಾಪುರ, ಅಂಕತಟ್ಟಿ ಇತ್ಯಾದಿ. ಓಡಿಸಾ ರಾಜ್ಯದಲ್ಲಿ ಅಂಗುಲ ಎನ್ನುವ ಪಟ್ಟಣವಿದೆ. ಅಂಗಜನ ಹೆಸರಿನ ಮೂರು ಹಳ್ಳಿಗಳು ಕರ್ನಾಟಕದಲ್ಲಿವೆ. ಅಂಗಜನೆಂದರೆ ವಾನರ ರಾಜನಾದ ವಾಲಿಯ ಮಗನು ಎನ್ನುವದನ್ನು ಗಮನಿಸಬೇಕು.

    ಈ ರೀತಿಯಾಗಿ ಭಾರತದ ತುಂಬೆಲ್ಲ ಹರಡಿದ ಅಥವಾ ಚಲಿಸಿದ ಮೂಲಜನಾಂಗಗಳ ಮಾಹಿತಿಯು ಈ ಸ್ಥಳನಾಮಗಳ ಮೂಲಕ ಲಭ್ಯವಾಗುತ್ತದೆ.

    Sep 9, 2023

    ಶಾಸನಗಳು

     ಸಂಘಜೀವಿಯಾದ ಮಾನವನು ಅಲೆಮಾರಿ ಜೀವನಕ್ಕೆ ಇತಿಶ್ರೀ ಹಾಡಿ ನೆಲಸುಜೀವವನ್ನು ಆರಂಭಿಸಿ ಹಂತ ಹಂತವಾಗಿ ಸಮಾಜವನ್ನು ಬೆಳೆಸುತ್ತಾ ಹೋದನು. ತನ್ನ ಮತ್ತು ಸಮಾಜದ ಪುರೋಭಿವೃದ್ಧಿಗಾಗಿ ಅನೇಕಾನೇಕ ಕಟ್ಟುಪಾಡುಗಳನ್ನು, ವಿಧಿ ವಿಧಾನಗಳನ್ನು, ನೀತಿ ನಿಯಮಗಳನ್ನು ರೂಪಿಸಿಕೊಳ್ಳತ್ತಾ ಬಂದನು. ತನ್ನ ಮೇಧಾಶಕ್ತಿಯಿಂದ ಜೀವನವು ಸುಲಲಿತವೂ ಸುಂದರವೂ ಆಗುವಂತೆ ಸಾಧನೆಗಳ ಸರಮಾಲೆಯನ್ನೇ ನಿರ್ಮಿಸಿದನು. ಈ ಎಲ್ಲವನ್ನೂ ಅನೇಕಾನೇಕ ಮಾಧ್ಯಮಗಳ ಮೂಲಕ ದಾಖಲಿಸುತ್ತಾ ಬಂದನು. ಆ ದಾಖಲೆಗಳಲ್ಲಿ ಪ್ರಾಥಮಿಕವೂ ಅಧಿಕೃತವೂ ಆದ ದಾಖಲೆಗಳೇ ಶಾಸನಗಳು.


    ನಾಡಿನ ಸಾಂಸ್ಕೃತಿಕ, ಐತಿಹಾಸಿಕ, ಸಾಮಾಜಿಕ, ಸಾಹಿತ್ಯಿಕ, ಮಹತ್ವಗಳನ್ನು ಸಾರುವ ಅಧಿಕೃತ ದಾಖಲೆಗಳೆಂದರೆ ಶಾಸನಗಳು. ಮಾನವನ ಇತಿವೃತ್ತಗಳಗೆ ಕನ್ನಡಿ ಹಿಡಿದಂತಿರುವ ಶಾಸನಗಳು ವಸ್ತುವೈವಿಧ್ಯತೆಯಿಂದ ನಮ್ಮನ್ನು ಚಕಿತಗೊಳಿಸುತ್ತಿವೆ. ಆಯಾಯಾ ಕಾಲದ ಎಲ್ಲರಂಗಗಳ ನಾನಾ ಮಜುಗಳನ್ನು ಪ್ರತಿಫಲಿಸುತ್ತಿವೆ. ತಮಿಳುನಾಡನ್ನು ಬಿಟ್ಟರೆ ಅತಿ ಹೆಚ್ಚು ಸಂಖ್ಯೆಯ ಶಾಸನಗಳು ದೊರಕಿರುವುದು ಕರ್ನಾಟಕದಲ್ಲೆ. ಕರ್ನಾಟಕದ ಸಂಸ್ಕೃತಿಯ ಹಲವು ಮುಖಗಳನ್ನೂ, ಒಳಪದರುಗಳನ್ನೂ ಪರಿಚಯ ಮಾಡಿಕೊಡುತ್ತವೆ. ಕರ್ನಾಟಕದ ಐತಿಹಾಸಿಕ ಪರಂಪರೆಯ ಚಿತ್ರಣವನ್ನು ಕೊಡುವ ಮುಖ್ಯ ಮಾಹಿತಿ ಕೋಶವಾಗಿದ್ದು, ವಾಸ್ತವ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತಿವೆ.  ಡಾ| ಚಿದಾನಂದಮೂರ್ತಿಯವರು ಹೇಳಿರುವಂತೆ ‘ಶಾಸನಗಳು ಕನ್ನಡ ಸಾಹಿತ್ಯದ ತಲಕಾವೇರಿ.
    ಸಾಹಿತ್ಯ ಕೃತಿಗಳಲ್ಲಿ ಸಾಂಸ್ಕೃತಿಕ ಮಾಹಿತಿಗಳು ಕೇವಲ ಸೂಚನೆಯ ರೂಪದಲ್ಲಿರುತ್ತವೆ. ಶಾಸನಗಳಿರುವಂತೆ ಸಮೃದ್ಧವಾಗಿ ದೊರೆಕುವುದಿಲ್ಲ, ಶಾಸನಗಳ ಮೇಲಿನ ಬರಹಗಳಂತೆಯೇ ಅದರ ಮೇಲಿರುವ ಶಿಲ್ಪಗಳೂ ಸಾಂಸ್ಕೃತಿಕ ಅಧ್ಯಯನಕ್ಕೆ ಪೋಷಕವಾಗಿವೆ. ಸುಂದರವಾದ ಕನ್ನಡದ ಬಿಡಿಪದ್ಯಗಳು ಕ್ರಿ.ಶ.700ರ ಹೊತ್ತಿಗೆ ಶಾಸನಗಳಲ್ಲಿ ಕಾಣಿಸಿಕೊಂಡು ಪಂಪನ ಕಾವ್ಯಗಳ ಮೂಲಕ ಕನ್ನಡ ಸಾಹಿತ್ಯವು ಉತ್ತುಂಗ ಶಿಖರವನ್ನೇರುವಂತೆ ಮಾಡಿದೆ. ಕ್ರಿ.ಶ.700ರ ಬಾದಾಮಿಯ ಶಾಸನದ ಕಪ್ಪೆ ಅರಭಟ್ಟನ ತ್ರಿಪದಿಯು ಇದಕ್ಕೆ ಸಾಕ್ಷಿಯಾಗಿದೆ.

          ಸಾಧುಗೆ ಸಾಧು, ಮಾಧುರ್ಯಂಗೆ
    ಮಾಧುರ್ಯಂ, ಬಾದಿಪ್ಪ ಕಲಿಗೆ
    ಕಲಿಯುಗ ವಿಪರೀತನ್ ಮಾಧವನೀತಲ್ ಪೆರನಲ್ಲ||
    ಹಲವು ಶಾಸನಗಳು ಕವಿಚಕ್ರವರ್ತಿನಂತಹ ಶ್ರೇಷ್ಟ ಕವಿಗಳು ಬರೆದಿದ್ದಾರೆ. ರನ್ನನ ಸ್ವಹಸ್ತಾಕ್ಷರಗಳು ಶ್ರವಣಬೆಳ್ಗೊಳದ ಚಿಕ್ಕ ಬೆಟ್ಟದ ಮೆಲೆ ಇಂದಿಗೂ ಇದೆ. ಹಂಪಿಯಲ್ಲಿ ದೊರೆತಿರುವ ಒಂದು ಶಾಸನ ಚಾಮರಸ ಕವಿ 1430 ಸುಮಾರಿನಲ್ಲಿ ವಾಸವಾಗಿದ್ದ ಪ್ರದೇಸವನ್ನು ಗುರುತಿಸಲು ಸಹಾಯಕವಾಗಿದೆ. ಹೊಯ್ಸಳರ ಕಾಲದ ಜಕಣಾಚಾರಿ, ಡಕಣಾಚಾರಿ, ಮಲ್ಲಿತಮ್ಮರಂತ ಶಿಲ್ಪಿಗಳ ಹೆಸರು ಅವರು ಕೆತ್ತಿದ ವಿಗ್ರಹಗಳ ಪಾದ ಪೀಠಗಳ ಮೇಲೆ ದೊರೆಯುವುದರಿಂದ ತಿಳಿದು ಬರುತ್ತದೆ. ಜಿನವಲ್ಲಭನು ತನ್ನ ಅಣ್ಣನ ಹೆಸರಿನ್ನು ಕಟ್ಟಿಸಿದ ಕವಿತಾಗುಣಾರ್ಣವ ತಟಾಕ ಎಂಬ ಕೆರೆ ಇಂದಿಗೂ ಇದೆ. ಈ ವಿಚಾರವನ್ನು ಹೇಳುವ ಆಂಧ್ರದ ಕರೀಂನಗರ ಜಿಲ್ಲೆಯ ಕುರಿಕ್ಯಾಲು ಶಾಸನ ಪಂಪನ ಇತಿವೃತ್ತಾಂತದ ಬಗೆಗೂ ಮಾಹಿತಿಯನ್ನು ನೀಡುತ್ತದೆ. ಇದು ಪ್ರಸ್ತರ ಶಾಸನಗಳೆಂದು ಕರೆಯುವ ಬಂಡೆಶಾಸನಕ್ಕೆ ಉತ್ತಮ ಉದಾಹರಣೆಯಾಗಿದೆ.
    ಕರ್ನಾಟಕದ ಹಿಂದಿನ ಶಿಕ್ಷಣ ವ್ಯವಸ್ಥೆಯ ವಿಸ್ತಾರವಾದ ಪರಿಚಯ ಶಾಸನಗಳಿಂದ ದೊರೆಕುತ್ತದೆ. ಅಗ್ರಹಾರ, ಮಠ, ದೇವಾಲಯಗಳಲ್ಲಿ ನಡೆಯುತ್ತಿದ್ದ ವಿದ್ಯಾಭ್ಯಾಸಕ್ಕೆ ಶ್ರೀಮಂತರು ಉದಾರವಾಗಿ ದತ್ತಿಗಳನ್ನು ನೀಡಿರುವುದು ಶಾಸನೋಕ್ತವಾಗಿವೆ. ಗುಲ್ಬರ್ಗ ಜಿಲ್ಲೆಯ ನಾಗಾವಿ ಎಂಬಲ್ಲಿದ್ದ ಉನ್ನತ ವಿದ್ಯಾಕೇಂದ್ರಕ್ಕೆ ಹಾಗೆ ದತ್ತಿಗಳನ್ನು ನೀಡಿರುವುದನ್ನು ಅಲ್ಲಿನ ಶಾಸನವು ತಿಳಿಸುತ್ತದೆ. ಹನ್ನೆರಡನೇ ಶತಮಾನದ ಕರ್ನಾಟಕದ ವಿಶ್ವವಿದ್ಯಾನಿಲಯವೆಂದು ಆಧುನಿ ವಿದ್ವಾಂಸರು ಬಣ್ಣಿಸುವ ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವೆಯಲ್ಲಿ ಕೆರೆಯ ಕೋಡಿಯ ಬಳಿ ಇದ್ದ ಕೋಡಿಮಠವೆಂದು ಕರೆಯುತ್ತಿದ್ದ ಕೇದಾರೇಶ್ವರ ದೇವಾಲಯ ಉನ್ನತ ಶಿಕ್ಷಣದ ಕೇಂದ್ರವಾಗಿತ್ತು. ಅಲ್ಲಿ ಶಿಕ್ಷಣವನ್ನು ಪಡೆಯಲು ದೇಶದ ನಾನಾ ಭಾಗಗಳಿಂದ ಶಿಕ್ಷಣಾರ್ಥಿಗಳು ಬರುತ್ತಿದ್ದರು. ಈ ಮಠವು ಕಲಾವಿದರಿಗೆ, ಅನಾಥರಿಗೆ ಆಶ್ರಯ ಸ್ಥಾನವೂ ಅಗಿತ್ತು. ರೋಗಿಗಳಿಗೆ ಆಸ್ಪತ್ರೆಯೂ ಆಗಿ ವೈದ್ಯೋಪಚಾರವನ್ನು ನೀಡುತ್ತಿತ್ತೆಂದು. ಬಳ್ಳಿಗಾವಿ ಶಾಸನವು ತಿಳಿಸುತ್ತದೆ.
    ಶಾಸನಗಳು ಇಂದಿಗೂ ನಮ್ಮ ಗ್ರಾಮೀಣ ಸಮಾಜದಲ್ಲಿ ಜನರೊಡನೆಯೇ ಇವೆ. ಯಾವುದೋ ಒಂದು ಕಾಲದ ರಾಜಕೀಯ ವಿಷಯವನ್ನೋ ಒಂದು ಘಟನೆಯನೋ ಅಥವಾ ಯಾರದೋ ಬಲಿದಾನವನ್ನು ಕುರಿತೋ ಶಾಸನ ಹೇಳುತ್ತಿದ್ದಿರ ಬಹುದು. ಅವುಗಳಲ್ಲಿ ಏನಿದೆಯೆಂಬ ತಿಳುವಳಿಕೆ ಇಲ್ಲದಿದ್ದರೂ, ಅವುಗಳ ಬಗೆಗೆ ತಮ್ಮದೇ ಆದ ಕಥೆಗಳನ್ನು, ವಾದಗಳನ್ನು ಮತ್ತು ಅನೇಕ ಕಲ್ಪನೆಗಳನ್ನು ಜನರು ಹೊಂದಿರುತ್ತಾರೆ. ಎಷ್ಟೋ ಶಾಸನಗಳು, ವೀರಗಲ್ಲು ಮಾಸ್ತಿಕಲ್ಲುಗಳು ಗ್ರಾಮದೇವತೆಗಳಾಗಿ ಕುಲದೈವಗಳಾಗಿ ಮಾರ್ಪಾಟಾಗಿವೆ. ಅವುಗಳ ಬಗೆಗೆ ಜನರಿಗೆ ಭಯಭಕ್ತಿಯಿದೆ. ಆಯಾ ಜನಗಳ ತಿಳಿವಳಿಕೆಗನುಗುಣವಾಗಿ ಅವುಗಳೊಡನೆ ವ್ಯವಹರಿಸುತ್ತಾರೆ. ಒಬ್ಬ ಇತಿಹಾಸಕಾರನಿಗೆ ಅಥವಾ ಅದರ ಬಗೆಗೆ ಜ್ಞಾನವಿರುವವನಿಗೆ ಅವು ಕೇವಲ ಒಂದು ಬರಹದ ಕಲ್ಲು ಆದರೆ ಗ್ರಾಮೀಣರಿಗೆ ಅವರ  ಬದುಕಿನ ಅವಿಭಾಜ್ಯ ಅಂಗವಾಗಿರುತ್ತದೆ. ಅವುಗಳೊಂದಿಗೆ ತಲೆತಲಾಂತರದಿಂದ ಅವಿನಾಭಾವ ಸಂಬಂಧ ಹೊಂದಿರುತ್ತಾರೆ. ಈ ಪರಿಣಾಮವಾಗಿ ಪ್ರತಿಯೊಬ್ಬರೂ ಶಾಸನಗಳನ್ನು ಕುರಿತು ತಮ್ಮದೇ ಆದ ಭಾವನೆಗಳನ್ನು ಬೆಳೆಸಿಕೊಂಡಿರುತ್ತಾರೆ. ಈ ಭಾವನೆಗಳ ಅಧ್ಯಯನ ನಡೆಸಿದರ ಗ್ರಾಮ್ಯ ಸಮಾಜದ ಕಲ್ಪನಾಜಗತ್ತನ್ನು ಪ್ರವೇಶಿಸ ಬಹುದು. ಪೂರ್ವಿಕರ ನಿರ್ಮಾಣಗಳು ಈಗಿನವರಲ್ಲಿ ಹೇಗೆ ಪ್ರಸ್ತುತ-ಅಪ್ರಸ್ತುತವಾಗಿದೆಯೆಂಬ ವಿವರಗಳೂ ದೊರೆಯುತ್ತವೆ. ಗ್ರಾಮೀಣ ಅನಕ್ಷರಸ್ಥರ ಮುಗ್ಧಲೋಕದ ಪರಿಚಯವಾಗುತ್ತದೆ.
    ಕನ್ನಡನಾಡಿನ ಶಾಸನಗಳ ಒಂದು ವೈಶಿಷ್ಟ್ಯವೆಂದರೆ ವೀರಗಲ್ಲುಗಳುಮಾಸ್ತಿಕಲ್ಲುಗಳುಆತ್ಮಾಹುತಿಯ ಕಲ್ಲುಗಳುಸ್ವಾಮಿನಿಷ್ಠೆಗಾಗಿಊರೊಳಿತಿಗಾಗಿದುಷ್ಟಶಿಕ್ಷೆಗಾಗಿಶತ್ರುಗಳೊಡನೆ ಅಥವಾ ಕ್ರೂರಪ್ರಾಣಿಗಳೊಡನೆ ಪರಾಕ್ರಮದಿಂದ ಹೋರಾಡಿ ವೀರಮರಣಹೊಂದಿದ ಕಲಿಗಳ ಸ್ಮಾರಕಗಳನ್ನು ವೀರಗಲ್ಲುಗಳೆನ್ನುತ್ತಾರೆ.
    ಜಿತೇನ ಲಭ್ಯತೇ ಲಕ್ಷೀಮೃತೇ ನಾಪಿ ಸುರಾಂಗನಾ|
    ಕ್ಷಣ ವಿಧ್ವಂಸಿನಿ ಕಾಯೇ ಕಾ ಚಿಂತಾ ಮರಣೇ ರಣೇ||”
    ಯುದ್ಧದಲ್ಲಿ ಹೋರಾಡಿ ಮಡಿದರೆ ಸ್ವರ್ಗಸುರಾಂಗನೆಯರು ಕೈಹಿಡಿದು ಸ್ವರ್ಗಕ್ಕೆ ಕರೆದೊಯ್ಯುತ್ತಾರೆವಿಜಯಿಗಳಾದೆ ಮನ್ನಣೆಯೊಂದಿಗೆ ಲಕ್ಷ್ಮೀ ಲಭಿಸುತ್ತಾಳೆಕ್ಷಣಮಾತ್ರದಲ್ಲಿ ಅಳಿಯುವ ದೇಹಕ್ಕಾಗಿ ಚಿಂತಿಸ ಬೇಕಿಲ್ಲಎಂಬುದು ವೀರಯುಗದ ಬಲವಾದ ನಂಬಿಕೆಯಾಗಿತ್ತುಸಾಮಾನ್ಯವಾಗಿ ವೀರಗಲ್ಲುಗಳು ಹೋರಾಟದಲ್ಲಿ ಮಡಿದ ಯೋಧನನ್ನು ಅಪ್ಸರೆಯರು ಬಂದು ವಿಮಾನದಲ್ಲಿ ಸ್ವರ್ಗಕ್ಕೆ ಕೊಂಡೊಯ್ಯುತ್ತಿರುವ ಶಿಲ್ಪದಿಂದ ಅಲಂಕೃತವಾಗಿರುತ್ತವೆಕೆಳಗೆ ಶಾಸನದ ವಿವರಗಳನ್ನು ಕೊರೆದಿರುವುದು ಬಹುತೇಕ ವೀರಗಲ್ಲುಗಳಲ್ಲಿ ಕಂಡು ಬರುತ್ತವೆವೀರಗಲ್ಲುಗಳಲ್ಲಿ ‘ಶಾಸನಸಹಿತ ವೀರಗಲ್ಲು ‘ಶಾಸನ ರಹಿತ ವೀರಗಲ್ಲುಗಳಿವೆವೀರಗಲ್ಲುಗಳಲ್ಲಿ ಅನೇಕ ಪ್ರಭೇದಗಳೂ ಇವೆರಣರಂಗದಲ್ಲಿ ಕಲಿತನವನ್ನು ಪ್ರದರ್ಶಿಸಿ ಪ್ರಾಣವನ್ನು ಒತ್ತೆಯಿಟ್ಟು ಹೋರಾಡಿದವರಿಗೆ ಹಾಕಿಸುತ್ತಿದ್ದ ‘ಯುದ್ಧ ಬೀರರ ವೀರಗಲು್ಲಗಳು, ‘ತುರು ಎಂದರೆ ಪಶು ಹಸು ಎಂಬ ಅರ್ಥ ಬರುತ್ತದೆಗೋಸಂಪತ್ತು ನಾಡಿನ ಸಮೃದ್ಧಿಯ ಸಂಕೇತವಾಗಿತ್ತುಗೋಗ್ರಹಣವಾದಾಗ ಶತ್ರುವಿನೊಂದಿಗೆ ಹೋರಾಡಿದ ವೀರರಿಗೆ ಹಾಕಿಸುತ್ತಿದ್ದ ‘ತುರುಗೋಳ್ ವೀರಗಲ್ಲುಹೆಣ್ಣು ಮಕ್ಕಳ ಪ್ರಾಣಮಾನಗಳಿಗೆ ಕುತ್ತು ಬಂದಾಗ ತಮ್ಮ ಪ್ರಾಣವನ್ನೇ ಮುಡುಪಿಟ್ಟು ಹೋರಾಡಿದವರಿಗೆ ಹಾಕಿಸುತ್ತಿದ್ದ ‘ಪೆಣ್ಣುಯ್ಯಲ್ ವೀರಗಲ್ಲುಊರಿಗೆ ಯಾವುದೇ ತೆರೆನಾದ ವಿಪತ್ತು ಸಂಭವಿಸಿದರು ಊರುಳಿವಿಗಾಗಿ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಹೋರಾಡಿದ ಕಲಿಗಲಿಗೆ ಹಾಕಿಸುತ್ತಿದ್ದ ‘ಊರುಳಿವು ವೀರಗಲ್ಲು ವಿನೋದಪೌರುಷ ಪ್ರದರ್ಶನದ ದ್ಯೋತಕವಾದಸಪ್ತವ್ಯಸನಗಳಲ್ಲಿ ಒಂದಾದ ಬೇಟೆ ಬಹುತೇಕ
    ವೇಳೆ ಕಾಡು ಪ್ರಾಣಿಗಳ ಉಪಟಳದಿಂದ ರಕ್ಷಿಸುವ ಸಲುವಾಗಿ ನಡೆಯುತ್ತಿತ್ತುಬೇಟೆ ಸಂದರ್ಭದಲ್ಲಿ ಮರಣಹೋದಿದ ಶೂರರಿಗೆಪೌರುಷವನ್ನು ಪ್ರದರ್ಶಿಸಿ ಪ್ರಾಣ ತ್ಯಜಿಸಿದ ತಮ್ಮ ನೆಚ್ಚಿನ ಪ್ರಾಣಿಗಳಿಗೆ ಹಾಕಿಸುತ್ತಿದ್ದ ಶಾಸನಗಳೇ ‘ಬೇಟೆ ವೀರಗಲ್ಲುಗಳು
    ಆತಕೂರು ನಾಯಿ ಶಾಸನ ಇದಕ್ಕೆ ಉತ್ತಮ ಉದಾಹರಣೆಯಾಗಿದೆ.